ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ
Recommended Video
ನವದೆಹಲಿ, ಜುಲೈ 17: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಕಾನೂನಿಗೆ ವಿರುದ್ಧ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಯಾವ ಆಧಾರದಲ್ಲಿ ನೀವು ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದೀರಿ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಮತ್ತೆ ಶಬರಿಮಲೆ ಸುದ್ದಿ, ಮಹಿಳೆ ಪ್ರವೇಶ ಅರ್ಜಿ ಸಾಂವಿಧಾನಿಕ ಪೀಠಕ್ಕೆ
ಇದು ಸಂವಿಧಾನದ ನಿಯಮಗಳಿಗೆ ವಿರುದ್ಧ. ಒಮ್ಮೆ ನೀವು ಸಾರ್ವಜನಿಕರಿಗೆ ಮುಕ್ತಗೊಳಿಸಿದ ಬಳಿಕ ಯಾರು ಬೇಕಾದರೂ ಅದರ ಒಳಗೆ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.
ತೀವ್ರ ವಿವಾದ ಸೃಷ್ಟಿಸಿದ್ದ ಶಬರಿಮಲೆ ಪ್ರವೇಶ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಮುಟ್ಟಾಗುವ ಕಾರಣ ಅವರು ದೇವಸ್ಥಾನದೊಳಗೆ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರಗೊಳ್ಳುತ್ತದೆ ಎಂದು ಆಡಳಿತ ಮಂಡಳಿ ವಾದಿಸಿತ್ತು
ಖಾಸಗಿ ದೇವಸ್ಥಾನ ಎಂಬುದಿಲ್ಲ
ಖಾಸಗಿ ದೇವಸ್ಥಾನ ಎಂಬ ಯಾವುದೇ ಪರಿಕಲ್ಪನೆ ಇಲ್ಲ. ಯಾವುದೇ ದೇವಸ್ಥಾನ ಇದ್ದರೂ ಅದು ಸಾರ್ವಜನಿಕ ಸ್ಥಳದಲ್ಲಿ ಇರಬೇಕು ಮತ್ತು ಅದರೊಳಗೆ ಪ್ರವೇಶಿಸಲು ಪ್ರತಿಯೊಬ್ಬರಿಗೂ ಅವಕಾಶ ಇರಬೇಕು. ಪುರುಷರು ಅದರೊಳಗೆ ಹೋಗಬಹುದಾದರೆ, ಮಹಿಳೆಯರು ಸಹ ಹೋಗಬಹುದು ಎಂದು ಪೀಠ ಹೇಳಿತು.
|
ಸಮಾನ ಹಕ್ಕು ಇದೆ
ಮಹಿಳೆಯಾಗಿ ನಿಮಗೆ (ಅರ್ಜಿದಾರರು) ಪುರುಷರಿಗೆ ಇರುವಷ್ಟೇ ಸಮಾನ ಪೂಜೆಯ ಹಕ್ಕಿದೆ. ಅದನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ನೀವು ಕಾನೂನನ್ನು ಅವಲಂಬಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹೇಳಿದರು.
ಶಬರಿಮಲೆಗೆ ಬರುವ ಪುರುಷ ಭಕ್ತರ ಪರಿಶುದ್ಧತೆಗೆ ಪರೀಕ್ಷಿಸಿ: ಟ್ವಿಂಕಲ್
ನಿರ್ಬಂಧಗಳಿವೆ, ಆದರೆ ನಿರಾಕರಣೆ ಸಲ್ಲ
ಭಕ್ತರು ಎಷ್ಟು ಒಳಗೆ ಹೋಗಬಹುದು ಎಂಬ ವಿಚಾರದಲ್ಲಿ ಎಲ್ಲ ದೇವಸ್ಥಾನಗಳೂ ನಿರ್ಬಂಧಗಳನ್ನು ಹೊಂದಿವೆ. ಹೆಚ್ಚಿನ ದೇವಸ್ಥಾನಗಳಲ್ಲಿ ಗರ್ಭಗುಡಿಗೆ ಪ್ರವೇಶ ಇರುವುದಿಲ್ಲ.
ಎಲ್ಲರೂ ಅದರ ಸಮೀಪ ಹೋಗಲು ಸಾಧ್ಯವಿಲ್ಲ ಎನ್ನುವುದು ಒಪ್ಪಿತ ಸಂಗತಿ. ಆದರೆ, ನೀವು ಪ್ರವೇಶಿಸುವಂತೆಯೇ ಇಲ್ಲ ಎಂದು ಹೇಗೆ ಹೇಳುತ್ತೀರಿ? ಎಂದು ನ್ಯಾಯಪೀಠ ಮಂಡಳಿಯನ್ನು ಪ್ರಶ್ನಿಸಿತು.
ಮುಟ್ಟಾದ ಮಹಿಳೆಯರಿಂದ ಅಪವಿತ್ರ
ಮುಟ್ಟಾದ ಮಹಿಳೆಯರಿಗೆ ದೇವಸ್ಥಾನದ ಪ್ರವೇಶದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ವರ್ಷದ ಅಕ್ಟೋಬರ್ 13ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.
ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಲು ಯತ್ನಿಸಿದ ಮಹಿಳೆ
ಧಾರ್ಮಿಕ ಹಕ್ಕು ದೇವಸ್ಥಾನಕ್ಕಲ್ಲ
ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸುವ ಮಂಡಳಿ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, ದೇವಸ್ಥಾನವು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುವಂತಿಲ್ಲ ಎಂದಿತು.
ಪ್ರತಿ ಮಹಿಳೆ ಕೂಡ ದೇವರ ಸೃಷ್ಟಿ. ಉದ್ಯೋಗದಲ್ಲಾಗಲೀ ಅಥವಾ ಪೂಜೆಯಲ್ಲಾಗಲೀ ಅವರ ವಿರುದ್ಧ ತಾರತಮ್ಯ ಏಕಿರಬೇಕು? ಮಹಿಳೆಯಾಗಿ ನೀವು ಪುರುಷರಂತೆಯೇ ಪೂಜಿಸುವ ಹಕ್ಕನ್ನು ಹೊಂದಿದ್ದೀರಿ. ಇದಕ್ಕೆ ಕಾನೂನಿನ ಬೆಂಬಲ ಪಡೆಯುವ ಅವಶ್ಯಕತೆಯಿಲ್ಲ. ಇದು ಸಂವಿಧಾನದಲ್ಲಿಯೇ ಇದೆ.
ಆರ್ಟಿಕಲ್ 25 (1) ರ ಅಡಿ ಕಾನೂನು ಪೂಜಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ನೀಡಿದೆ ಎಂದು ಪೀಠ ಹೇಳಿತು.
ಯುವ ವಕೀಲರ ಸಂಘದ ಅರ್ಜಿ
ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ 800 ವರ್ಷಗಳ ನಿಯಮವನ್ನು ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಪ್ರಶ್ನಿಸಿತ್ತು.
ದೇವಸ್ಥಾನದೊಳಿಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಹಿಂದೂ ಧರ್ಮದ ಆಚರಣೆ ಅಥವಾ ಸಂಪ್ರದಾಯವಲ್ಲ. ಇದು ಮಹಿಳೆಯರ ವಿರುದ್ಧ ತಾರತಮ್ಯ ನೀತಿಯಾಗಿದೆ ಎಂದು ಅರ್ಜಿದಾರರ ಪರ ವಕೀಲ ರವಿ ಪ್ರಕಾಶ್ ಗುಪ್ತಾ ಕೋರ್ಟ್ಗೆ ತಿಳಿಸಿದರು.
ಸರ್ಕಾರದಿಂದ ಅವಕಾಶ
ಕೇರಳ ರಾಜ್ಯ ಸರ್ಕಾರವು ದೇವಸ್ಥಾನದ ಆವರಣದೊಳಗೆ ಮಹಿಳೆಯರಿಗೆ ಪ್ರವೇಶ ನೀಡಲು ಸಿದ್ಧ ಇರುವುದಾಗಿ ಕಳೆದ ನವೆಂಬರ್ನಲ್ಲಿ ತಿಳಿಸಿತ್ತು. ಶಬರಿಮಲೆಯಲ್ಲಿ ಪೂಜೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸಚಿವ ಕೆ. ಸುರೇಂದ್ರನ್ ಹೇಳಿದ್ದರು.
ನೀವು ನಿಮ್ಮ ನಿಲುವನ್ನು ಮತ್ತೆ ಬದಲಿಸಿದ್ದೀರಿ. ಇದು ನಾಲ್ಕನೆಯ ಬಾರಿ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಹಿಂದಿನ ಸರ್ಕಾರಗಳು ತೆಗೆದುಕೊಂಡಿದ್ದ ನಿಲುವನ್ನು ಉಲ್ಲೇಖಿಸಿ ಹೇಳಿದ್ದರು.
ಐವರು ನ್ಯಾಯಮೂರ್ತಿಗಳ ಪೀಠ
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಮತ್ತು ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದೆ.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ.
ಈ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಮಂಡಳಿ ವಾದಿಸಿತ್ತು.