ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ : ಸುಮಿತ್ರಾ ಮಹಾಜನ್
ನವದೆಹಲಿ, ಏಪ್ರಿಲ್ 06 : 'ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇಂದೋರ್ ಕ್ಷೇತ್ರಕ್ಕೆ ಯಾರನ್ನು ಬೇಕಾದರೂ ಅಭ್ಯರ್ಥಿಯಾಗಿ ಘೋಷಣೆ ಮಾಡಿ' ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
75 ವರ್ಷದ ಸುಮಿತ್ರಾ ಮಹಾಜನ್ ಅವರು 2019ರ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಮೌನ ಮುರಿದಿದ್ದಾರೆ. ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಿಂದ 8 ಬಾರಿ ಅವರು ಸಂಸತ್ಗೆ ಆಯ್ಕೆಯಾಗಿದ್ದಾರೆ.
ಇಂದೋರ್ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಸುಮಿತ್ರಾ ಮಹಾಜನ್ ಅವರು ಅಸಮಾಧಾನಗೊಂಡಿರಬಹುದು ಎಂಬ ಸುದ್ದಿಗಳು ಹಬ್ಬಿವೆ.
ಅಡ್ವಾಣಿ ಜಾಗದಲ್ಲಿ ಅಮಿತ್ ಶಾ, ನಿರ್ಧಾರದಲ್ಲಿ ತಪ್ಪಿಲ್ಲ ಎಂದ ಬಿಜೆಪಿ
'ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಈ ಮೂಲಕ ನನ್ನ ಸ್ಪರ್ಧೆ ಬಗ್ಗೆ ಇರುವ ಉಹಾಪೋಹಗಳಿಗೆ ತೆರೆ ಎಳೆಯುತ್ತಿದ್ದೇನೆ' ಎಂದು ನವದೆಹಲಿಯಲ್ಲಿ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
'ಪಕ್ಷದ ನಾಯಕರು ಯಾರಿಗೆ ಬೇಕಾದರೂ ಇಂದೋರ್ ಕ್ಷೇತ್ರದ ಟಿಕೆಟ್ ನೀಡಬಹುದು, ಅದಕ್ಕೆ ನನ್ನ ವಿರೋಧವಿಲ್ಲ. ಅವರು ಘೋಷಣೆ ಮಾಡಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ' ಎಂದು ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
ಮುಂದಿನ ವಾರ ಸುಮಿತ್ರಾ ಮಹಾಜನ್ ಅವರು 76ನೇ ವಸಂತಕ್ಕೆ ಕಾಲಿಡಲಿದ್ದಾರೆ. 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡಬಾರದು ಎಂಬುದು ಬಿಜೆಪಿಯ ಚಿಂತನೆ. ಆದ್ದರಿಂದ, ಇಂದೋರ್ ಕ್ಷೇತ್ರದ ಅಭ್ಯರ್ಥಿ ಇನ್ನೂ ಘೋಷಣೆ ಮಾಡಿಲ್ಲ.