'ಮಸೀದಿಯು ಇಸ್ಲಾಂನ ಮುಖ್ಯ ಭಾಗವೇ ಎಂದು ತಿಳಿಯಲು 2 ವರ್ಷ ಬೇಕಾ?'
ನವದೆಹಲಿ, ಸೆಪ್ಟೆಂಬರ್ 24: ಒಂದು ವೇಳೆ ಸಂಸತ್ ನಿಂದ ಸಂವಿಧಾನಕ್ಕೆ ವಿರುದ್ಧವಾದ ಕಾನೂನು ಮಾಡಿದರೆ ಆಗ ಸುಪ್ರೀಂ ಕೋರ್ಟ್ ಸರ್ವೋಚ್ಚ ಆಗುತ್ತದೆ. ಆದರೆ ಕಾನೂನು ರೂಪಿಸುವ ಅಧಿಕಾರ ಇರುವುದು ಸಂಸತ್ ಗೆ ಅದರರ್ಥ ನಾವು ಸಂಸತ್ ನ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಂತ ನಾವು ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದಲ್ಲ ಎಂಬ ಟ್ವೀಟ್ ಮಾಡಿದ್ದಾರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ.
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠಕ್ಕೆ ಮಸೀದಿಯು ಇಸ್ಲಾಮ್ ನ ಮುಖ್ಯ ಭಾಗವೇ ಎಂದು ನಿರ್ಧರಿಸುವುದಕ್ಕೆ ಕನಿಷ್ಠ ಎರಡು ವರ್ಷ ಬೇಕಾದವು? ನಾವು ಏಕೆ ಇಷ್ಟು ಸಮಯ ಕಾಯಬೇಕು? ಏಕೆಂದರೆ, ಕೊನೆಗೆ ಸಂವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ಸರ್ವೋಚ್ಚ ಅಲ್ಲ. ಸುಪ್ರೀಂ ಕೋರ್ಟ್ ಒಂದು ಸ್ತಂಭವಾದರೆ, ಮತ್ತೊಂದು ಸ್ತಂಭ ಸಂಸತ್ ಎಂದಿದ್ದಾರೆ.
1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ
1994ರಲ್ಲಿ ಇಸ್ಮಾಯಿಲ್ ಫಾರೂಕಿ ಸುಪ್ರೀಂ ಕೋರ್ಟ್ ನಲ್ಲಿ ನೀಡಿದ ತೀರ್ಪಿನಲ್ಲಿ ಉದ್ಭವಿಸಿದ ಅಂಶವೊಂದಕ್ಕೆ ಸಂಬಂಧಿಸಿದಂತೆ ಈ ವಾರ ಉತ್ತರ ಸಿಗಲಿದೆ. ಮಸೀದಿಯು ಇಸ್ಲಾಂ ಧರ್ಮದ ಭಾಗವೆ ಎಂಬುದು ಆ ಮುಖ್ಯ ಪ್ರಶ್ನೆ. ಈ ವಾರ ಅದಕ್ಕೆ ಏನು ಉತ್ತರ ದೊರೆಯಲಿದೆ ಎಂಬುದಕ್ಕೆ ಇಡೀ ದೇಶವೇ ಕಾಯುತ್ತಿದೆ.
'ಬಹುಸಂಖ್ಯೆಯ ಮುಸ್ಲಿಮರೂ ರಾಮಮಂದಿರ ನಿರ್ಮಾಣ ಬಯಸುತ್ತಿದ್ದಾರೆ'
ರಾಮಜನ್ಮ ಭೂಮಿ ಪ್ರಕರಣದಲ್ಲಿ ಅಲಹಾಬಾದ್ ಹೈ ಕೋರ್ಟ್ ನೀಡಿದ ತೀರ್ಪಿನ ನಂತರ, ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಮಿಶ್ರಾ, ನ್ಯಾ.ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ರನ್ನು ಒಳಗೊಂಡ ಪೀಠವು ಕೈಗೆತ್ತಿಕೊಂಡಾಗ ಈ ಪ್ರಶ್ನೆ ಉದ್ಭವಿಸಿತು.