ನಂಬಿ ನಾರಾಯಣನ್ ಇಸ್ರೋ ಗೂಢಚಾರಿಕೆ ಪ್ರಕರಣ: ಸಿಬಿಐ ತನಿಖೆಗೆ 'ಸುಪ್ರೀಂ' ಸೂಚನೆ
ನವದೆಹಲಿ, ಏಪ್ರಿಲ್ 15: ಇಸ್ರೋ ಮಾಜಿ ವಿಜ್ಞಾನಿ ಡಾ. ಎಸ್. ನಂಬಿ ನಾರಾಯಣನ್ ವಿರುದ್ಧದ 1994ರ ಗೂಢಚಾರಿಕೆ ಪ್ರಕರಣದ ಕುರಿತು ಜೈನ್ ಸಮಿತಿ ಸಲ್ಲಿಸಿರುವ ವರದಿಯನ್ನು ಸುಪ್ರೀಂಕೋರ್ಟ್ ಗೋಪ್ಯ ಎಂದು ಪರಿಗಣಿಸಿದೆ. ವರದಿಯಲ್ಲಿರುವ ವಿಚಾರಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ಕಕ್ಷಿದಾರರಿಗೂ ಬಹಿರಂಗವಾಗುವಂತಿಲ್ಲ ಮತ್ತು ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಿಕೆ ಜೈನ್ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ಜೈನ್ ಸಮಿತಿ ವರದಿಯು, 1994ರಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ವಿರುದ್ಧ ಗೂಢಚಾರಿಕೆ ಆರೋಪ ಹೊರಿಸಿದ್ದ ಪೊಲೀಸ್ ಅಧಿಕಾರಿಗಳು ಎಸಗಿದ ತಪ್ಪುಗಳ ಬಗ್ಗೆ ವಿವರಣೆ ನೀಡಿದೆ. ಗಂಭೀರ ಆರೋಪ ಎದುರಿಸುತ್ತಿದ್ದ ನಂಬಿ ನಾರಾಯಣನ್ ಅವರು ಖುಲಾಸೆಗೊಂಡಿದ್ದರು. ಕೋರ್ಟ್ ಆದೇಶದಂತೆ ಅವರಿಗೆ 50 ಲಕ್ಷ ರೂ ಪರಿಹಾರ ನೀಡಲಾಗಿತ್ತು.
ಬೇಹುಗಾರಿಕೆ ಆರೋಪ ಮುಕ್ತ ವಿಜ್ಞಾನಿಗೆ 1.3 ಕೋಟಿ ರು ಪರಿಹಾರ
ಈ ವರದಿಯನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಸಮಿತಿಯು ಕೇರಳ ಪೊಲೀಸ್ನ ಜವಾಬ್ದಾರಿಯುತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದನ್ನು ಗಮನಿಸಿದೆ. ಈ ವರದಿಯು ಗಂಭೀರ ಸಂಗತಿಗಳ ಸುಳಿವು ನೀಡಿದೆ. ವರದಿ ಆಧರಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ವರದಿಯು ಅನೇಕ ಸಂದರ್ಭಗಳು ಮತ್ತು ಘಟನೆಗಳನ್ನು ಉಲ್ಲೇಖಿಸಿದೆ. ಹೀಗಾಗಿ ಅದರ ಸಮಗ್ರ ತನಿಖೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಜೈನ್ ಸಮಿತಿಯ ವರದಿಯನ್ನು ಪ್ರಾಥಮಿಕ ತನಿಖಾ ವರದಿ ಎಂದು ಪರಿಗಣಿಸಿರುವ ನ್ಯಾಯಾಲಯವು ಸಿಬಿಐಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಮೂರು ತಿಂಗಳ ಸಮಯ ಕೊಟ್ಟಿದೆ.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ನಂಬಿ ನಾರಾಯಣನ್ ಸಂತಸ ವ್ಯಕ್ತಪಡಿಸಿದ್ದಾರೆ. 'ಸಿಬಿಐ ತನಿಖೆ ಅತ್ಯುತ್ತಮ ಪ್ರಗತಿ. ಅದರ ವಿರುದ್ಧ ದೂರಲು ನನಗೇನೂ ಇಲ್ಲ. ಈ ವರದಿಯು ಪ್ರಕರಣವನ್ನು ಒಂದು ಮಟ್ಟಕ್ಕೆ ಇಳಿಸಲಿದೆ ಮತ್ತು ಇದರಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯಲಿದೆ ಎಂಬುದನ್ನು ನಿರೀಕ್ಷಿಸುತ್ತಿದ್ದೆ. ಆದರೆ ವರದಿಯಲ್ಲಿನ ಅಂಶಗಳು ನನಗೆ ತಿಳಿದಿಲ್ಲದ ಕಾರಣ ನಾನು ಇದರ ಬಗ್ಗೆ ಹೇಳಿಕೆ ನೀಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.
ಬೇಹುಗಾರಿಕೆ ಪ್ರಕರಣವು 1994ರಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ರಹಸ್ಯ ದಾಖಲೆಗಳನ್ನು ಇಬ್ಬರು ವಿಜ್ಞಾನಿಗಳು ಮತ್ತು ಮಾಲ್ಡೀವ್ಸ್ನ ಇಬ್ಬರ ಮಹಿಳೆಯರು ಸೇರಿದಂತೆ ಇತರೆ ನಾಲ್ವರು ವಿದೇಶಗಳಿಗೆ ವರ್ಗಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ. ಎಸ್. ನಂಬಿನಾರಾಯಣನ್ ಅವರನ್ನು 1994ರ ನವೆಂಬರ್ನಲ್ಲಿ ಬಂಧಿಸಲಾಗಿತ್ತು. ನಂಬಿ ನಾರಾಯಣನ್ ಅವರ ಅಕ್ರಮ ಬಂಧನಕ್ಕೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳು ಹೊಣೆಗಾರರು ಎಂದು ಸಿಬಿಐ ತನಿಖೆ ಬಳಿಕ ಪ್ರತಿಪಾದಿಸಿತ್ತು.
2018ರ ಸೆ. 14ರಂದು ಸುಪ್ರೀಂಕೋರ್ಟ್, ನಿವೃತ್ತ ನ್ಯಾಯಮೂರ್ತಿ ಡಿಕೆ ಜೈನ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಇದೇ ಸಂದರ್ಭದಲ್ಲಿ ನಂಬಿ ನಾರಾಯಣನ್ ಅವರನ್ನು ಅತೀವವಾಗಿ ಅವಮಾನಿಸಿದ್ದ ಕಾರಣಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಿತ್ತು.