ಚುನಾವಣೆ ಪ್ರಚಾರದಲ್ಲಿ ಯೋಗಿ ಆದಿತ್ಯನಾಥ್ 50% ಸ್ಟ್ರೈಕ್ ರೇಟ್
ನವದೆಹಲಿ, ಡಿಸೆಂಬರ್ 12: ಹಿಂದಿ ಭಾಷಿಕ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಬೇಡಿಕೆ ಹೆಚ್ಚಾಗಿತ್ತು.
ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಪರ ಚುನಾವಣಾ ಪ್ರಚಾರ ನಡೆಸಿದ ಯೋಗಿ ಆದಿತ್ಯನಾಥ್ ಅವರು ಭಾಷಣ ಮಾಡಿದ ಕ್ಷೇತ್ರಗಳ ಪೈಕಿ ಶೇ 50ಕ್ಕಿಂತ ಅಧಿಕ ಕಡೆಗಳಲ್ಲಿ ಅಲ್ಲಿನ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ.
ಆಲ್ವಾರ್(ಗ್ರಾಮೀಣ) ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಹನುಮಾನ್ ಒಬ್ಬ ದಲಿತ ಎಂದು ಯೋಗಿ ಘೋಷಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಮಿಕ್ಕಂತೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಯೋಗಿ ಅವರ ಪ್ರಭಾವ ಈ ಬಾರಿ ಹೆಚ್ಚಿನ ಪರಿಣಾಮಕಾರಿಯಾಗಿ ಕಂಡು ಬಂದರೂ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢವಲ್ಲದೆ ತೆಲಂಗಾಣದಲ್ಲೂ ಯೋಗಿ ಅವರು 8 ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಓವೈಸಿ ವಿರುದ್ಧ ದನಿಯೆತ್ತಿದ್ದ ಯೋಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ಓವೈಸಿಯನ್ನು ಹೈದರಾಬಾದಿನಿಂದ ಹೊರಕ್ಕೆ ಹಾಕುವುದಾಗಿ ಹೇಳಿದ್ದರು.
ನಿಜಾಮರ ಕಾಲದಲ್ಲಿ ಯೋಗಿ ಇದ್ದಿದ್ದರೆ ಅವರಿಗೂ ಅದೇ ಗತಿಯಾಗುತ್ತಿತ್ತು ಎಂಬ ಪ್ರತಿಕ್ರಿಯೆ ಹೈದರಾಬಾದಿನ ಸಂಸದನಿಂದ ಬಂದಿತ್ತು. ಘೋಶಾ ಮಹಲ್ ನಲ್ಲಿ ಮಾತ್ರ ಬಿಜೆಪಿ ಗೆಲುವು ದಾಖಲಿಸಿದೆ.