ಗಂಗಾ ಶುದ್ಧೀಕರಣಕ್ಕೆ ಮತ್ತೊಂದು ಅವಧಿ ಬೇಕಾ? : ಸುಪ್ರೀಂ
ನವದೆಹಲಿ, ಜ. 14: ನರೇಂದ್ರ ಮೋದಿ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಮೊದಲು ಮಾಡಿದ ಕೆಲಸವೆಂದರೆ "ಗಂಗಾ ಆರತಿ" ಪೂಜೆ. ಅಷ್ಟೇ ಅಲ್ಲ, ಸಚಿವ ಸಂಪುಟ ರಚಿಸಿದಾಗ ಗಂಗಾ ಶುದ್ಧೀಕರಣಕ್ಕೆಂದೇ ಗಂಗಾ ಪುನರುಜ್ಜೀವನ ಸಚಿವ ಖಾತೆಯನ್ನು ರಚಿಸಿದ್ದರು. ಇದನ್ನು ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರಿಗೆ ವಹಿಸಿಕೊಟ್ಟಿದ್ದರು.
ಆದರೆ, ನಂತರ ನಿರೀಕ್ಷಿತ ಪ್ರಮಾಣದಲ್ಲಿ ಗಂಗಾ ಶುದ್ಧೀಕರಣ ಕಾಮಗಾರಿ ನಡೆಯಲಿಲ್ಲ. ಆರಂಭದಲ್ಲಿ ಭಾರೀ ಪ್ರಚಾರ ಪಡೆದ ಯೋಜನೆ ನಂತರ ಆಮೆ ವೇಗದಲ್ಲಿ ಮುಂದುವರಿಯಿತು. ಇದರಿಂದ ಕೋಪಗೊಂಡಿದ್ದ ಸುಪ್ರೀಂ ಕೋರ್ಟ್ ಈಗಾಗಲೇ ಒಮ್ಮೆ ಕೇಂದ್ರ ಸರ್ಕಾರಕ್ಕೆ ಚಾಟಿ ಏಟು ಬೀಸಿತ್ತು. ಅದಾಗಿ ಕೆಲವೇ ತಿಂಗಳಿಗೆ ಮತ್ತೆ ತರಾಟೆಗೆ ತೆಗೆದುಕೊಂಡಿದೆ. [ಗಂಗೆಯಲ್ಲಿ ತೇಲುತ್ತಿವೆ ನೂರಾರು ಹೆಣ]
"ಗಂಗಾ ನದಿಯನ್ನು ಇದೇ ಅವಧಿಯಲ್ಲಿ ಮುಗಿಸುತ್ತೀರಾ ಅಥವಾ ಮುಂದಿನ ಅವಧಿಗೂ ಮುಂದುವರಿಸುತ್ತೀರಾ?" ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಗಂಗಾ ಶುದ್ಧೀಕರಣಕ್ಕಾಗಿ ಕಳೆದ 30 ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿದೆ. ಇಲ್ಲಿಯವರೆಗೆ ಸುಮಾರು 2,000 ಕೋಟಿ ರು.ಗಳಿಗೂ ಹೆಚ್ಚು ಹಣ ಖರ್ಚಾಗಿದೆ. ಆದರೆ, ಇನ್ನೂ ಪ್ರಗತಿ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ನ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಕೇಂದ್ರಕ್ಕೆ ಸುಪ್ರೀಂ ಚಾಟಿ]
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ ಪ್ರತಿನಿಧಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ಗಂಗಾ ನದಿಯುದ್ದಕ್ಕೂ 118 ಪಟ್ಟಣಗಳಲ್ಲಿ ಕೊಳಚೆ ನೀರು ಘಟಕಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಹಂತ ಹಂತವಾಗಿ ಕಾಮಗಾರಿ ಕೈಗೊಂಡು 2018ರೊಳಗೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ. [ಗಂಗಾ ಶುದ್ಧೀಕರಣಕ್ಕೆ ದೇಣಿಗೆ ನೀಡಿ, ತೆರಿಗೆ ಲಾಭ ಪಡೆಯಿರಿ]
ಸಮಯ ಬೇಕು - ಉಮಾ ಭಾರತಿ : ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಪ್ರತಿಕ್ರಿಯೆ ನೀಡಿರುವ ಗಂಗಾ ಪುನರುಜ್ಜೀವನ ಸಚಿವೆ ಉಮಾ ಭಾರತಿ, "ಗಂಗಾ ಶುದ್ಧೀಕರಣಕ್ಕೆ ಇನ್ನೂ ಸಮಯ ಬೇಕು" ಎಂದು ತಿಳಿಸಿದ್ದಾರೆ. "ಹಲವು ವರ್ಷಗಳಿಂದ ಆಗದ್ದನ್ನು ಕೇವಲ ಆರು ತಿಂಗಳಲ್ಲಿ ಮಾಡಲು ಸಾಧ್ಯವೇ? ಕನಿಷ್ಠ ಮೂರು ವರ್ಷಗಳಾದರೂ ಬೇಕು" ಎಂದು ಹೇಳಿದ್ದಾರೆ. [ಗಂಗೆಯಲ್ಲಿ ಮುಳುಗೆದ್ದರೆ ಕ್ಯಾನ್ಸರ್ ಬಂದೀತು ಜೋಕೆ]
ಗಂಗಾ ನದಿಯಲ್ಲಿ ಕಂಡುಬಂದಿರುವ 100 ಶವಗಳ ಕುರಿತು ವರದಿ ನೀಡುವಂತೆ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಉಮಾ ಭಾರತಿ ತಿಳಿಸಿದ್ದಾರೆ.