ಬಿಜೆಪಿಗೆ ಕಸಿವಿಸಿ ಉಂಟುಮಾಡಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್
ನವದೆಹಲಿ ಏಪ್ರಿಲ್ 5: ಕೊರೊನಾವೈರಸ್ ಸೋಂಕಿನ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರದೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ಪರೋಕ್ಷವಾಗಿ ಟೀಕಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏಕಾಏಕಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿಗಳನ್ನು ಸುಬ್ರಮಣಿಯನ್ ಸ್ವಾಮಿ 'ಗಂಧಭಕ್ತರು' ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮದೇ ಸರ್ಕಾರ ಹಾಗೂ ಪಕ್ಷದ ವಿರುದ್ಧ ನೇರಾನೇರ ವಾಗ್ದಾಳಿ ನಡೆಸುವುದರಲ್ಲಿ ಹೆಸರಾದ ಸುಬ್ರಮಣಿಯನ್ ಸ್ವಾಮಿ ಅವರು ಭಾನುವಾರ ಪೋಸ್ಟ್ ಮಾಡಿರುವ ಟ್ವೀಟ್, ಬಿಜೆಪಿಗೆ ಕಸಿವಿಸಿ ಉಂಟುಮಾಡಿದೆ.
ಬ್ಯಾಂಕಿಂಗ್ ಹಗರಣ: ಆರ್ಬಿಐ ವಿರುದ್ಧ ಕಾನೂನು ಸಮರ ಸಾರಿದ ಸುಬ್ರಮಣಿಯನ್ ಸ್ವಾಮಿ
'2020ರ ಏಪ್ರಿಲ್ ಮಧ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳು ದಿನವೂ 1 ಲಕ್ಷದಷ್ಟು ವರದಿಯಾಗುತ್ತಿದ್ದು, ನವೆಂಬರ್ ವೇಳೆಗೆ 10,000ಕ್ಕೆ ಇಳಿಯಿತು. ಅಂಧಭಕ್ತರು ಮತ್ತು ಗಂಧಭಕ್ತರು (ಕೊಳಕು) ಯಾರಿಗೆ ಅದರ ಶ್ರೇಯಸ್ಸು ನೀಡಿದ್ದರು? ಈಗ ಪ್ರಕರಣಗಳು ಮತ್ತೆ ಒಂದು ಲಕ್ಷಕ್ಕೆ ಏರಿಕೆಯಾಗುತ್ತಿವೆ. ಹಾಗಾದರೆ ಈಗ ಯಾರು ಶ್ರೇಯಸ್ಸು ತಮ್ಮದು ಎಂದು ಹೇಳಿಕೊಳ್ಳುತ್ತಾರೆ?' ಎಂದು ಸ್ವಾಮಿ ಟೀಕಿಸಿದ್ದಾರೆ.
When the Coronavirus Pandemic cases were running at 100,000 daily mid April 2020 and fell to 10, 000 by November. who was given the credit by Andhbhakts and Gandhbahkts ? Now have the cases risen again to 100, 000 again? Then who will now claim credit?
— Subramanian Swamy (@Swamy39) April 4, 2021
ಸ್ವಾಮಿ ಅವರ ಟ್ವೀಟ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ಬೇಸಿಗೆ ಕಾಲದಲ್ಲಿ ಮಾತ್ರವೇ ಕೊರೊನಾ ವೈರಸ್ ತೀವ್ರಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ವೈರಸ್ ಹರಡಲು ಹವಾಮಾನ ಕಾರಣ ಎಂಬರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು.
ರಾಮನ ಭಾರತದಲ್ಲಿ 93, ರಾವಣನ ಲಂಕಾದಲ್ಲಿ 51: ಪೆಟ್ರೋಲ್ ದರಕ್ಕೆ ಸ್ವಾಮಿ ಹೋಲಿಕೆ!
ಅವರ ಟ್ವೀಟ್ಗೆ ಪ್ರತ್ಯುತ್ತರ ನೀಡಿರುವ ಸ್ವಾಮಿ, 'ಅಂಧಭಕ್ತರು ಮತ್ತು ಗಂಧಭಕ್ತರಿಗೆ ಅಗತ್ಯವಾಗಿರುವ ನೆಪವೊಂದು ನಿಮಗೆ ಸಿದ್ಧವಾಗಿ ದೊರಕಿದೆ' ಎಂದು ಹೇಳಿದ್ದಾರೆ.
ಸ್ವಾಮಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವಿನ ಟ್ವೀಟ್ ಸಮರಕ್ಕೆ ಕಾರಣವಾಗಿದೆ.