ಡಿಸೆಂಬರ್ನಲ್ಲಿ ವಿಕೋಪಕ್ಕೆ ಹೋಗಬಹುದು: ಕೊರೊನಾ ಬಗ್ಗೆ ಸುಪ್ರೀಂಕೋರ್ಟ್ ಕಳವಳ
ನವದೆಹಲಿ, ನವೆಂಬರ್ 23: ಪ್ರಸ್ತುತದ ಕೋವಿಡ್ 19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳೂ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂಬ ವಿವರವುಳ್ಳ ವರದಿಯನ್ನು ಎರಡು ದಿನಗಳ ಒಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ದೆಹಲಿ ಮತ್ತು ಗುಜರಾತ್ನಂತರ ರಾಜ್ಯಗಳಲ್ಲಿ ಕೋವಿಡ್ ಸೋಂಕು ಇನ್ನಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸೂಚನೆ ನೀಡಿದೆ. ಗುಜರಾತ್ನಲ್ಲಿ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಕೋವಿಡ್ 19 ಅಪಾಯಕಾರಿ ಸ್ಥಿತಿಗೆ ಹೋಗಬಹುದು ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿರುವ ಕೋರ್ಟ್, ರಾಜ್ಯಗಳು ಚೆನ್ನಾಗಿ ಸಿದ್ಧತೆ ನಡೆಸದೆ ಹೋದರೆ ಡಿಸೆಂಬರ್ನಲ್ಲಿ ಕೆಟ್ಟ ಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಕೋವಿಡ್ ಏರಿಕೆ: ಮೂರು ರಾಜ್ಯಗಳಿಗೆ ಕೇಂದ್ರದ ಉನ್ನತ ತಂಡ
ಕಳೆದ ಎರಡು ವಾರಗಳಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿ ಸ್ಥಿತಿ ಗಂಭೀರವಾಗಿದೆ. ನೀವು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠ ದೆಹಲಿ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ಸೂಚನೆ ನೀಡಿತು. ಮುಂದೆ ಓದಿ.
ವರದಿ ನೀಡಲು ಸೂಚನೆ
ನ್ಯಾಯಮೂರ್ತಿಗಳಾದ ಆರ್ಎಸ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, ಪರಿಸ್ಥಿತಿಯನ್ನು ತಹಬದಿಗೆ ತರಲು ಮತ್ತು ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಎಲ್ಲ ಕ್ರಮಗಳ ಬಗ್ಗೆಯೂ ವಿವರವಾದ ವರದಿ ನೀಡಬೇಕು ಎಂದು ತಿಳಿಸಿತು.
ದೆಹಲಿ ಸರ್ಕಾರಕ್ಕೆ ಪ್ರಶ್ನೆ
ಆಸ್ಪತ್ರೆಗಳು ಹೇಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ? ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳು ಇವೆಯೇ? ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್, ರೋಗಿಗಳ ನಿರ್ವಹಣೆ ಬಗ್ಗೆ ಇತ್ತೀಚಿನ ಸ್ಥಿತಿಗತಿಯ ವರದಿ ನೀಡುವಂತೆ ದೆಹಲಿಯ ಎಎಪಿ ಸರ್ಕಾರಕ್ಕೆ ಸೂಚನೆ ನೀಡಿತು.
ಹಾಸಿಗೆಗಳನ್ನು ಮೀಸಲಿಡಲಾಗಿದೆ
ಎಲ್ಲ ಆಸ್ಪತ್ರೆಗಳಲ್ಲಿಯೂ ಕೋವಿಡ್ ರೋಗಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದು ದೆಹಲಿ ಸರ್ಕಾರ ಪ್ರತಿಕ್ರಿಯೆ ನೀಡಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನವೆಂಬರ್ 13ರಂದು ಕೇಂದ್ರ ಗೃಹ ಸಚಿವರು ಸಭೆ ನಡೆಸಿದ್ದರು. ವಿವಿಧ ಸೂಚನೆಗಳನ್ನು ನೀಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
Recommended Video
ನ. 27ಕ್ಕೆ ಮುಂದೂಡಿಕೆ
ಕೋವಿಡ್ 19 ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಬಗ್ಗೆ ಮತ್ತು ಆಸ್ಪತ್ರೆಗಳು ಮೃತದೇಹಗಳ ನಿರ್ವಹಣೆಯನ್ನು ಗೌರವಯುತವಾಗಿ ನಡೆಸುವುದರ ಕುರಿತಾದ ಸಂಗತಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ನ. 27ಕ್ಕೆ ಮುಂದೂಡಿತು.