ಅಕ್ರಮ ಆಸ್ತಿ: ಶಶಿಕಲಾಗೆ ಜೈಲು, ಸುಪ್ರೀಂ ಕೋರ್ಟ್ ಆದೇಶ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಸಿಬಿಐ ನ್ಯಾಯಾಲಯ 2014ರಲ್ಲಿ ಸೆಪ್ಟಂಬರ್ 27ರಂದು ಬಂದಿದ್ದ ನೀಡಿದ್ದ ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ, ಫೆಬ್ರವರಿ 14: ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಡಿಎಂಕೆ) ಪಕ್ಷದ ನಾಯಕಿ ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ತೀರ್ಪು ಹೊರಬಿದ್ದಿದ್ದು, ಶಶಿಕಲಾ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಸುಪ್ರೀಂ ಕೋರ್ಟ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇದರಿಂದಾಗಿ, ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಜತೆಗೆ ಸ್ಪರ್ಧೆಗಳಿದಿದ್ದ ಶಶಿಕಲಾ ಅವರ ಕನಸು ಭಗ್ನಗೊಂಡಿದೆ.[LIVE: ಪರಪ್ಪನ ಅಗ್ರಹಾರ ಜೈಲು ಸೇರಲಿರುವ ಶಶಿಕಲಾ]
ಈ ಹಿಂದೆ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ್ದ ನಾಲ್ಕು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಇದರ ಜತೆಯಲ್ಲೇ ಕರ್ನಾಟಕ ಹೈ ಕೋರ್ಟ್ ನೀಡಿದ್ದ ಶಶಿಕಲಾ ಖುಲಾಸೆ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.[ಶಶಿಕಲಾ ಭವಿಷ್ಯ: 2 ಸುಪ್ರೀಂ ಜಡ್ಜ್ ಗಳ ಮುಂದಿರುವ 4 ಸಾಧ್ಯತೆಗಳು]
ಇದಲ್ಲದೆ, ಜೈಲು ಶಿಕ್ಷೆ ಅವಧಿಯೂ ಸೇರಿದಂತೆ ಆನಂತರದ ಆರು ವರ್ಷಗಳ ಕಾಲ ಶಶಿಕಲಾ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಇದರಿಂದಾಗಿ, ಮುಂದಿನ ಹತ್ತು ವರ್ಷಗಳ ಕಾಲ ಅವರು ರಾಜಕೀಯದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಗಿದೆ.
ಸಹ ಆರೋಪಿಗಳಿಗೂ ಶಿಕ್ಷೆ: ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಇಳವರಸಿ, ವಿ.ಎನ್. ಸುಧಾಕರನ್ ಅವರಿಗೂ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದಲ್ಲದೆ, ಈ ಕೇಸಿನ ಎಲ್ಲಾ ಅಪರಾಧಿಗಳಿಗೂ ತಲಾ 10 ಈ ಕೋಟಿ ದಂಡ ವಿಧಿಸಲಾಗಿದೆ. ಅಲ್ಲದೆ, ಈ ನಾಲ್ಕೂ ಅಪರಾಧಿಗಳು ಇಂದೇ (ಫೆ. 14) ಪೊಲೀಸರ ಮುಂದೆ ಶರಣಾಗುವಂತೆ ಸೂಚಿಸಲಾಗಿದೆ.
ಪರಪ್ಪನ ಅಗ್ರಹಾರಕ್ಕೆ: ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅಪರಾಧಿಗಳೆಂದು ಸಾಬೀತಾದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಪ್ರಕರಣದ ದೋಷಿಗಳೂ (ಶಶಿಕಲಾ, ಇಳವರಸಿ, ಸುಧಾಕರನ್) ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸಬೇಕಿದೆ.