ಶಿವರಾಜ್ ಸಿಂಗ್ ಚೌಹಾಣ್ ಇದ್ದ ಬಸ್ ಮೇಲೆ ಕಲ್ಲು ತೂರಾಟ
ರತ್ಲಮ್(ಮಧ್ಯಪ್ರದೇಶ), ಸೆಪ್ಟೆಂಬರ್ 19: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿದ್ದ ಬಸ್ ವೊಂದರ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮುಖ್ಯಮಂತ್ರಿ ಅವರಿದ್ದ ಜನ ಆಶೀರ್ವಾದ ಯಾತ್ರೆಯ ರಥದ ಮಾದರಿಯಲ್ಲಿದ್ದ ಬಸ್ಸಿನ ಮೇಲೆ ಕಲ್ಲುತೂರಾಟ ನಡೆದಿದ್ದು, ಚೌಹಾಣ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ತಿಂಗಳಿನಲ್ಲಿ ಚೌಹಾಣ್ ಅವರ ಬಸ್ಸಿನ ಮೇಲೆ ನಡೆಯುತ್ತಿರುವ ಎರಡನೆಯ ದಾಳಿ ಇದಾಗಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ರಾಜ್ಯದ ಗೃಹ ಸಚಿವ ಭುಪೇಂದ್ರ ಸಿಂಗ್ ಆದೇಶಿಸಿದ್ದಾರೆ.
ಕಾಂಗ್ರೆಸ್ ನನ್ನ ರಕ್ತಕ್ಕಾಗಿ ಊಳಿಡುತ್ತಿದೆ: ಮಧ್ಯಪ್ರದೇಶ ಮುಖ್ಯಮಂತ್ರಿ
ಈ ಘಟನೆಯನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಖಂಡಿಸಿದ್ದು, ಇಂಥ ಘಟನೆಗಳು ಖಂಡಿತ ನಡೆಯಬಾರದು, ಆದರೆ ಬಿಜೆಪಿಯವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು, ಜನರಿಗೆ ಬಿಜೆಪಿ ಸರ್ಕಾರದ ವಿರುದ್ಧ ಸಿಟ್ಟಿದೆ ಎಂಬುದು ಇದರಿಂದ ತಿಳಿಯುತ್ತಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಅಂದರೆ ಸೆಪ್ಟೆಂಬರ್ 2 ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪತ್ಪರ ಎಂಬ ಗ್ರಾಮದಲ್ಲೂ ಶಿವರಾಜ್ ಸಿಂಗ್ ಚೌಹಾಣ್ ಅವರ ರಥಕ್ಕೆ ಕಲ್ಲುತೂರಾಟ ಮಾಡಲಾಗಿತ್ತು.
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ: ಚುನಾವಣಾ ಪೂರ್ವ ಸಮೀಕ್ಷೆ
ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳೂ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿವೆ. ಬಿಜೆಪಿ ಸಹ ತನ್ನ ಸಾಧನೆಗಳನ್ನು ಜನರಿಗೆ ತಿಳಿಸಲು ಜನ ಆಶಿರ್ವಾದ ಯಾತ್ರೆ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಇಂಥ ಅಹಿತಕರ ಘಟನೆಗಳು ನಡೆದಿವೆ.