ಸಹಾರಾ ಗ್ರೂಪ್ ಕಂಪನಿಗಳ ವಿರುದ್ಧ ತನಿಖೆ: ಹೈಕೋರ್ಟ್ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ
ನವದೆಹಲಿ, ಮೇ 26: ಸಹಾರ ಗ್ರೂಪ್ಗೆ ಸಂಬಂಧಿಸಿದ ಒಂಬತ್ತು ಕಂಪನಿಗಳ ತನಿಖೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಸಹಾರ ಗ್ರೂಪ್ಗೆ ಮತ್ತೆ ಪೀಕಲಾಟ ಶುರುವಾಗಿದೆ.
ಸಹಾರ ಗ್ರೂಪ್ನ ಕಂಪನಿಗಳು ನಡೆಸಿರುವ ಅಕ್ರಮ ವಹಿವಾಟಿನ ಪ್ರಕರಣ ಇದಾಗಿದೆ. ಗಂಭೀರ ವಂಚನೆ ತನಿಖಾ ಕಚೇರಿ (SFIO- Serious Fraud Investigation Office) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ತನಿಖೆಗೆ ತಡೆ ನೀಡಬೇಕೆಂದು ಸಹಾರ ಗ್ರೂಪ್ನ ಕಂಪನಿಗಳು ಮಾಡಿಕೊಂಡ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ತಡೆಯಾಜ್ಞೆಯನ್ನು ರದ್ದು ಮಾಡಿ ತನಿಖೆಗೆ ಮತ್ತೆ ದಾರಿ ಮಾಡಿಕೊಟ್ಟಿದೆ. ಸಹಾರ ಗ್ರೂಪ್ನ ಮುಖ್ಯಸ್ಥ ಸುಬ್ರತಾ ರಾಯ್ ಹಾಗು ಇತರ ಕಂಪನಿ ನಿರ್ದೇಶಕರ ವಿರುದ್ಧ ಎಸ್ಎಫ್ಐಒ ಹೊರಡಿಸಿದ್ದ ಲುಕ್ಔಟ್ ಸುತ್ತೋಲೆ ಮತ್ತೆ ಚಾಲ್ತಿಗೆ ಬಂದಿದೆ.
ವೇಶ್ಯಾವಾಟಿಕೆ ಅಕ್ರಮ ಅಲ್ಲ: ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ದೆಹಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಎಸ್ಎಫ್ಐಒ ತನಿಖಾ ಸಂಸ್ಥೆಯು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. "ಈ ಮಧ್ಯ ಹಂತದಲ್ಲಿ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು ಸರಿ ಅಲ್ಲ. ಈ ತಡೆಯಾಜ್ಞೆಯನ್ನು ತೆರವುಗೊಳಿಸುತ್ತೇವೆ. ಇದೇ ವೇಳೆ, ಅರ್ಜಿಗಳ ಮೌಲ್ಯದ ಮೇಲೆ ಈ ತೀರ್ಪು ಪ್ರಭಾವ ಬೀರುವುದಿಲ್ಲ" ಎಂದೂ ಸುಪ್ರೀಂ ಸ್ಪಷ್ಟಪಡಿಸಿತು.
ಇಲ್ಲಿ ಸಹಾರ ಗ್ರೂಪ್ನ ಕಂಪನಿಗಳ ಪ್ರತಿನಿಧಿಗಳು ಸಲ್ಲಿಸಿದ ಅರ್ಜಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಹೇಳಿದ್ದು ಇದು. ಈ ಅರ್ಜಿಗಳ ವಿಚಾರಣೆಯನ್ನು ಮುಂದುವರಿಸಬೇಕೆಂದು ದೆಹಲಿ ಹೈಕೋರ್ಟ್ಗೆ ಸರ್ವೋಚ್ಚ ನ್ಯಾಯಪೀಠ ಸೂಚನೆ ನೀಡಿದೆ.
ಸಹಾರ ಗ್ರೂಪ್ನ ಒಂಬತ್ತು ಕಂಪನಿಗಳು ಅಕ್ರಮವಾಗಿ 1 ಲಕ್ಷ ಕೋಟಿ ರೂ ಮೌಲ್ಯದ ವಿವಿಧ ವಹಿವಾಟುಗಳನ್ನು ಮಾಡಿವೆ ಎಂಬ ಆರೋಪ ಇದ್ದು, ಅದರ ತನಿಖೆನ್ನು ಎಸ್ಎಫ್ಐಒ ನಡೆಸುತ್ತಿದೆ. ಇದರ ತನಿಖೆಯ ಅಧಿಕಾರ ಎಸ್ಎಫ್ಐಒಗೆ ಇಲ್ಲ ಎಂದು ಹೇಳಿ ತನಿಖೆಯ ಸಿಂಧುತ್ವವನ್ನೇ ಪ್ರಶ್ನಿಸಿ ಸಹಾರ ಗ್ರೂಪ್ ಕಂಪನಿಗಳು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು.
(ಒನ್ಇಂಡಿಯಾ ಸುದ್ದಿ)