ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಕರ್ಣನ್ ಗೆ 'ಸುಪ್ರೀಂ' ವಾರೆಂಟ್
ಜಾತಿ ಆಧಾರದಲ್ಲಿ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬ ಆರೋಪ ಸೇರಿದಂತೆ ಕೆಲವಾರು ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸುತ್ತಿರುವ ನ್ಯಾ. ಸಿ.ಎಸ್. ಕರ್ಣನ್.
ನವದೆಹಲಿ, ಮಾರ್ಚ್ 10: ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ ಎಸಗಲಾಗುತ್ತಿದೆ ಎಂದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಬಂಡೆದಿದ್ದಿದ್ದ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ ಮಾ. 10ರಂದು ಜಾಮೀನು ನೀಡಬಹುದಾದ ವಾರೆಂಟ್ ಜಾರಿಗೊಳಿಸಿದೆ.
ಈ ರೀತಿ, ಹೈಕೋರ್ಟ್ ನ್ಯಾಯಾಧೀಶರೊಬ್ಬರಿಗೆ ಸುಪ್ರೀಂ ಕೋರ್ಟ್ ವಾರೆಂಟ್ ಜಾರಿಗೊಳಿಸಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು.
ನ್ಯಾಯಾಂಗ ವ್ಯವಸ್ಥೆ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದ ಕರ್ಣನ್ ಗೆ ಮಾ. 10ರೊಳಗೆ ಬಂದು ವಿವರಣೆ ನೀಡಬೇಕೆಂದು ಫೆಬ್ರವರಿ 8ರಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು. ಆದರೆ, ವಿಚಾರಣೆಗೆ ಹಾಜರಾಗಲು ಕರ್ಣನ್ ನಿರಾಕರಿಸಿದ್ದರು. ಆ ಕಾರಣಕ್ಕಾಗಿ ಈ ವಾರೆಂಟ್ ಜಾರಿಗೊಳಿಸಲಾಗಿದೆ.
ಹಾಗಾಗಿ, ಮಾರ್ಚ್ 10ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ಅವರ ನೇತೃತ್ವದ ಏಳು ನ್ಯಾಯಾಧೀಶರ ಪೀಠ, ಕರ್ಣನ್ ಅವರಿಗೆ ಜಾಮೀನು ನೀಡಬಹುದಾದ ವಾರೆಂಟ್ ಜಾರಿಗೊಳಿಸಿದೆ. ಮಾ. 10ರಂದು ನಡೆದ ವಿಚಾರಣೆ ವೇಳೆ ಹಾಜರಾಗಿದ್ದ ಮದ್ರಾಸ್ ಹೈಕೋರ್ಟ್ ನ ಹಿರಿಯ ಕೌನ್ಸೆಲ್ ಆಗಿರುವ ಕೆ.ಕೆ. ವೇಣುಗೋಪಾಲ್, ಮದ್ರಾಸ್ ಹೈಕೋರ್ಟ್ ನ ನ್ಯಾಯಾಧೀಶರನ್ನು ನ್ಯಾ. ಕರ್ಣನ್ ಅವರು ಹೀಯಾಳಿಸಿದ್ದಾರೆ. ನ್ಯಾಯಾಧೀಶರೊಬ್ಬರ ವಿರುದ್ದ ಅತ್ಯಾಚಾರದ ಆರೋಪ ಮಾಡಿದ್ದಾರೆ. ಇಂಥ ನಡವಳಿಕೆಗಳಿಂದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರನ್ನು ರಕ್ಷಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಸಹ ನ್ಯಾಯಾಧೀಶರ ವಿರುದ್ಧ ಆರೋಪ
ತಾವು ದಲಿತರೆಂಬ ಕಾರಣಕ್ಕಾಗಿ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು 2011ರಲ್ಲಿ ಆರೋಪಿಸಿದ್ದ ಕರ್ಣನ್, ಇದಕ್ಕೆ ಪೂರಕವಾಗಿ, ಮದ್ರಾಸ್ ಹೈಕೋರ್ಟ್ ನ ಸಹ ನ್ಯಾಯಾಧೀಶರೊಬ್ಬರು ತಮ್ಮನ್ನು ಕಾಲು ತಾಗಿಸಿ ಮಾತನಾಡಿಸಿದ್ದರೆಂದು ಆರೋಪಿಸಿದ್ದರು.
ಕೊಲಿಜಿಯಂ ಬಗ್ಗೆ ಅಸಮಾಧಾನ
ಜಾತಿ ಆಧಾರದಲ್ಲಿ ಆರೋಪ ಮಾಡಿದ ನಂತರ, ಮದ್ರಾಸ್ ಹೈಕೋರ್ಟ್ ನಿಂದ ತಮ್ಮನ್ನು ಕೋಲ್ಕತಾ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ್ದರ ವಿರುದ್ಧ ದನಿಯೆತ್ತಿದ್ದರು. ಸುಪ್ರೀಂ ಕೋರ್ಟ್ ಕೊಲೀಜಿಯಂ ವಿರುದ್ಧವೂ ಕಿಡಿ ಕಾರಿದ್ದರು.
ನ್ಯಾಯಾಲಯ ಕಲಾಪಕ್ಕೆ ಅಡ್ಡಿ
2015ರಲ್ಲಿ ಹೈಕೋರ್ಟ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ಕರ್ಣನ್, ಆವೇಶಕ್ಕೊಳಗಾಗಿ ಮದ್ರಾಸ್ ಹೈಕೋರ್ಟ್ ನ ಬೇರೊಂದು ಕೊಠಡಿಯಲ್ಲಿ ನಡೆಯುತ್ತಿದ್ದ ವಿಚಾರಣೆಯ ಮಧ್ಯದಲ್ಲೇ ನುಗ್ಗಿ ಅಲ್ಲಿದ್ದ ನ್ಯಾಯಾಧೀಶರೊಂದಿಗೆ ಜಗಳವಾಡಿದ್ದರು. ಹಾಗಾಗಿ, ನ್ಯಾಯಾಲಯದ ವಿಚಾರಣೆಗೆ ಭಂಗ ತಂದ ಆರೋಪವೂ ಅವರ ಮೇಲೆ ಬಂದಿತ್ತು.
ನ್ಯಾಯಾಧೀಶರ ವಿರುದ್ಧವೇ ರಣಕಹಳೆ
2015ರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ವಿರುದ್ಧವೇ ಸುವೊ ಮೊಟೊ ಅನ್ವಯ ವಿಚಾರಣೆ ಆರಂಭಿಸಿದ್ದರು. ತಮ್ಮನ್ನು ಜಾತಿಯ ಆಧಾರದಲ್ಲಿ ಕೌಲ್ ಅವರು ಹೀನಾಯವಾಗಿ ನಡೆಸಿಕೊಂಡಿದ್ದಾರೆಂಬುದು ಕರ್ಣನ್ ವಾದವಾಗಿತ್ತು.
ಭ್ರಷ್ಟಾಚಾರದ ತನಿಖೆಗೆ ಆಗ್ರಹ
ಇದಲ್ಲದೆ, ಇದೇ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಅವರು, ಮದ್ರಾಸ್ ಹೈಕೋರ್ಟ್ ನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ನ್ಯಾಯಾಧೀಶರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ತಮ್ಮ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದರು.