ಕೊರೊನಾ ಪ್ರಕರಣ ಹೆಚ್ಚಳ; "ಸೂಪರ್ ಸ್ಪ್ರೆಡರ್" ಕಾರಣ ಮುಂದಿಟ್ಟ ತಜ್ಞರು
ನವದೆಹಲಿ, ಫೆಬ್ರವರಿ 27: ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, ಕೊರೊನಾ ರೂಪಾಂತರ ಸೋಂಕಿಗೂ, ದೇಶದಲ್ಲಿ ಪ್ರಕರಣಗಳ ಏಕಾಏಕಿ ಏರಿಕೆಗೂ ಸಂಬಂಧವಿರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಶಂಕೆಯನ್ನು ನಿರಾಕರಿಸಿರುವ ತಜ್ಞರು, ಇದು ರೂಪಾಂತರ ಸೋಂಕಿನಿಂದ ಬಂದೊದಗಿರುವ ಸ್ಥಿತಿಯಲ್ಲ ಎಂದಿದ್ದಾರೆ.
ಮಹಾರಾಷ್ಟ್ರ, ಪಂಜಾಬ್, ಕೇರಳ, ಛತ್ತೀಸ್ಗಡ ಹಾಗೂ ಕರ್ನಾಟಕದಲ್ಲಿ ರೂಪಾಂತರ ಸೋಂಕು ಯಾವುದೇ ಪರಿಣಾಮ ಬೀರಿಲ್ಲ ಎಂದು ದೃಢಪಡಿಸಿದ್ದಾರೆ. ಈಚೆಗೆ ಏರಿಕೆಯಾಗಿರುವ ಕೊರೊನಾ ಪ್ರಕರಣಗಳಿಗೂ, ರೂಪಾಂತರ ಸೋಂಕಿಗೂ ಯಾವುದೇ ಸಂಬಂಧವಿಲ್ಲ, ಇದನ್ನು ಸಾಬೀತು ಪಡಿಸುವ ಅಂಶವೂ ದೊರೆತಿಲ್ಲ ಎಂದು ತಜ್ಞರು ತಿಳಿಸಿದ್ದು, ಪ್ರಕರಣಗಳ ಏರಿಕೆಗೆ ಮತ್ತೊಂದು ಕಾರಣವನ್ನು ವಿಶ್ಲೇಷಿಸಿ ಎಚ್ಚರಿಕೆ ನೀಡಿದ್ದಾರೆ. ಏನದು? ಮುಂದೆ ಓದಿ...
ಕೇಂದ್ರ ಕೋವಿಡ್ 19 ಮಾರ್ಗಸೂಚಿ ಮಾರ್ಚ್ 31ರವರೆಗೆ ವಿಸ್ತರಣೆ
ಸೂಪರ್ ಸ್ಪ್ರೆಡರ್ ಸಭೆ ಸಮಾರಂಭಗಳು ಕಾರಣ
"ಮನಿ ಕಂಟ್ರೋಲ್" ಜತೆ ಮಾತನಾಡಿರುವ ನಿಮ್ಹಾನ್ಸ್ ನ್ಯೂರೋಬಯೋಲಜಿಯ ನಿವೃತ್ತ ಪ್ರೊ. ಡಾ.ವಿ.ರವಿ, ಸದ್ಯ ಕೊರೊನಾ ವೈರಸ್ನ ಜಿನೋಮ್ ಪರೀಕ್ಷೆಗೆ ನೋಡಲ್ ಅಧಿಕಾರಿಯಾಗಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿಂದಿನ ಕಾರಣವನ್ನು ವಿಶ್ಲೇಷಿಸಿರುವ ಅವರು, ಕೊರೊನಾ "ಸೂಪರ್ ಸ್ಪ್ರೆಡರ್" ಸಭೆ ಸಮಾರಂಭಗಳು ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
"ಇದು ರೂಪಾಂತರ ಸೋಂಕಿನಿಂದಲ್ಲ"
ನಿಮ್ಹಾನ್ಸ್ನಲ್ಲಿ ಈ ಕುರಿತು ಜೆನೋಮಿಕ್ ಸೀಕ್ವೆನ್ಸಿಂಗ್ ನಡೆಸುತ್ತಿದ್ದೇವೆ. ಕೊರೊನಾ ರೂಪಾಂತರಗಳಲ್ಲಿ 440ರಿಂದ 484 ತಳಿಗಳು ಪತ್ತೆಯಾಗಿವೆ. ಆದರೆ ಪ್ರಸ್ತುತ ಅತಿ ವೇಗವಾಗಿ ಹರಡುತ್ತಿರುವ ವೈರಸ್ ಪ್ರಕರಣಗಳು ಇವಾಗಿಲ್ಲ ಎಂದು ಹೇಳಿದ್ದಾರೆ. ಸೂಪರ್ ಸ್ಪ್ರೆಡರ್ ಆಗಿರುವ ಸಾಮಾಜಿಕ ಸಭೆ, ಸಮಾರಂಭ, ಕಾರ್ಯಕ್ರಮಗಳು ಏಕಾಏಕಿ ಪ್ರಕರಣಗಳ ಏರಿಕೆ ಹಿಂದಿನ ಕಾರಣವಿರಬಹುದು ಎಂದು ಅಂದಾಜಿಸಿದ್ದಾರೆ.
ಸೋಂಕಿನ ಟ್ರ್ಯಾಕಿಂಗ್, ಪರೀಕ್ಷೆ ಕೂಡ ಚುರುಕಾಗಬೇಕಿದೆ
ಸೂಪರ್ ಸ್ಪ್ರೆಡರ್ ಸಮಾರಂಭಗಳು ಒಂದು ವಿಷಯವಾದರೆ, ಕೊರೊನಾ ಸೋಂಕಿನ ಪ್ರಕರಣಗಳ ಟ್ರ್ಯಾಕಿಂಗ್, ಪರೀಕ್ಷೆಯಲ್ಲಿ ಹಿಂದುಳಿದಿರುವುದು ಮತ್ತೊಂದು ಕಾರಣ ಎಂದು ತಿಳಿಸಿದ್ದಾರೆ. ಈಗಿನ ಹೊಸ ರೂಪಾಂತರ ಕೊರೊನಾ ಸೋಂಕಿನ ಮೇಲೆ ಕೊರೊನಾ ಲಸಿಕೆಗಳ ದಕ್ಷತೆ ಕುರಿತು ಮಾಹಿತಿ ನೀಡಿದ್ದು, ಈ ಲಸಿಕೆಗಳು ರೂಪಾಂತರ ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಾಬೀತುಪಡಿಸುವ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದಿದ್ದಾರೆ.
ಮಾರ್ಚ್ 31ರವರೆಗೆ ಮಾರ್ಗಸೂಚಿ ವಿಸ್ತರಣೆ
ಕೋವಿಡ್-19 ಸಾಂಕ್ರಾಮಿಕ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾರ್ಗಸೂಚಿಗಳನ್ನು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲ, ಕೋವಿಡ್-19 ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ನಿಗ್ರಹಿಸಲು ಕಟ್ಟುನಿಟ್ಟಿನ ಎಚ್ಚರಿಕೆ ಮತ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಗೊಂಡ ಬಳಿಕ ದೇಶದಲ್ಲಿ ಕೇಂದ್ರ ಗೃಹ ಸಚಿವಾಲಯ ಅನ್ ಲಾಕ್ ಮಾರ್ಗಸೂಚಿ ಜಾರಿಗೊಳಿಸಿತ್ತು. ಇಂತಹ ಕೋವಿಡ್ ಮಾರ್ಗಸೂಚಿಗಳನ್ನು ಮಾರ್ಚ್ 31ರವರೆಗೆ ಕೇಂದ್ರ ಗೃಹ ಸಚಿವಾಲಯ(MHA) ವಿಸ್ತರಿಸಿದೆ.