'ಬ್ಯಾಂಕ್ ಗಳ ವರದಿಯನ್ನು ಆರ್ ಟಿಇ ಅಡಿ ರಿಸರ್ವ್ ಬ್ಯಾಂಕ್ ನೀಡಬೇಕು'
ನವದೆಹಲಿ, ಏಪ್ರಿಲ್ 26: ಬ್ಯಾಂಕ್ ಗಳ ವಾರ್ಷಿಕ ಪರಿಶೀಲನಾ ವರದಿಯ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶನ ಮಾಡಿದೆ. ಕಾನೂನಿನ ಅಡಿಯಲ್ಲಿ ಮಾಹಿತಿ ಬಹಿರಂಗ ಪಡಿಸಲು ಅವಕಾಶ ಇಲ್ಲ ಅನ್ನೋದಾದರೆ ಪರವಾಗಿಲ್ಲ. ಆದರೆ ಅವಕಾಶ ಇದ್ದರೆ ಮಾಹಿತಿ ನೀಡಬೇಕು ಎಂದಿದೆ.
ನ್ಯಾಯಮೂರ್ತಿ ಎಲ್.ನಾಗೇಶ್ವರ್ ನೇತೃತ್ವದ ಪೀಠವು ಆರ್ ಬಿಐಗೆ ನಿರ್ದೇಶನ ನೀಡಿದ್ದು, ಬ್ಯಾಂಕ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡುವ ವಿಚಾರದಲ್ಲಿ ಇರುವ ನಿಯಮವನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದೆ. ಕಾನೂನಿನ ಅಡಿಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ ಎಂದು ಕೂಡ ತಿಳಿಸಲಾಗಿದೆ.
'ಆರ್ ಬಿಐ ಮಂಡಳಿ ಒಪ್ಪುವ ಮುಂಚೆಯೇ ಅಪನಗದೀಕರಣ ಘೋಷಣೆ'
ಆರ್ ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವ ಮಟ್ಟಕ್ಕೆ ಕೋರ್ಟ್ ಮುಂದುವರಿಯದೆ, ಇದು ಕೊನೆ ಅವಕಾಶ. ಕಾನೂನಿನ ಪಾರದರ್ಶಕತೆ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಸೂಚನೆ ನೀಡಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇನ್ನು ಮುಂದೆ ಇಂಥ ಯಾವುದೇ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪೀಠವು ಹೇಳಿದೆ.
ಬ್ಯಾಂಕ್ ಗಳ ವಾರ್ಷಿಕ ಪರಿಶೀಲನಾ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗ ಪಡಿಸದ ಕಾರಣಕ್ಕೆ ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನಿಂದ ರಿಸರ್ವ್ ಬ್ಯಾಂಕ್ ಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗಿತ್ತು.
ಆರ್ ಬಿಐನಿಂದ ಕೇಂದ್ರ ಸರಕಾರಕ್ಕೆ 28 ಸಾವಿರ ಕೋಟಿ ಮಧ್ಯಂತರ ಲಾಭಾಂಶ
ಪಾರದರ್ಶಕ ಕಾನೂನಿನ ಅನ್ವಯ ಮಾಹಿತಿ ಕೇಳುವವರಿಗೆ ಆರ್ ಬಿಐ ಅದನ್ನು ನಿರಾಕರಿಸ ಕೂಡದು. ಆ ವಿಷಯವನ್ನು ಬಹಿರಂಗ ಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದಲ್ಲಿ ಮಾಹಿತಿ ನಿರಾಕರಿಸಬಹುದು ಎಂದು ಅದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಮಾಹಿತಿ ಆಯೋಗವು ಹೇಳಿತ್ತು.
ಆದರೆ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ರಿಸರ್ವ್ ಬ್ಯಾಂಕ್, ಇದು ವಿಶ್ವಾಸದ ಪ್ರಶ್ನೆ ಎಂದಿತ್ತು. ಈ ನಿಲವಿನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಕಲಾಗಿತ್ತು.