ಬಹುಕೋಟಿ ವಂಚನೆ, ಸಹಾರಾ ಮುಖ್ಯಸ್ಥನಿಗೆ ರಿಲೀಫ್
ನವದೆಹಲಿ, ಮಾ.26: ಹೂಡಿಕೆದಾರರಿಂದ ಸಂಗ್ರಹಿಸಿದ ಮೊತ್ತವನ್ನು ಹಿಂದುರಿಗಿಸುವ ಭರವಸೆ ನೀಡಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಗೆ ಸುಪ್ರೀಂಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ನೀಡಿದೆ. ಹೂಡಿಕೆದಾರರಿಗೆ ಹಂತ ಹಂತವಾಗಿ ಹಣ ಹಿಂದುರಿಗಿಸುವಂತೆ ಆದೇಶಿಸಿದ್ದು, ಇದಕ್ಕಾಗಿ ಸುಮಾರು 10.000 ಸಾವಿರ ಕೋಟಿ ರುಪಾಯಿಗಳನ್ನು ಮಾರುಕಟ್ಟೆ ನಿಯಂತ್ರಕ ಸೆಬಿಯಲ್ಲಿ ಠೇವಣಿ ಇಡುವಂತೆ ಸಹರಾ ಮುಖ್ಯಸ್ಥ ಸುಬ್ರತಾಗೆ ಸೂಚಿಸಿದೆ.
ಜಸ್ಟೀಸ್ ಕೆ.ಎಸ್ ರಾಧಾಕೃಷ್ಣನ್ ಹಾಗೂ ಜಸ್ಟೀಸ್ ಜೆ,ಎಸ್ ಖೆಹರ್ ಅವರಿದ್ದ ನ್ಯಾಯಪೀಠ ಈ ತೀರ್ಪನ್ನು ಹೊರಡಿಸಿದ್ದು, 10,000 ಕೋಟಿ ರು ಹಾಗೂ 5,000 ಕೋಟಿ ರು ನಗದು ರೂಪದಲ್ಲಿ ಉಳಿದ 5,000 ಕೋಟಿ ರು ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ನೀಡುವಂತೆ ನಿರ್ದೇಶಿಸಲಾಗಿದೆ.
ಜಾಮೀನು ಬಯಸುವುದಾದರೆ ಸೆಬಿಗೆ ಕೂಡಲೇ 2,500 ಕೋಟಿ ರು ನೀಡಬೇಕು ಹಾಗೂ ಬಾಕಿ ಮೊತ್ತವನ್ನು ಇನ್ನೊಂದು ತಿಂಗಳಿನಲ್ಲಿ ಪಾವತಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಹೂಡಿಕೆದಾರರಿಗೆ ಹಣ ಹಿಂದುರಿಗಿಸದ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ರನ್ನು ಮಾರ್ಚ್ 4 ರಂದು ಸುಪ್ರೀಂಕೋರ್ಟ್ ಪೊಲೀಸರ ವಶಕ್ಕೆ ನೀಡಿತ್ತು. ಸದ್ಯ ತಿಹಾರ್ ಜೈಲಿನಲ್ಲಿದ್ದ ಸುಬ್ರತಾ ರಾಯ್ ಗೆ ಜಾಮೀನು ಸಿಕ್ಕಿದೆ.
ಪೊಲೀಸರೆದರು ಸುಬ್ರತೋ ರಾಯ್ ಶರಣು
ಬಂಧನ ಭೀತಿ ಎದುರಿಸುತ್ತಿರುವ ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತೋ ರಾಯ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಮಾಡಲು ವಿಫಲವಾದ ಬೆನ್ನಲ್ಲೇ ಶುಕ್ರವಾರ(ಫೆ.28) ಬೆಳಗ್ಗೆ ಲಕ್ನೋ ಪೊಲೀಸರೆದರು ಸುಬ್ರತೋ ರಾಯ್ ಶರಣಾಗಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಗುರುವಾರ (ಫೆ.27) ಸುಬ್ರತೋ ರಾಯ್ ಮನೆ ಮೇಲೆ ದಾಳಿ ನಡೆಸಿ ಬಂಧನಕ್ಕೆ ಮುಂದಾಗಿದ್ದರು. ಆದರೆ, ರಾಯ್ ಸಿಕ್ಕಿರಲಿಲ್ಲ. ಬಳಿಕ ರಾಯ್ ಅವರು ಸುಪ್ರೀಂಕೋರ್ಟ್ ಅನ್ನು ಬೇಷರತ್ ಕ್ಷಮೆಯಾಚಿಸಿದ್ದರು.
ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದರು
ನನ್ನ ತಾಯಿಗೆ ಹುಷಾರಿಲ್ಲ. ಹೀಗಾಗಿ ನಾನು ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ನನಗೆ ಖುದ್ದು ಹಾಜರಾತಿ ವಿನಾಯತಿ ನೀಡಿ. ಕೋರ್ಟ್ ನಿರ್ದೇಶನದಂತೆ ನಾನು ಸಂಸ್ಥೆಯ ಹೂಡಿಕೆದಾರರಿಗೆ ಹಣ ಮರು ಪಾವತಿ ಮಾಡುತ್ತೇನೆ' ಎಂದು ಸುಬ್ರತೋ ರಾಯ್ ಅವರು ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ಸಹಾರಾ ಸಂಸ್ಥೆ ಬ್ಯಾಂಕ್ ಜಪ್ತಿಗೆ ಆದೇಶ
ಸಹರಾ ಸಮೂಹದ ಸಂಸ್ಥೆಗಳಾದ ಸಹರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ (ಎಸ್ ಐಆರ್ ಇಸಿ) ಹಾಗೂ ಸಹರಾ ಹೌಸಿಂಗ್ ಇನ್ ವೆಸ್ಟ್ ಮೆಂಟ್ ಕಾರ್ಪೊರೇಶನ್ (ಎಸ್ ಎಚ್ ಐಸಿ) ಸ್ವತ್ತುಗಳನ್ನು ಜಪ್ತಿ ಮಾಡುವಂತೆ ಹಾಗೂ ಅವುಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಅಧಿಕಾರ ಸೆಬಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೂಡಿಕೆದಾರರಿಂದ ಅಕ್ರಮ ಹಣ ಸಂಗ್ರಹ
ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.
ಸಹಾರಾ ಮುಖ್ಯಸ್ಥನಿಂದ ಬಹುಕೋಟಿ ವಂಚನೆ
2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.
ಆತಂಕದಲ್ಲಿರುವ ಹೂಡಿಕೆದಾರರು
ಸಹಾರಾ ಹೌಸಿಂಗ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್ ಮತ್ತು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ ಮೂಲಕ ಠೇವಣಿದಾರರು ತಮಗೆ ಅಗತ್ಯವಿದ್ದಾಗ ಪರಿವರ್ತಿಸಬಹುದಾದ ಒಎಫ್ ಸಿಡಿ ಬಾಂಡ್ ಗಳನ್ನು ವಿತರಿಸುವ ಮೂಲಕ ಈ ನಿಧಿ ಸಂಗ್ರಹಿಸಲಾಗಿತ್ತು.
ಠೇವಣಿ ಸಂಗ್ರಹಣೆಯ ಸ್ಪಷ್ಟ ಉದ್ದೇಶವನ್ನು ಕಂಪನಿ ಸ್ಪಷ್ಟವಾಗಿ ತಿಳಿಸಿರಲಿಲ್ಲ. ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದದಿರುವುದು ಕುತೂಹಲಕಾರಿಯಾಗಿದೆ.