ಸುಪ್ರೀಂಕೋರ್ಟ್ನಲ್ಲೂ ಅನಿಲ್ ದೇಶ್ಮುಖ್, ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ
ನವದೆಹಲಿ, ಏಪ್ರಿಲ್ 8: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮಹಾರಾಷ್ಟ್ರ ಸರ್ಕಾರ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿಯೂ ಮುಖಭಂಗವಾಗಿದೆ.
'ಆರೋಪದ ಸ್ವರೂಪವನ್ನು ಮತ್ತು ಇದರಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಗಮನಿಸಿದಾಗ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದು ಅಗತ್ಯವಾಗಿದೆ. ಇದು ಸಾರ್ವಜನಿಕ ವಿಶ್ವಾಸ ವಿಚಾರ. ಹೀಗಾಗಿ ನಾವು ಇದನ್ನು ಅಂಗೀಕರಿಸಲು ಒಪ್ಪುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಗುರುವಾರ ಆದೇಶದಲ್ಲಿ ತಿಳಿಸಿತು.
ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅನಿಲ್ ದೇಶ್ಮುಖ್ ಮೇಲ್ಮನವಿ
ಮಹಾರಾಷ್ಟ್ರ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ತನ್ನ ಮುಂದೆ ಇದ್ದ ಅರ್ಜಿಯ ಸಮರ್ಥನೀಯತೆಯ ಪ್ರಶ್ನೆಯನ್ನು ಪರಿಶೀಲಿಸುವಲ್ಲಿ ಬಾಂಬೆ ಹೈಕೋರ್ಟ್ ವಿಫಲವಾಗಿದೆ ಎಂದು ವಾದಿಸಿದರು.
'ಈ ಎಲ್ಲ ಸಮಸ್ಯೆಗಳು ಉದ್ಭವಿಸುತ್ತಿರುವುದು ಉಂಟಾಗಿರುವ ಬಿಕ್ಕಟ್ಟುಗಳಿಂದಾಗಿ. ಆರೋಪಗಳು ಬಹಳ ಗಂಭೀರವಾಗಿವೆ ಮತ್ತು ಅದು ಕುತೂಹಲಕಾರಿ ಮತ್ತು ಕುತೂಹಲಕಾರಿಯಾಗುತ್ತಿದೆ. ಈ ಸನ್ನಿವೇಶವು ಸಿಬಿಐ ತನಿಖೆಯ ಪ್ರಕರಣವಲ್ಲವೇ?' ಎಂದು ನ್ಯಾಯಮೂರ್ತಿ ಕೌಲ್ ಪ್ರಶ್ನಿಸಿದರು.
ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ ಸಾಮಾನ್ಯ ಅನುಮತಿಯನ್ನು ಈ ಹಿಂದೆಯೇ ಮಹಾರಾಷ್ಟ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ತನಿಖೆಗೆ ಕರೆ ನೀಡದ ಹೊರತು ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ಅಲ್ಲಿ ತನಿಖೆ ನಡೆಸುವಂತಿಲ್ಲ ಎಂದು ಸಿಂಘ್ವಿ ಹೇಳಿದರು.
ಭ್ರಷ್ಟಾಚಾರ ಆರೋಪ: ರಾಜೀನಾಮೆ ಸಲ್ಲಿಸಿದ ಗೃಹ ಸಚಿವ ಅನಿಲ್ ದೇಶ್ಮುಖ್
'ಆದರೆ ಅವರು ಇಲ್ಲಿ ಹೇಳಿರುವುದು ಪ್ರಾಥಮಿಕ ವಿಚಾರಣೆಗೆ ಮಾತ್ರ. ಅವರಿಲ್ಲಿ ಪ್ರಾಥಮಿಕ ವಿಚಾರಣೆ ನಡೆಸಬಹುದು ಆದರೆ ತನಿಖೆಯನ್ನಲ್ಲ' ಎಂದು ತಿಳಿಸಿದರು.
ಅನಿಲ್ ದೇಶ್ಮುಖ್ ಪರ ಹಾಜರಿದ್ದ ವಕೀಲ ಕಪಿಲ್ ಸಿಬಲ್, ಪರಮ್ ಬೀರ್ ಸಿಂಗ್ ಮಾಡಿರುವ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿದರು. ಆದರೆ ಎರಡೂ ಅರ್ಜಿಗಳನ್ನು ನ್ಯಾಯಪೀಠ ತಿರಸ್ಕರಿಸಿತು.