ಎಲೆಕ್ಟೊರಲ್ ಬಾಂಡ್ ವಿತರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ, ಮಾರ್ಚ್ 26: ಏಪ್ರಿಲ್ 1ರಿಂದ ಹೊಸ ಎಲೆಕ್ಟೊರಲ್ ಬಾಂಡ್ಗಳನ್ನು ವಿತರಿಸಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಎಲೆಕ್ಟೊರಲ್ ಬಾಂಡ್ಗಳಿಲ್ಲದೆ ಹೋದರೆ ರಾಜಕೀಯ ಪಕ್ಷಗಳು ನಗದು ಹಣವನ್ನು ಭಾರಿ ಪ್ರಮಾಣದಲ್ಲಿ ಬಳಸುವ ಸಾಧ್ಯತೆ ಇರುವುದರಿಂದ ಅವುಗಳಿಗೆ ತಾನು ಅನುಮೋದನೆ ನೀಡಿರುವುದಾಗಿ ಚುನಾವಣಾ ಆಯೋಗ ವಾದ ಮಂಡಿಸಿತ್ತು. ಅದನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಎಲೆಕ್ಟೊರಲ್ ಬಾಂಡ್ಗಳನ್ನು ಒಳಗೊಂಡ ವಹಿವಾಟುಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ತಾನು ಗಮನ ಹರಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಬಾಂಡ್ ಯೋಜನೆ ತಡೆ ಕುರಿತಂತೆ ಸುಪ್ರೀಂ ಮಹತ್ವದ ಆದೇಶ
'ಎಲೆಕ್ಟೊರಲ್ ಬಾಂಡ್ಗಳನ್ನು 2018ರಲ್ಲಿ ಪರಿಚಯಿಸಲಾಗಿತ್ತು. ಇದುವರೆಗೂ ಯಾವುದೇ ಅಡ್ಡಿಯಿಲ್ಲದೆ ಅವುಗಳನ್ನು ಮಾರಾಟ ಮಾಡಲಾಗಿದೆ. ಈ ಹಂತದಲ್ಲಿ ಅವುಗಳ ವಿತರಣೆಗೆ ತಡೆ ನೀಡುವುದಕ್ಕೆ ನಮಗೆ ಯಾವುದೇ ಕಾರಣ ಕಾಣಿಸುತ್ತಿಲ್ಲ' ಎಂದು ಕೋರ್ಟ್ ಹೇಳಿದೆ. ಮುಂದೆ ಓದಿ.
ಮಧ್ಯಂತರ ತಡೆಗೆ ಎಡಿಅರ್ ಅರ್ಜಿ
ಚುನಾವಣೆ ಮತ್ತು ರಾಜಕೀಯ ಸುಧಾರಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ಏಪ್ರಿಲ್ 1 ರಿಂದ ಏಪ್ರಿಲ್ 10ರ ನಡುವೆ ನಿಗದಿಪಡಿಸಿರುವ ಎಲೆಕ್ಟೊರಲ್ ಬಾಂಡ್ಗಳ ಮಾರಾಟಕ್ಕೆ ಮಧ್ಯಂತರ ತಡೆ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಚುನಾವಣೆ ವೇಳೆ ಪಕ್ಷಗಳಿಗೆ ಲಾಭ
ರಾಜಕೀಯ ಪಕ್ಷಗಳಿಗೆ ಬರುವ ಅನುದಾನ ಮತ್ತು ಅವುಗಳ ಖಾತೆಗಳ ಪಾರದರ್ಶಕತೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗೆಹರಿಯುವವರೆಗೂ ಬಾಂಡ್ಗಳ ಮಾರಾಟಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೆರಿಗಳ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಬೊಕ್ಕಸಕ್ಕೆ ಪ್ರಮುಖ ಕಂಪೆನಿಗಳು ಲಂಚದ ರೂಪದಲ್ಲಿ ಹಣ ತುಂಬಿಸಬಹುದು ಎಂದು ಎಡಿಆರ್ ಅನುಮಾನ ವ್ಯಕ್ತಪಡಿಸಿತ್ತು.
ಎಲೆಕ್ಷನ್ ಬಾಂಡ್ ಎಂದರೇನು: ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ?
ಲಂಚ ಪಡೆಯುವ ಸಾಧನ
ಎಡಿಆರ್ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, 'ಆಡಳಿತ ಪಕ್ಷವು ದೇಣಿಗೆ ರೂಪದಲ್ಲಿ ಲಂಚಗಳನ್ನು ಪಡೆಯಲು ಈ ಎಲೆಕ್ಟೊರಲ್ ಬಾಂಡ್ ಸಾಧನವಾಗಿ ಪರಿಣಮಿಸಿದೆ. ಇದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಹೇಳಿಕೆ ನೀಡಿದೆ. ಈ ವ್ಯವಸ್ಥೆಯು ಹಣಕಾಸು ಹಗರಣಗಳಿಗೆ ಮಾಧ್ಯಮ ಅಥವಾ ಅಸ್ತ್ರವಾಗಿ ದೊರಕಿದೆ ಎಂದು ಆರ್ಬಿಐ ಹೇಳಿದೆ' ಎಂದು ವಾದಿಸಿದರು. ಕಪ್ಪು ಹಣದ ಕುರಿತಾದ ತನ್ನ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸರ್ಕಾರದ ವಾಸ್ತವ ನಡೆಗೆ ಪುರಾವೆ ಇದು ಎಂದು ಅವರು ಹೇಳಿದರು.
ಆಡಳಿತ ಪಕ್ಷಕ್ಕೆ ಮಾತ್ರ ಲಾಭವಲ್ಲ
ಅವರ ಅನುಮಾನಗಳಿಗೆ ಪ್ರತಿಕ್ರಿಯಿಸಿದ ಕೋರ್ಟ್, ಅಂತಹ ವಹಿವಾಟುಗಳಲ್ಲಿ ಆಡಳಿತ ಪಕ್ಷ ಮಾತ್ರವೇ ಯಾವಾಗಲೂ ಫಲಾನುಭವಿ ಆಗಿರುವುದಿಲ್ಲ ಎಂದಿತು. ಪ್ರಶಾಂತ್ ಭೂಷಣ್ ವಾದವು ರಾಜಕೀಯ ಸಾಧನದ ನೈತಿಕತೆಗೆ ಹೆಚ್ಚು ಸಂಬಂಧಿಸಿದೆ ಎಂದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ಅಂತಹ ವಾದಗಳನ್ನು ಈಗಾಗಲೇ ಸುಪ್ರೀಂಕೋರ್ಟ್ ಆಲಿಸಲಿಲ್ಲವೇ? ಎಂದು ಪ್ರಶ್ನಿಸಿದರು.
ಗೊತ್ತಾಗುವುದು ಬ್ಯಾಂಕ್ಗೆ ಮಾತ್ರ!
'ಇದು ರಾಜಕೀಯ ನೈತಿಕತೆ ವಿಚಾರವಲ್ಲ, ಆದರೆ ಪ್ರಜಾಪ್ರಭುತ್ವ ನೈತಿಕತೆಯದ್ದು. ಜಗತ್ತಿನ ಬೇರೆ ಎಲ್ಲಿಯೂ ಇದು ನಡೆಯುತ್ತಿಲ್ಲ. ಚುನಾವಣಾ ಬಾಂಬ್ ಎನ್ನುವುದು ಸರ್ಕಾರಕ್ಕೆ ಲಂಚ ಪಡೆಯುವ ಸಾಧನವಾಗಿದೆ. ಯಾರು ಯಾವ ಪಕ್ಷಕ್ಕೆ ಎಷ್ಟು ಹಣ ನೀಡಿದರು ಎನ್ನುವುದು ಚುನಾವಣಾ ಆಯೋಗಕ್ಕೂ ತಿಳಿಯುವುದಿಲ್ಲ. ಕೇವಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಅದು ತಿಳಿಯುತ್ತದೆ. ಅದೂ ಕೂಡ ಸರ್ಕಾರದ ಸ್ವಾಮ್ಯದ್ದು' ಎಂದು ಪ್ರಶಾಂತ್ ಭೂಷಣ್ ಹೇಳಿದರು.
ದೇಣಿಗೆ ನೀಡಿರುವವರ ಮಾಹಿತಿ ಇರುವುದಿಲ್ಲ
ರಾಜಕೀಯ ಪಕ್ಷಗಳಿಗೆ ಹಣದ ರೂಪದಲ್ಲಿ ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಎಲೆಕ್ಟೊರಲ್ ಬಾಂಡ್ (ಚುನಾವಣಾ ಬಾಂಡ್) ನೀಡುವ ಪದ್ಧತಿ 2018ರಲ್ಲಿ ಜಾರಿಗೆ ಬಂದಿತ್ತು. ಎಸ್ಬಿಐ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ ಹತ್ತು ದಿನ ಎಲೆಕ್ಟೊರಲ್ ಬಾಂಡ್ ವಿತರಿಸಲಾಗುತ್ತದೆ. ಈ ಬಾಂಡ್ 15 ದಿನಗಳ ಕಾಲಾವಧಿ ಹೊಂದಿದ್ದು, ಅದರಲ್ಲಿ ದೇಣಿಗೆ ನೀಡಿದವರ ವಿವರ ಇರುವುದಿಲ್ಲ.