ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಜನವರಿ 31: ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಮಾತು ಉರಿ ಬೆಂಕಿ. ಅವರಿಗೆ ಸ್ವ-ಪಕ್ಷ, ವಿರೋಧ ಪಕ್ಷದ ಭೇದ ಇಲ್ಲ. ತಪ್ಪು ಎನಿಸಿದ ವಿಚಾರವನ್ನು ಅದುಮಿಟ್ಟುಕೊಂಡವರೇ ಅಲ್ಲ. ಯಾರಾದರೂ ಸರಿಯೇ ಪ್ರಶ್ನಿಸದೇ ಬಿಡರು. ಈಗಲೂ ಹಾಗೇ ಆಗಿದೆ ಅವರು ತಮ್ಮದೇ ಪಕ್ಷದ ರಕ್ಷಣಾ ಸಚಿವರ ವಿರುದ್ಧವೇ ಹರಿಹಾಯ್ದಿದ್ದಾರೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ವಿಧಾನಸಭಾ ಕಲಾಪದಲ್ಲಿ ಕೋಲಾಹಲ ಸೃಷ್ಠಿಸಿದ ಶೋಫಿಯನ್ ಆರ್ಮಿ ಫೈರಿಂಗ್ ಪ್ರಕರಣದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಅವರು ಕೋಪಗೊಂಡಿದ್ದಾರೆ.
ಟ್ರಂಪ್, ಪಾಕ್ ವಿರೋಧಿ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿ ಬೆಂಬಲ
ಕಾಶ್ಮೀರ ಪೊಲೀಸರು ಸೇನೆಯ ತುಕಡಿ ಹಾಗೂ ಮೇಜರ್ ಆದಿತ್ಯಾ ಎಂಬುವರ ಮೇಲೆ ಕೊಲೆ ಕೇಸು ದಾಖಲಿಸಿದ್ದು, ಕೇಸು ದಾಖಲಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೂಚನೆ ನೀಡಿದ್ದರು ಎಂಬ ಕಾಶ್ಮೀರ ಮುಖ್ಯಮಂತ್ರಿ ಅವರು ಹೇಳಿದ್ದಾರೆ ಹಾಗಾಗಿ ಸುಬ್ರಮಣಿಯನ್ ಸ್ವಾಮಿ ಅವರು ನಿರ್ಮಲಾ ಸೀತಾರಾಮನ್ ಅವರ ಮೇಲೆ ಗರಂ ಆಗಿದ್ದಾರೆ.
ಶೋಫಿಯಾನ್ ಎಂಬಲ್ಲಿ ಮಿಲಿಟರಿ ತುಕಡಿಯೊಂದು ಸಾರ್ವಜನಿಕರ ಮೇಲೆ ಗುಂಡು ಹಾರಿಸಿದೆ, ಗುಂಡಿನ ದಾಳಿಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರ ಪೊಲೀಸರು ಆರ್ಮಿ ಮೇಜರ್ ಮತ್ತು ಅವರ ತುಕಡಿಯ ಮೇಲೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಜಮ್ಮು ಕಾಶ್ಮೀರ ವಿಧಾನಸಭೆ ಕಲಾಪದಲ್ಲಿ ಭಾರಿ ಕೊಲಾಹಲ ಸೃಷ್ಠಿಸಿತ್ತು. ಸದನಕ್ಕೆ ಉತ್ತರಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಅವರು 'ನಾನು ಪ್ರಕರಣದ ಬಗ್ಗೆ ರಕ್ಷಣಾ ಸಚಿವರ ಬಳಿ ಮಾತನಾಡಿದೆ, ಅವರು ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು' ಎಂದಿದ್ದರು.
ಆದರೆ ಸೇನೆಯು, ಫೈರಿಂಗ್ ನಡೆಸಿದ್ದು ಆತ್ಮರಕ್ಷಣೆಗಾಗಿ, ಅಂದು ಅಲ್ಲಿ ವಿಪರೀತ ಕಲ್ಲೆಸೆತ ನಡೆಯಿತು, ನಮ್ಮ ಒಬ್ಬ ಅಧಿಕಾರಿ ತೀವ್ರವಾಗಿ ಗಾಯಗೊಂಡ ಹಾಗಾಗಿ ನಾವು ಗುಂಡು ಹಾರಿಸಿದೆವು ಎಂದು ಹೇಳಿದೆ. ಸುಬ್ರಮಣಿಯನ್ ಸ್ವಾಮಿ ಅವರು ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ.
ಸೇನೆ ವಿರುದ್ಧ ಕೊಲೆ ಕೇಸು ದಾಖಲಿಸಲು ಬೆಂಬಲ ಸೂಚಿಸಿರುವ ರಕ್ಷಣಾ ಮಂತ್ರಿಗಳ ನಿರ್ಧಾರದ ಬಗ್ಗೆ ಕೋಪಗೊಂಡಿರುವ ಸುಬ್ರಮಣಿಯನ್ ಸ್ವಾಮಿ ಅವರು 'ನಿರ್ಮಲಾ ಸೀತಾರಾಮನ್ ಅವರ ನಡೆ ಪಕ್ಷದ ನಿಯಮಗಳಿಗೆ ವಿರುದ್ಧವಾದುದು, ದೇಶಪ್ರೇಮ ಮತ್ತು ದೇಶಭಕ್ತಿಗೆ ವಿರುದ್ಧವಾದ ನಡೆ ಅದು ಎಂದಿದ್ದಾರೆ.
ಪ್ರಕರಣದ ಬಗ್ಗೆ ಫೆಬ್ರವರಿ 2ರ ಒಳಗೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯೆ ನೀಡಲಿಲ್ಲವೆಂದರೆ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವುದಾಗಿ ಅವರು ಹೇಳಿದ್ದಾರೆ. ಸದನದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮದೇ ಪಕ್ಷದ ಸಚಿವರ ವಿರುದ್ಧ ಪ್ರಶ್ನೆ ಮಾಡಿದರೆ ಬಿಜೆಪಿ ಪೇಚಿಗೆ ಸಿಲುಕುವುದು ಖಂಡಿತ.