ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನಕ್ಕೆ ಆಕ್ಷೇಪ; ಏನಿದು ಹೊಸ ವಿವಾದ?
ರಾಜಸ್ತಾನ್ ಹಾಗೂ ದೆಹಲಿಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪ್ರದೀಪ್ ನಂದ್ರಜೋಗ್ ಹಾಗೂ ರಾಜೇಂದ್ರ ಮೆನನ್ ಅವರನ್ನು ನೇಮಿಸಿ, ಸುಪ್ರೀಂಕೋರ್ಟ್ ಕೊಲಿಜಿಯಂ ತೆಗೆದುಕೊಂಡಿದ್ದ ನಿರ್ಧಾರವನ್ನು ವಾಪಸ್ ಪಡೆಯಲಾಗಿದೆ. ಅವರ ಬದಲಿಗೆ ಕರ್ನಾಟಕ ಮುಖ್ಯ ನಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಹಾಗೂ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಸಂಜೀವ್ ಖನ್ನಾರನ್ನು ಶಿಫಾರಸು ಮಾಡಲಾಗಿದೆ.
ಈ ವಿಚಾರ ಇದೀಗ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಲ್ಲೇ ಸದ್ದು ಮಾಡುತ್ತಿದೆ. ಮುಖ್ಯ ನಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರಿರುವ ಕೊಲಿಜಿಯಂನಿಂದ ಆದ ಈ ದಿಢೀರ್ ಬದಲಾವಣೆ ಬಗ್ಗೆ ಸುಪ್ರೀಂ ಕೋರ್ಟ್ ನ ಹಲವು ನ್ಯಾಯಮೂರ್ತಿಗಳು ನೋವು ವ್ಯಕ್ತಪಡಿಸಿದ್ದಾರೆ. "ಸಾಂಸ್ಥಿಕ ತೀರ್ಮಾನ"ವನ್ನು ರಕ್ಷಿಸಲು ಇರುವ ದಾರಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಕರ್ನಾಟಕ ಹೈಕೋರ್ಟ್ಗೆ ಸಿಜೆ ಹೆಸರು ಶಿಫಾರಸು
ಈ ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧವಾಗಿರಬೇಕು. ಮುಖ್ಯವಾದ ತೀರ್ಮಾನವೊಂದು ಸದಸ್ಯರ ಪ್ರಭಾವದಿಂದ ಬದಲಾಯಿತು ಎಂಬ ಅಭಿಪ್ರಾಯ ಮೂಡದಂತೆ ನೋಡಿಕೊಳ್ಳಬೇಕು ಎಂಬುದರ ಪರವಾಗಿ ನ್ಯಾಯಮೂರ್ತಿಗಳು ಇದ್ದಾರೆ.
ಲಿಖಿತ ಆಕ್ಷೇಪಣೆ ಸಲ್ಲಿಕೆ
ಮೂಲಗಳ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ಸಂಜಯ್ ಕೌಲ್ ಈಗಾಗಲೇ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. ನಂದ್ರಜೋಗ್ ಅವರನ್ನು ಮೂಲೆಗುಂಪು ಮಾಡಿರುವುದು ಸರಿಯಲ್ಲ. ನಂದ್ರಜೋಗ್ ಈ ವಲಯದಲ್ಲಿಯೇ ಬಹಳ ಹಿರಿಯ ನ್ಯಾಯಮೂರ್ತಿಗಳು. ಅವರನ್ನು ಮೀರಿ ಬೇರೆಯವರ ನೇಮಕ ಮಾಡಿದರೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದಿದ್ದಾರೆ.
ನಂದ್ರಜೋಗ್ ಅವರು ಸುಪ್ರೀಂ ಕೋರ್ಟ್ ಗೆ ನೇಮಕ ಆಗುವುದಕ್ಕೆ ಅರ್ಹರಿದ್ದಾರೆ ಎಂದು ಸಮರ್ಥನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ತಾನು ಖನ್ನಾಗೆ ವಿರುದ್ಧವಲ್ಲ ಎಂದು ಕೂಡ ಹೇಳಿರುವ ಕೌಲ್, ಅವರ ಸರದಿ ಬಂದಾಗ ಆಯ್ಕೆ ಮಾಡಲಿ ಎಂದು ಕೂಡ ತಿಳಿಸಿದ್ದಾರೆ.
'ಇಂದು ಮಲ್ಹೋತ್ರ' ಸುಪ್ರೀಂ ಕೋರ್ಟ್ ಜಡ್ಜ್, ನ್ಯಾಯಾಂಗದಲ್ಲಿ ಹೊಸ ಇತಿಹಾಸ
ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಮಹೇಶ್ವರಿ ಹಾಗೂ ಖನ್ನಾ ಅವರನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ ಎಂದು ಶನಿವಾರ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಗೊಗೊಯ್, ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್, ಎ.ಕೆ.ಸಿಕ್ರಿ, ಎಸ್.ಎ.ಬೋಬಡೆ ಹಾಗೂ ಎನ್.ವಿ.ರಮಣ ಅವರನ್ನು ಒಳಗೊಂಡ ಕೊಲಿಜಿಯಂನಿಂದ ಕಳೆದ ಡಿಸೆಂಬರ್ 12ರಂದು ಭೇಟಿ ಆಗಿತ್ತು.
ಮಾಧ್ಯಮಗಳಲ್ಲಿ ಮಾಹಿತಿ ಸೋರಿಕೆ
ಆ ನಂತರ ನಂದ್ರಜೋಗ್ ಹಾಗೂ ಮೆನನ್ ರನ್ನು ಸುಪ್ರೀಂ ಕೋರ್ಟ್ ಗೆ ನ್ಯಾಯಮೂರ್ತಿಗಳಾಗಿ ನೇಮಕ ಶಿಫಾರಸು ಮಾಡಿ, ಐವರೂ ಸಹಿ ಮಾಡಿದ್ದರು. ಆದರೆ ಈ ನಿರ್ಧಾರವನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಇದರಿಂದ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿಗಳಾದ ಗೊಗೊಯ್, ಕೊಲಿಜಿಯಂನ ಮುಂದಿನ ಸಭೆ ಇರುವ ಜನವರಿ 5, 6ರಂದು ಮತ್ತೊಮ್ಮೆ ಪರಿಶೀಲಿಸಬೇಕು ಎಂದಿದ್ದರು.
ಜನವರಿ 5, 6ರಂದು ಕೊಲಿಜಿಯಂ ಭೇಟಿ ಆದಾಗ ಲೋಕುರ್ ನಿವೃತ್ತರಾಗಿದ್ದರು. ನ್ಯಾ. ಅರುಣ್ ಮಿಶ್ರಾ ಸಮಿತಿಗೆ ಬಂದಿದ್ದರು. ಸಭೆಯ ವೇಳೆ ನಂದ್ರಜೋಗ್ ನೇತೃತ್ವದ ದೆಹಲಿ ಹೈ ಕೋರ್ಟ್ ಪೀಠ ನೀಡಿದ್ದ ತೀರ್ಪೊಂದರ ಬಗ್ಗೆ ಚರ್ಚೆ ನಡೆದು, ಆ ಸಮಯದಲ್ಲಿ ನೀಡಿದ್ದ ಆದೇಶ ಪ್ರತಿಯಲ್ಲಿನ ತಪ್ಪುಗಳ ಬಗ್ಗೆ ಪ್ರಸ್ತಾವ ಆಗಿ, ಈ ಹಿಂದಿನ ನಿರ್ಧಾರವನ್ನು ಬದಲಿಸಿಕೊಳ್ಳಲು ತೀರ್ಮಾನಿಸಲಾಯಿತು.
ನಂದ್ರಜೋಗ್ ವಿಚಾರದಲ್ಲಿ ಕೊಲಿಜಿಯಂನಿಂದ ಹೀಗೆ ದಿಢೀರ್ ಅಂತ ನಿರ್ಧಾರ ಬದಲಾಯಿತು ಎಂಬ ಕಾರಣಕ್ಕೆ ವಕೀಲರು ಹಾಗೂ ದೆಹಲಿ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿಗಳ ಬೇಸರಕ್ಕೆ ಕಾರಣವಾಯಿತು. ಆದರೆ ಖನ್ನಾ ಅವರ ನೇಮಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಭಿನ್ನಾಭಿಪ್ರಾಯಗಳಿಲ್ಲ. ಅವರ ಸಾಮರ್ಥ್ಯದ ಬಗ್ಗೆಯೂ ಅನುಮಾನಗಳಿಲ್ಲ.
ಲೋಕುರ್ ಮಾತುಗಳು ಚರ್ಚೆಗೆ ಕಾರಣವಾದವು
ಆದರೆ, ಕೊಲಿಜಿಯಂನಿಂದ ದಿಢೀರ್ ಬದಲಾವಣೆ ಆಗುವ ಮುನ್ನ ನಿವೃತ್ತ ನ್ಯಾಯಮೂರ್ತಿ ಲೋಕುರ್ ಹೇಳಿದ ಮಾತುಗಳು ಚರ್ಚೆ ಹುಟ್ಟು ಹಾಕಿದವು. ನಂದ್ರಜೋಗ್ ಹಾಗೂ ಮೆನನ್ ಅವರನ್ನು ಆಯ್ಕೆ ಮಾಡಿ, ಕೊಲಿಜಿಯಂನ ಐವರೂ ಸದಸ್ಯರು ಡಿಸೆಂಬರ್ ಹನ್ನೆರಡರಂದೇ ಸಹಿ ಹಾಕಿದ್ದೆವು ಎಂದು ಅವರು ಹೇಳಿದ್ದು, ಚರ್ಚೆಗೆ ಕಾರಣವಾಗಿದೆ.
ಇದೀಗ ಸುಪ್ರೀಂ ಕೋರ್ಟ್ ನಿಂದ ಬದಲಾವಣೆ ಆದ ಬಗ್ಗೆ ವೆಬ್ ಸೈಟ್ ನಲ್ಲಿ ವಿವರಣೆ ಹಾಕಲಾಗಿದೆ. ಈ ಹಿಂದೆ ಕೊಲಿಜಿಯಂ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದರೆ ಅಗತ್ಯ ಒಪ್ಪಿಗೆ ತೆಗೆದುಕೊಂಡಿರಲಿಲ್ಲ. ಚಳಿಗಾಲದ ರಜೆ ಮಧ್ಯೆ ಬಂದಿದ್ದರಿಂದ ಹಾಗಾಗಿತ್ತು. ಕೋರ್ಟ್ ಮತ್ತೆ ಆರಂಭವಾದಾಗ ಕೊಲಿಜಿಯಂನಲ್ಲಿ ಬದಲಾವಣೆ ಆಯಿತು (ಲೋಕುರ್ ನಿವೃತ್ತರಾಗಿ ಮಿಶ್ರಾ ಬಂದರು).
ದೀರ್ಘ ಚರ್ಚೆ ನಡೆಸಿದ ನಂತರ, ಹೆಚ್ಚುವರಿ ಮಾಹಿತಿ ಮುಂದಿಟ್ಟುಕೊಂಡು ಪ್ರಸ್ತಾವವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎನಿಸಿ, ಆ ನಂತರ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಲಾಗಿದೆ.