ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ಒದಗಿಸಲು ಸುಪ್ರೀಂ ಆದೇಶ
ನವದೆಹಲಿ, ಜೂ.07: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಲಿವ್ ಇನ್ ರಿಲೇಷನ್ನಲ್ಲಿದ್ದು ರಕ್ಷಣೆ ಕೋರಿದ ಜೋಡಿಗೆ ರಕ್ಷಣೆ ನಿರಾಕರಿಸಿದ್ದು ಈಗ ಇದೇ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.
ಜೂನ್ 4 ರಂದು ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅಜಯ್ ರಾಸ್ತೋಗಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಲಿವ್ ಇನ್ ಸಂಬಂಧದಲ್ಲಿರುವ ಕಾರಣ ಜೋಡಿಗೆ ಬೆದರಿಕೆ ಒಡ್ಡಲಾಗುತ್ತಿರುವ ಹಿನ್ನೆಲೆ ಪೊಲೀಸರು ತ್ವರಿತವಾಗಿ ಜೋಡಿಗೆ ರಕ್ಷಣೆ ಒದಗಿಸಬೇಕು ಎಂದು ನಿರ್ದೇಶಿಸಿದೆ.
ಲಿವ್ ಇನ್ ಸಂಬಂಧ ಅಪರಾಧವಲ್ಲ, ಸಹಮತ ಬಾಳ್ವೆಗೆ ಕೋರ್ಟ್ ಓಕೆ
"ಇದು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾದ ಕಾರಣ ಪೊಲೀಸ್ ಅಧೀಕ್ಷಕರು ಕಾನೂನಿನ ಅನುಸಾರವಾಗಿ ತ್ವರಿತವಾಗಿ ರಕ್ಷಣೆ ನೀಡುವ ಕಾರ್ಯನಿರ್ವಹಿಸುವುದು ಅವಶ್ಯವಾಗಿದೆ. ಅರ್ಜಿದಾರರಿಗೆ ಬೆದರಿಕೆ ಹಾಕಲಾಗಿರುವ ಹಿನ್ನೆಲೆ ರಕ್ಷಣೆಯನ್ನು ನೀಡುವ ಕಾರ್ಯ ಮಾಡಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕದ ತಟ್ಟಿದ್ದ ಜೋಡಿ
ಈ ಜೋಡಿಯು ಮೊದಲು ಪೊಲೀಸ್ ಅಧೀಕ್ಷಕರಿಗೆ (ಎಸ್ಪಿ) ಮನವಿ ಸಲ್ಲಿಸಿದ್ದರು. ಆದರೆ ಇದನ್ನು ಪರಿಗಣಿಸಿರಲಿಲ್ಲ. ಈ ಹಿನ್ನೆಲೆ ಬಳಿಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕದ ತಟ್ಟಿದ್ದರು. ಆದರೆ ಲಿವ್ ಇನ್ ಸಂಬಂಧ ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಅರ್ಜಿಯನ್ನು ನಿರಾಕರಿಸಿತ್ತು.
ಲಿವ್-ಇನ್ ಸಂಬಂಧ ನಿಷೇಧಿಸಿಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್
ಲಿವ್ ಇನ್ ಸಂಬಂಧ ನೈತಿಕವಲ್ಲ ಎಂದಿದ್ದ ಹೈಕೋರ್ಟ್
"ಅರ್ಜಿದಾರರು ತಮ್ಮ ಲಿವ್ ಇನ್ ಸಂಬಂಧಕ್ಕೆ ಅನುಮೋದನೆಯನ್ನು ಕೋರಿದ್ದಾರೆ. ಆದರೆ ಇದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಯಾವುದೇ ರಕ್ಷಣಾ ಕ್ರಮದ ಆದೇಶವನ್ನು ನೀಡಲಾಗುವುದಿಲ್ಲ" ಎಂದು ನ್ಯಾಯಮೂರ್ತಿ ಎಚ್.ಎಸ್. ಮದನ್ನ ಏಕ ಸದಸ್ಯ ನ್ಯಾಯಾಪೀಠ ಹೇಳಿದೆ.
ಸುಪ್ರೀಂ ಮೆಟ್ಟಿಲೇರಿದ ಜೋಡಿ
ಬಳಿಕ ದಂಪತಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅರ್ಜಿದಾರರಿಗೆ ಸೂಕ್ತ ರಕ್ಷಣೆ ನೀಡಲು ಹಾಗೂ ಅವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. "ಇದು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ನಾವು ಪೊಲೀಸ್ ರಕ್ಷಣೆ ನೀಡುವಂತೆ ಕೋರಲಾಗಿರುವ ಎರಡೂ ಅರ್ಜಿಗಳನ್ನು ಪೊಲೀಸರಿಗೆ ವಿಲೇವಾರಿ ಮಾಡುತ್ತೇವೆ" ಎಂದು ಹೇಳಿತ್ತು.
ಮತ್ತೊಂದು ಜೋಡಿಗೆ ರಕ್ಷಣೆಗೆ ಆದೇಶಿಸಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಲಿವ್ ಇನ್ ಸಂಬಂಧದಲ್ಲಿರುವ ಜೋಡಿಯೊಂದಕ್ಕೆ ಮಧ್ಯಂತರ ರಕ್ಷಣೆ ನೀಡಿತ್ತು. "ಶಾಂತಿಯುತ ಜೀವನ"ಕ್ಕೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿತ್ತು. ನ್ಯಾಯಮೂರ್ತಿಗಳಾದ ಪಂಕಜ್ ನಖ್ವಿ ಮತ್ತು ಜಯಂತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಅರ್ಜಿ ತನಿಖೆ ನಡೆಸಿದ್ದು, "ಸೂಚಿಸಲಾದ ಮುಂದಿನ ವಿಚಾರಣೆ ದಿನಾಂಖದವರೆಗೆ ಅರ್ಜಿದಾರರ ಶಾಂತಿಯುತ ಜೀವನಕ್ಕೆ ಯಾರೂ ಹಸ್ತಕ್ಷೇಪ ಮಾಡಬಾರದು" ಎಂದು ಹೇಳಿ ವಿಚಾರಣೆಯನ್ನು ಆಗಸ್ಟ್ಗೆ ಮುಂದೂಡಿತ್ತು.