ಶ್ರೀಲಂಕಾದಲ್ಲಿ ಸೀತಾಮಾತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮಮಂದಿರಕ್ಕೆ ಬಳಕೆ
ನವದೆಹಲಿ, ಮಾರ್ಚ್ 20: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ, ಸೀತಾಮಾತೆ ತಂಗಿದ್ದ ಐತಿಹ್ಯವಿರುವ ಶ್ರೀಲಂಕಾದ ಸೀತಾ ಇಲಿಯಾದಲ್ಲಿನ ಅಶೋಕ ವಟಿಕದ ಕಲ್ಲೊಂದನ್ನು ಬಳಸಲು ತೀರ್ಮಾನಿಸಲಾಗಿದ್ದು, ಆ ಕಲ್ಲನ್ನು ಅಲ್ಲಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ.
ಸೀತೆಯನ್ನು ಅಪಹರಿಸಿದ್ದ ರಾವಣ, ಆಕೆಯನ್ನು ಅಶೋಕ ವಟಿಕ ಉದ್ಯಾನದಲ್ಲಿ ಬಂಧನದಲ್ಲಿರಿಸಿದ್ದ. ಸೀತೆಯು ತಾನು ಬಂಧಿಯಾಗಿದ್ದ ಸಂದರ್ಭ ರಾಮನ ಬರುವಿಕೆಗೆ ಎದುರು ನೋಡುತ್ತಾ ಕುಳಿತಿದ್ದ ಕಲ್ಲನ್ನು ಶ್ರೀಲಂಕಾದಿಂದ ತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ. ಶ್ರೀಲಂಕಾದ ಸೀತಾ ಇಲಿಯಾ ಗ್ರಾಮದಲ್ಲಿ ಸೀತಾ ಮಾತೆಗೆ ದೇವಾಲಯವನ್ನೂ ನಿರ್ಮಿಸಲಾಗಿದೆ.
3 ವರ್ಷಗಳಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ದೇಣಿಗೆ ಸಂಗ್ರಹ ಕಾರ್ಯ ಸ್ಥಗಿತ
ಭಾರತದಲ್ಲಿನ ಶ್ರೀಲಂಕಾ ಹೈಕಮಿಷನರ್ ಮಿಲಿಂದಾ ಮೊರಾಗೊಡಾ ಅವರು ಕಲ್ಲನ್ನು ಭಾರತಕ್ಕೆ ತರಲಿದ್ದಾರೆ. ಆ ಕಲ್ಲನ್ನು ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ.
"ಸೀತಾಮಾತೆ ಬಳಕೆ ಮಾಡಿದ್ದ ಕಲ್ಲು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಬಳಕೆಯಾಗುತ್ತಿರುವುದು ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ" ಎಂದು ಮಿಲಿಂದಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.