ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ 225 ಕೊವಿಡ್-19 ಸೋಂಕಿತೆಯರು!
ಅಗರ್ತಲಾ, ಜೂನ್ 04: ದೇಶದಲ್ಲಿ ಕೊರೊನಾವೈರಸ್ ಸೋಂಕು ಅಂದರೆ ಕನಸಿನಲ್ಲೂ ಬೆಚ್ಚಿ ಬೀಳುವಂತಾ ಸ್ಥಿತಿ ಎದುರಾಗಿದೆ. ಯಾವಾಗ, ಯಾರಿಗೆ, ಯಾರಿಂದ, ಯಾವ ರೂಪದಲ್ಲಿ ಕೊವಿಡ್-19 ಮಹಾಮಾರಿ ವಕ್ಕರಿಸುತ್ತದೆ ಎಂಬುದನ್ನೇ ಹೇಳುವುದಕ್ಕೆ ಆಗುತ್ತಿಲ್ಲ.
ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 2.85 ಕೋಟಿಯ ಗಡಿ ದಾಟಿದೆ. 3.40 ಲಕ್ಷ ಜನರು ರೋಗಾಣುವಿನ ರಕ್ಕಸತನಕ್ಕೆ ಬಲಿಯಾಗಿ ಸಾವಿನ ಮನೆ ಸೇರಿದ್ದಾರೆ. ಇದರ ಮಧ್ಯೆ 2.65 ಕೋಟಿ ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್ ತೆರಳಿರುವುದೇ ಸಮಾಧಾನಕರ ವಿಷಯ.
ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?
ಕೊರೊನಾವೈರಸ್ ರೌದ್ರತೆಯ ಎದುರು ಮನುಕುಲದ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಅನಿವಾರ್ಯತೆ ನಮ್ಮ ಎದುರಿಗೆ ಸೃಷ್ಟಿಯಾಗಿದೆ. ಕೆಮ್ಮುವ, ಸೀನು, ಉಸಿರಾಡುವುದಕ್ಕೂ ಕಷ್ಟ ಪಡುವ, ಆಕ್ಸಿಜನ್, ಬೆಡ್ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿಗಳ ಮಧ್ಯೆ ಗುಣಮುಖರಾಗಿ ಗೂಡು ಸೇರಿದವರ ಕಥೆಯನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನವೇ ನಮ್ಮ "Stories Of Strength" ಅಭಿಯಾನ. ನಮ್ಮ ಮಧ್ಯೆಯೇ ಕೊವಿಡ್-19 ವಿರುದ್ಧ ತೊಡೆ ತಟ್ಟಿ ಗೆದ್ದವರು, ಮಹಾಮಾರಿ ಸವಾಲಿಗೆ ಸೈ ಎಂದವರ ಬಗ್ಗೆ ತಿಳಿಯೋಣ.
ಕೊರೊನಾ ಸೋಂಕಿನಿಂದ ಗರ್ಭಿಣಿಯರಿಗೆ ಅಪಾಯ?
ಕೊರೊನಾವೈರಸ್ ಸೋಂಕಿನಿಂದ ಗರ್ಭಿಣಿಯರು ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಅಷ್ಟಾಗಿಯೂ ನಮ್ಮಲ್ಲಿನ ಆತ್ಮಸ್ಥೈರ್ಯ, ಧೈರ್ಯ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವ ವೈಖರಿ ನಮಗೆ ಪುನರ್ಜನ್ಮ ನೀಡುತ್ತದೆ ಎಂಬುದಕ್ಕೂ ಇದೀಗ ಸಾಕ್ಷಿ ಸಿಕ್ಕಿದೆ. ಕೊರೊನಾವೈರಸ್ ಸೋಂಕಿನ ಸುಳಿಗೆ ಸಿಲುಕಿದ್ದರೂ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ವರದಿಯಾಗಿದೆ.
ಸೋಂಕಿತ ತಾಯಿಯಿಂದ ಆರೋಗ್ಯವಂತ ಮಗುವಿಗೆ ಜನ್ಮ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆಯೂ ಸೋಂಕು ತಗುಲಿದ 225 ಗರ್ಭಿಣಿಯರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಅಗರ್ತಲಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ. ಕೊವಿಡ್-19 ಮೊದಲ ಅಲೆಯಲ್ಲಿ 198 ಸೋಂಕಿತ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದು, 60 ಗರ್ಭಿಣಿಯರಿಗೆ ಸಿಸೇರಿಯನ್ ಮಾಡಲಾಗಿದೆ. ಎರಡನೇ ಅಲೆಯಲ್ಲಿ 27 ಗರ್ಭಿಣಿಯರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕೊರೊನಾವೈರಸ್ ಸೋಂಕಿತ ಮಹಿಳೆಯರು ಜನ್ಮ ನೀಡಿದ ಮಕ್ಕಳಲ್ಲಿ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಅಗರ್ತಲಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಜಯಂತ್ ರಾಯ್ ತಿಳಿಸಿದ್ದಾರೆ.
ವೈದ್ಯರು, ಆರೋಗ್ಯ ಸಿಬ್ಬಂದಿ ಕಾರ್ಯವೈಖರಿಗೆ ಶಹಬ್ಬಾಶ್
ಅಗರ್ತಲಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾದ 225 ಗರ್ಭಿಣಿಯರು ಸುರಕ್ಷಿತವಾಗಿದ್ದಾರೆ. ಮಹಿಳೆಯರು ಜನ್ಮ ನೀಡಿದ ಮಕ್ಕಳಲ್ಲಿ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮುಂಜಾಗ್ರತೆ ಮತ್ತು ಚಿಕಿತ್ಸಾ ವಿಧಾನ ಮಹಿಳೆಯರು ಮತ್ತು ಮಕ್ಕಳ ಮುಖದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಒಬ್ಬ ಗರ್ಭಿಣಿ ಮತ್ತು ಆಕೆಯ ಮಗುವಿಗೆ ಸುರಕ್ಷತೆಯನ್ನು ಒದಗಿಸುವ ವೈದ್ಯಕೀಯ ವ್ಯವಸ್ಥೆಯ ಅಗತ್ಯವಿದೆ. ಈ ಸುರಕ್ಷಿತ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುವುದರಲ್ಲಿ ನಮ್ಮ ವೈದ್ಯರು ಸಫಲರಾಗಿದ್ದಾರೆ ಎಂದು ಡಾ. ಜಯಂತ್ ರಾಯ್ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಸಮಸ್ಯೆ
ಯಾವುದೇ ಸಣ್ಣ ರಾಜ್ಯವಾದರೂ ಅಂಥ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಹಾಗೂ ಮೂಲಸೌಕರ್ಯಗಳ ಕೊರತೆ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಅಗರ್ತಲಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಎಲ್ಲ ಸವಾಲುಗಳನ್ನು ಮೀರಿ ಅತ್ಯುತ್ತಮ ರೀತಿಯಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಮರ್ಥವಾಗಿದೆ. 225 ಗರ್ಭಿಣಿಯರು ಮತ್ತು ಮಕ್ಕಳಿಗೆ ಸುರಕ್ಷಿತ ರೀತಿಯಲ್ಲಿ ಚಿಕಿತ್ಸೆ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ. ಜಯಂತ್ ರಾಯ್ ತಿಳಿಸಿದ್ದಾರೆ.