ಭಟ್ಕಳದ ಉಗ್ರ ದಮುದಿಗೆ ತಾಯಿಯ ನೋವಿನ ಪತ್ರ
ಬೆಂಗಳೂರು, ಜೂನ್ 07 : "ಯಾಕೋ ಇಂಥಾ ಕೆಲಸ ಮಾಡ್ತಿದ್ದಿಯಾ? ಯಾಕೆ ಅಂಥವರ ಸಂಘಟನೆಯಲ್ಲಿದ್ದಿಯಾ? ಯಾಕೆ ಇಂಥ ಕಾನೂನು ಬಾಹಿರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಿಯಾ?"
ನೋವಿನಿಂದ ಇಂಥ ಪ್ರಶ್ನೆಗಳನ್ನು ಕೇಳಿರುವುದು, ರಾಷ್ಟ್ರೀಯ ತನಿಖಾ ದಳದಿಂದ ಬಂಧಿತನಾಗಿರುವ ಶಂಕಿತ ಐಸಿಸ್ ಉಗ್ರ, ಭಟ್ಕಳದ ಅದ್ನನ್ ಹಸನ್ ದಮುದಿಯ ತಾಯಿ. ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ISIS)ಗಾಗಿ ಜನರನ್ನು ನೇಮಕ ಮಾಡಿಕೊಳ್ಳಲು ನೇಮಿತನಾಗಿದ್ದ ದಮುದಿಯನ್ನು ತಾಯಿ ಗುಲ್ಶನ್ ಬಾನು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಇದ್ದರೂ ತನ್ನ ಮಗ ಮಾಡುತ್ತಿರುವ ಇಂಥ ಅನೈತಿಕ ಕಾರ್ಯಗಳನ್ನು ಸಹಿಸದೆ ಆ ತಾಯಿ ತನ್ನ ಮಗನಿಗೆ ಪತ್ರ ಬರೆದಿದ್ದರು. ಇದೇ ವರ್ಷ ಜನವರಿಯಲ್ಲಿ ಎನ್ಐಎದಿಂದ ಬಂಧಿತನಾಗಿರುವ ದಮುದಿಯಿಂದ ಈ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇದನ್ನು ಆತನ ವಿರುದ್ಧ ಸಾಕ್ಷಿಯಾಗಿ ಬಳಸಿಕೊಳ್ಳಲಾಗುತ್ತಿದೆ. [ತಿಹಾರ್ ಜೈಲಿನ ಕುರಿತು ದೂರುನೀಡಿದ ಯಾಸಿನ್ ಭಟ್ಕಳ್]
ಉರ್ದು ಭಾಷೆಯಲ್ಲಿ ಬರೆದಿರುವ ಪತ್ರ ರಾಷ್ಟ್ರೀಯ ತನಿಖಾ ದಳದ ಬಳಿಯಿದ್ದು, ನ್ಯಾಯಾಲಯಕ್ಕೆ ಅದನ್ನು ನೀಡುವ ಮುನ್ನ, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಇದು ದಮುದಿ ಅವರ ತಾಯಿ ಗುಲ್ಶನ್ ಬಾನು ಅವರೇ ಬರೆದಿದ್ದಾರೆ ಎಂದು ಖಚಿತಪಡಿಸಿಕೊಂಡಿದ್ದಾರೆ.
ಬಂಧಿತನಾಗಿರುವ 36 ವರ್ಷದ ಅದ್ನನ್ ಹಸನ್ ದಮುದಿಯ ವಿಚಾರಣೆಯನ್ನು ನಡೆಸುತ್ತಿರುವ ತನಿಖಾಧಿಕಾರಿಗಳು, ಆತನ ಹಿನ್ನೆಲೆ, ಐಸಿಸ್ ಉಗ್ರರೊಂದಿಗೆ ಆತನಿಗಿದ್ದ ಸಂಪರ್ಕ, ವಿಸ್ತರಿಸಿದ್ದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. 2014ರಲ್ಲಿ ಉಗ್ರ ಕಾರ್ಯಾಚರಣೆಗಾಗಿ ಹೈದರಾಬಾದ್ ಯುವಕನಿಗೆ 3,000 ದಿರ್ಹಮ್ ನೀಡಿದ ಆರೋಪ ಎದುರಿಸುತ್ತಿದ್ದಾನೆ. [ಮತ್ತಷ್ಟು ದಾಳಿ : ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ]
ಕಳೆದ ವರ್ಷ ಯುಎಇಯಿಂದ ಗಡಿಪಾರಾದ ಮೇಲೆ ಆತನನ್ನು ಎನ್ಐಎ ಬಂಧಿಸಿತ್ತು. ದುಬೈನಲ್ಲಿ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದ ದಮುದಿ, ಎನ್ಐಐ ಸಿದ್ಧಪಡಿಸಿರುವ ವಾಟೆಂಡ್ ಉಗ್ರರ ಪಟ್ಟಿಯಲ್ಲಿದ್ದ. ಐಸಿಸ್ ಗಾಗಿ ಭಾರತದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿರುವವರಲ್ಲಿ ದಮುದಿ ಹೆಸರು ಪ್ರಮುಖವಾಗಿದೆ.
ಇಂಡಿಯನ್ ಮುಜಾಹಿದ್ದಿನ್ ನಿಂದ ಹೊರಬಂದಿರುವ ಒಂದು ಗುಂಪು ಐಸಿಸ್ ನೊಂದಿಗೆ ಸಂಬಂಧ ಮತ್ತು ಸಂಪರ್ಕ ಹೊಂದಿದ್ದು, ಅದರೊಂದಿಗೆ ಕೂಡ ಅದ್ನನ್ ಹಸನ್ ದಮುದಿ ಗುರುತಿಸಿಕೊಂಡಿದ್ದಾನೆ. ಈ ಗುಂಪಗೆ ಭಟ್ಕಳದ ಸುಲ್ತಾನ್ ಮತ್ತು ಶಫಿ ಅರ್ಮರ್ ಎಂಬಿಬ್ಬರು ಮುಖ್ಯಸ್ಥರಾಗಿದ್ದಾರೆ. [ಲಂಡನ್ನಿನ ಉಗ್ರರ ದಾಳಿಗೂ ಬೆಂಗಳೂರಿಗೂ ನಂಟಿದೆ!]