'ಅವನಿ' ಹತ್ಯೆ: ಮಹಾರಾಷ್ಟ್ರ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್
ನವದೆಹಲಿ, ಫೆಬ್ರವರಿ 10: ಮಹಾರಾಷ್ಟ್ರದಲ್ಲಿ 2018ರಲ್ಲಿ ಹೆಣ್ಣುಹುಲಿ 'ಅವನಿ'ಯ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಜನರಿಗೆ ಸುಪ್ರೀಂಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ. ಇವರಲ್ಲ ಹೆಚ್ಚಿನವರು ರಾಜ್ಯ ಸರ್ಕಾರದ ಅಧಿಕಾರಿಗಳಿದ್ದಾರೆ.
ಅವನಿ ಹುಲಿಯು ನಿಜಕ್ಕೂ ನರಭಕ್ಷಕಿವಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರಾವೆಗಳನ್ನು ಕೇಳಿರುವ ಸುಪ್ರೀಂಕೋರ್ಟ್, ಅದರ ಹತ್ಯೆಗೆ ಬಹುಮಾನ ಘೋಷಿಸಿರುವುದು ನ್ಯಾಯಾಂಗದ ಆದೇಶದ ಉಲ್ಲಂಘನೆಯ ಕೃತ್ಯ ಎಂದು ಅದು ನೋಟಿಸ್ನಲ್ಲಿ ಹೇಳಿದೆ.
ನರಭಕ್ಷಕ 'ಅವನಿ ಹುಲಿ' ಇನ್ನಿಲ್ಲ! 13 ಜನರನ್ನು ಕೊಂದಿದ್ದ ಹುಲಿಗೆ ಗುಂಡೇಟು!
'ಹುಲಿಯನ್ನು ಕೊಲ್ಲುವವರಿಗೆ ಬಹುಮಾನ ಘೋಷಿಸಬಾರದು ಎಂಬ ಆದೇಶಗಳನ್ನು ಅವರು ಉಲ್ಲಂಘಿಸಿದ್ದಾರೆ' ಎಂದು ಘಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಶರದ್ ಎ ಬೊಬ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಕಾಸ್ ಖರ್ಗೆ ಮತ್ತು ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಎ.ಕೆ. ಮಿಶ್ರಾ ಸೇರಿದಂತೆ ಅನೇಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗಿದೆ. ಮುಂದೆ ಓದಿ.
ಅವನಿ ಹತ್ಯೆಗೆ ಬೃಹತ್ ಕಾರ್ಯಾಚರಣೆ
ಸುಮಾರು 13-15 ಜನರನ್ನು ಕೊಂದು ಹಾಕಿತ್ತು ಎನ್ನಲಾದ ಟಿ1 ಎಂದು ಅಧಿಕೃತವಾಗಿ ಗುರುತಿಸಲಾಗಿದ್ದ ಹೆಣ್ಣು ಹುಲಿ ಅವನಿಯನ್ನು 2018ರ ನವೆಂಬರ್ 2ರಂದು ಗುಂಡು ಹಾರಿಸಿ ಕೊಲ್ಲಲಾಗಿತ್ತು. 200 ಪ್ಯಾರಾಗ್ಲೈಡರ್ಗಳು, ಇನ್ಫ್ರಾರೆಡ್ ಕ್ಯಾಮೆರಾಗಳು ಮತ್ತು ಕೆಲ್ವಿನ್ ಕ್ಲೀನ್ ಪರಿಮಳ ದ್ರವ್ಯಗಳನ್ನು ಬಳಸಿ ಬೃಹತ್ ಬೇಟೆ ಕಾರ್ಯಾಚರಣೆ ನಡೆಸಲಾಗಿತ್ತು. ಹುಲಿಯನ್ನು ಸೆರೆಹಿಡಿಯುವ ಪ್ರಯತ್ನ ಯಶಸ್ವಿಯಾಗದಿದ್ದರೆ ಅದಕ್ಕೆ ಕಂಡಲ್ಲಿ ಗುಂಡು ಹಾರಿಸುವ ಅನುಮತಿಯನ್ನು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೀಡಿತ್ತು.
ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿತ್ತು?
2018ರ ಸೆಪ್ಟೆಂಬರ್ನಲ್ಲಿ ಆದೇಶ ನೀಡಿದ್ದ ಸುಪ್ರೀಂಕೋರ್ಟ್, 'ಟಿ1 ಅನ್ನು ಸೆರೆಹಿಡಿಯಬೇಕು ಮತ್ತು ಅದನ್ನು ರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಬೇಕು. ಅದು ಯಶಸ್ವಿಯಾಗದೆ ಹೋದರೆ ಮತ್ತಷ್ಟು ಸಾವು ನೋವುಗಳನ್ನು ತಡೆಯಲು ಅದನ್ನು ಗುಂಡುಹಾರಿಸುವ ಮೂಲಕ ಸಾಯಿಸಬಹುದು... ಮೇಲಿನ ಆದೇಶವನ್ನು ನಡೆಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯವತ್ಮಾಲ್ ಅವರಿಗೆ ಅಧಿಕಾರ ನೀಡಲಾಗಿದೆ. ಅವರು ಹುಲಿಯನ್ನು ಹಿಡಿಯುವ ಅಥವಾ ಸಾಯಿಸುವ ಕಾರ್ಯಕ್ಕೆ ನೆರವಾಗುವ ವ್ಯಕ್ತಿಗೆ ಯಾವುದೇ ಬಹುಮಾನ ಅಥವಾ ಅದೇ ರೀತಿಯ ಭತ್ಯೆಗಳನ್ನು ಘೋಷಿಸುವಂತಿಲ್ಲ' ಎಂದು ಸ್ಪಷ್ಟವಾಗಿ ಹೇಳಿತ್ತು.
ನರಭಕ್ಷಕ 'ಅವನಿ' ಸಾವಿಗೆ ಹೊಸ ತಿರುವು ನೀಡಿದ ಮರಣೋತ್ತರ ಪರೀಕ್ಷೆ
ಮರಣೋತ್ತರ ಪರೀಕ್ಷೆ ವರದಿ
ಹುಲಿ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರಾಣಿ ಹಕ್ಕು ಕಾರ್ಯಕರ್ತೆ ಸಂಗೀತಾ ಡೋಗ್ರಾ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ವರದಿಗಳನ್ನು ಉಲ್ಲೇಖಿಸಿದ್ದ ಅವರು ಟಿ1 ನರಭಕ್ಷಕವಾಗಿರಲಿಲ್ಲ ಎಂದು ವಾದಿಸಿದ್ದರು. ಈ ವಿಚಾರವನ್ನು ಪರಿಗಣಿಸಲು ನ್ಯಾಯಾಲಯ ಒಪ್ಪಿಕೊಂಡಿತ್ತು.
ಕೂದಲು ಆರು ತಿಂಗಳು ಉಳಿಯುತ್ತದೆ
'ಪ್ರಾಣಿಯೊಂದರ ಮರಣೋತ್ತರ ಪರೀಕ್ಷೆಯು ಅದು ನರಭಕ್ಷಕವೇ ಅಥವಾ ಅಲ್ಲವೇ ಎಂದು ಹೇಗೆ ತೋರಿಸುತ್ತದೆ?' ಎಂದು ಸಿಜೆಐ ಪ್ರಶ್ನಿಸಿದರು. ನರಭಕ್ಷಕ ಪ್ರಾಣಿಯ ಕರುಳಿನಲ್ಲಿ ಮನುಷ್ಯನ ಉಗುರು ಮತ್ತು ಕೂದಲು ಆರು ತಿಂಗಳವರೆಗೂ ಇರುತ್ತದೆ. ಆದರೆ ಈ ಹುಲಿಯ ಹೊಟ್ಟೆ ಖಾಲಿಯಿತ್ತು' ಎಂದು ಸಂಗೀತಾ ಹೇಳಿದ್ದಾರೆ.
ನಮಗೆ ಸ್ಪಷ್ಟ ಪುರಾವೆ ಬೇಕು
'ಆರು ತಿಂಗಳವರೆಗೂ ಹುಲಿಯ ಹೊಟ್ಟೆಯಲ್ಲಿ ಉಳಿದುಕೊಳ್ಳಬಲ್ಲ ಮನುಷ್ಯರ ಉಗುರು, ಕೂದಲು, ಹಲ್ಲು ಅಥವಾ ಇನ್ನೇನೇ ಇದ್ದರೂ ಪತ್ತೆಯಾಗಿದ್ದರ ಬಗ್ಗೆ ನಮಗೆ ಸ್ಪಷ್ಟ ಪುರಾವೆ ಬೇಕು. ಅವು ಟಿ1ರ ಕರುಳಿನಲ್ಲಿ ಪತ್ತೆಯಾಗಿಲ್ಲ. ಆಕೆ ನರಭಕ್ಷಕಿ ಎನ್ನುವುದಕ್ಕೆ ದಾಖಲೆಗಳನ್ನು ನೀಡಿ. ನಾವು ನೋಟಿಸ್ಗಳನ್ನೂ ನೀಡುತ್ತೇವೆ. ಏಕೆಂದರೆ ಈ ಬಹುಮಾನದ ಭಾಗ ಸ್ಪಷ್ಟವಾದ ಉಲ್ಲಂಘನೆಯಾಗಿದೆ' ಎಂದು ಸಿಜೆಐ ಹೇಳಿದ್ದಾರೆ.