ರಾಷ್ಟ್ರಗೀತೆ ಬದಲಿಸಿ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ
ನವದೆಹಲಿ, ಡಿಸೆಂಬರ್ 2: ರವೀಂದ್ರ ನಾಥ್ ಟ್ಯಾಗೋರ್ ಅವರು ಬರೆದ 'ಜನ ಗಣ ಮನ' ರಾಷ್ಟ್ರಗೀತೆಯ ಪ್ರಸ್ತುತ ಆವೃತ್ತಿಯನ್ನು ಬದಲಿಸಿ, ಸುಭಾಷ್ ಚಂದ್ರ ಬೋಸ್ ಅವರ ಐಎನ್ಎದಲ್ಲಿ ಹಾಡಲಾಗುತ್ತಿದ್ದ ಆವೃತ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪತ್ರ ಬರೆದಿದ್ದಾರೆ.
1943ರ ಅಕ್ಟೋಬರ್ 21ರಂದು ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆ (ಐಎನ್ಎ) ಸಂಯೋಜಿಸಿದ ಮತ್ತು ಹಾಡಿದ ಆವೃತ್ತಿ ಹೆಚ್ಚು ಸೂಕ್ತವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ರವೀಂದ್ರನಾಥ್ ಟ್ಯಾಗೋರ್ ಅವರು ಬರೆದ ರಾಷ್ಟ್ರಗೀತೆಯಲ್ಲಿನ ಪದಗಳು, ಈ ಪದ್ಯ ಯಾರನ್ನು ಕುರಿತದ್ದಾಗಿದೆ ಎಂಬ ಬಗ್ಗೆ ಅನಗತ್ಯವಾದ ಅನುಮಾನಗಳನ್ನು ಹುಟ್ಟಿಸುತ್ತಿವೆ. ಹಾಗೆಯೇ ಇದು 1947ರ ನಂತರದ ಸ್ವತಂತ್ರ ಭಾರತಕ್ಕೆ ಸೂಕ್ತವಾಗಿಲ್ಲ ಎಂದು ಸ್ವಾಮಿ ಹೇಳಿದ್ದಾರೆ. ರಾಷ್ಟ್ರಗೀತೆಯಲ್ಲಿನ 'ಸಿಂಧ್' ಪದವನ್ನು ಮುಖ್ಯವಾಗಿ ಉಲ್ಲೇಖಿಸಿರುವ ಅವರು, ಇದು ಭಾರತದ ಭೂಭಾಗದಲ್ಲಿಯೇ ಉಳಿದುಕೊಂಡಿಲ್ಲ ಎಂದು ಉದಾಹರಣೆಯಾಗಿ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು 'ಜನಗಣಮನ...' ಹಾಡಿದ ಡಿವೈಎಸ್ಪಿ
''ರಾಷ್ಟ್ರಗೀತೆ 'ಜನ ಗಣ ಮನ'ದಲ್ಲಿರುವ ಕೆಲವು ಪದಗಳನ್ನು, ಸುಭಾಷ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಮಣಿಪುರದ ಇಂಫಾಲವನ್ನು ವಶಪಡಿಸಿಕೊಂಡ ಬಳಿಕ 1943ರ ಅಕ್ಟೋಬರ್ 21ರಂದು ಭಾರತದ ಸ್ವಾತಂತ್ರ್ಯವನ್ನು ಘೋಷಿಸಿದ ಸಂದರ್ಭದಲ್ಲಿ ಸಂಯೋಜಿಸಿ ಹಾಡಿದ 'ಜನ ಗಣ ಮನ' ಪದ್ಯದ ಪದಗಳಿಂದ ಬದಲಿಸಬೇಕು ಎನ್ನುವುದು ದೇಶದ ಬಹುದೊಡ್ಡ ಸಂಖ್ಯೆಯ ಯುವಜನರ ಬೇಡಿಕೆಯೂ ಆಗಿದೆ ಎಂದು ಸ್ವಾಮಿ ಹೇಳಿದ್ದಾರೆ.
ವಿಡಿಯೋ ವೈರಲ್; ಭಾರೀ ಮಳೆಯಲ್ಲೂ ಕದಲದೇ ರಾಷ್ಟ್ರಗೀತೆ ಹಾಡಿದ ಶಾಲಾ ಮಕ್ಕಳು
ತಿದ್ದುಪಡಿ ಮಾಡಬಹುದು
ದೇಶದ ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು 1949ರ ನವೆಂಬರ್ 26ರಂದು ನೀಡಿದ ಹೇಳಿಕೆಯನ್ನು ಕೂಡ ಸ್ವಾಮಿ ಉಲ್ಲೇಖಿಸಿದ್ದಾರೆ. ಭವಿಷ್ಯದಲ್ಲಿ ರಾಷ್ಟ್ರಗೀತೆಯನ್ನು ತಿದ್ದುಪಡಿ ಮಾಡಬಹುದು ಅಥವಾ ಬದಲಾವಣೆ ಮಾಡಬಹುದು ಎಂದು ರಾಜೇಂದ್ರ ಪ್ರಸಾದ್ ಅಂದು ಹೇಳಿದ್ದರು.
ಶತ್ರುದೇಶದ ಪ್ರದೇಶದ ವರ್ಣನೆ ಏಕೆ?
'ರಾಷ್ಟ್ರಗೀತೆಯಲ್ಲಿ ಭಾರತದ ಈಶಾನ್ಯ ಭಾಗಗಳ ಪ್ರಸ್ತಾಪವೇ ಇಲ್ಲ. ಆದರೆ ಈಗ ಪಾಕಿಸ್ತಾನದ ಭಾಗವಾಗಿರುವ ಸಿಂಧ್ ಬಗ್ಗೆ ಉಲ್ಲೇಖವಿದೆ. ನಮ್ಮ ಶತ್ರುದೇಶದಲ್ಲಿನ ಸ್ಥಳವನ್ನು ನಾವೇಕೆ ವೈಭವೀಕರಿಸುತ್ತಿದ್ದೇವೆ? ಅದರಲ್ಲಿ ಅರ್ಥವೇ ಇಲ್ಲ' ಎಂದು ಸ್ವಾಮಿ ಪತ್ರದಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲು ಹಾಡಿದ್ದು
ರವೀಂದ್ರನಾಥ್ ಟ್ಯಾಗೋರ್ ಅವರು ಬರೆದ 'ಜನ ಗಣ ಮನ'ವನ್ನು 1911ರ ಡಿಸೆಂಬರ್ 27ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕಲ್ಕತ್ತಾ ಅಧಿವೇಶನದ ವೇಳೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಲಾಗಿತ್ತು.
ಎನ್ಐಎ ಹಾಡಿದ ಗೀತೆ
ಐಎನ್ಎ ಗೀತೆಯು ಟ್ಯಾಗೋರ್ ಅವರು ಬರೆದ ಬಾಂಗ್ಲಾ ಗೀತೆ 'ಸುಭ್ ಸುಖ್ ಚೈನ್'ನ ಹಿಂದೂಸ್ತಾನಿ ಆವೃತ್ತಿಯಾಗಿದೆ. ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಇಬ್ಬರು ಜನರಲ್ಗಳಾದ ಮುಮ್ತಾಜ್ ಹುಸೇನ್ ಮತ್ತು ಕರ್ನಲ್ ಅಬಿದ್ ಹಾಸನ್ ಸಫ್ರಾನಿ ಅವರ ನೆರವಿನಿಂದ ಟ್ಯಾಗೋರ್ ಅವರ ಪದ್ಯವನ್ನು ಅನುವಾದಿಸಿ 'ಸುಭ್ ಸುಖ್ ಚೈನ್' ಸೃಷ್ಟಿಸಿದ್ದರು. ಇದಕ್ಕೆ ಕ್ಯಾಪ್ಟನ್ ರಾಮ್ ಸಿಂಗ್ ಠಾಕೂರ್ ಸಂಗೀತ ಸಂಯೋಜನೆ ಮಾಡಿದ್ದರು. 55 ಸೆಕೆಂಡುಗಳ ಪದ್ಯಕ್ಕೆ 'ಖುವಾಮಿ ತರಾನಾ' ಎಂಬ ಹೆಸರೂ ಇದೆ.
Recommended Video
ಸಂಸತ್ನಲ್ಲಿಯೂ ಬೇಡಿಕೆ
2019ರಲ್ಲಿ ಕಾಂಗ್ರೆಸ್ ಸಂಸದ ರಿಪುನ್ ಬೋರಾ ಅವರು ಖಾಸಗಿ ಸದಸ್ಯರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ರಾಷ್ಟ್ರಗೀತೆಯಲ್ಲಿ ಈಶಾನ್ಯ ರಾಜ್ಯಗಳನ್ನು ಅಳವಡಿಸುವ ಮತ್ತು ಸಿಂಧ್ ಹೆಸರನ್ನು ಕೈಬಿಡುವ ಬಗ್ಗೆ ಒತ್ತಾಯಿಸಿದ್ದರು. 2016ರಲ್ಲಿ ಕೇಂದ್ರ ಸಚಿವ ಅರವಿಂದ್ ಸಾವಂತ್ ಕೂಡ ಇದೇ ಬೇಡಿಕೆ ಇರಿಸಿದ್ದರು.