ಕರ್ನಾಟಕದಲ್ಲೂ ಇದೆ ಉಪ ಚುನಾವಣೆ ಪರ್ವ!
ಬೆಂಗಳೂರು, ಮೇ 31: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ 10 ಸಾವಿರಕ್ಕೂ ಹೆಚ್ಚು ಅಸಲಿ ಮತದಾರರ ಚೀಟಿ ದೊರೆತಿದ್ದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು.
ಇದೀಗ ಚುನಾವಣೆ ಮೇ 28ರಂದು ನಡೆದಿದ್ದು, ಮೇ 31 ರಂದು ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ.ಹಾಗೂ ದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಉಪ ಚುನಾವಣೆ ನಡೆದಿದೆ.
10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE
ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್-ಜಡಿಎಸ್ ಮತ್ತು ಬಿಜೆಪಿ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ನಾಲ್ಕರ ಪೈಕಿ ಮೂರು ಲೋಕಸಭಾ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಉತ್ತರ ಪ್ರದೇಶದ ಕೈರಾನಾದಲ್ಲಿ ಬಿಜೆಪಿ ಹುಕುಮ್ ಸಿಂಗ್ ನಿಧನದಿಂದ ತೆರವಾದ ಸ್ಥಾನದಲ್ಲಿ ಅವರ ಪುತ್ರಿ ಮೃಗಾಂಕ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿದ್ದು, ಅವರ ವಿರುದ್ಧ ಮಾಜಿ ಸಂಸದೆ ಹಾಗೂ ರಾಷ್ಟ್ರೀಯ ಲೋಕದಳ ಅಭ್ಯರ್ಥಿ ತಬ್ಸುಮ್ ಹಸನ್ ಕಣಕ್ಕಿಳಿದಿದ್ದಾರೆ.
ಎರಡು ವಿಧಾನಸಭೆ, ಮೂರು ಲೋಕಸಭಾ ಚುನಾವಣೆ
ನಾಮಪತ್ರ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಸಾವನ್ನಪ್ಪಿದ್ದರಿಂದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿತ್ತು. ಈಗ ಆ ಕ್ಷೇತ್ರದ ಚುನಾವಣೆಯು ಜೂನ್ 11 ಕ್ಕೆ ನಿಗದಿಯಾಗಿದೆ. ರಾಮನಗರ, ಜಮಖಂಡಿ, ಶಿವಮೊಗ್ಗ, ಬಳ್ಳಾರಿ, ಮಂಡ್ಯದಲ್ಲಿ ಚುನಾವಣೆ ನಡೆಯಲಿದೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ರಾಮನಗರದಲ್ಲಿ ಅನ್ವಯ ಆಗುತ್ತಾ?
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಚೆನ್ನಪಟ್ಟಣ ಮತ್ತು ರಾಮನಗರ, ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದು, ಅಲ್ಲಿ ಉಪ ಚುನಾವಣೆ ನಡೆಯಬೇಕಿದೆ. ಎಚ್ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಕಾಂಗ್ರೆಸ್ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ನಿಧನದಿಂದ ಆ ಕ್ಷೇತ್ರವೂ ತೆರವಾಗಿದ್ದು ಅಲ್ಲಿ ಉಪ ಚುನಾವಣೆ ನಡೆಯಬೇಕಿದೆ.
ಶಿವಮೊಗ್ಗ, ಬಳ್ಳಾರಿ ಲೋಕಸಭೆ ಕದನ ಕುತೂಹಲ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಬಿಎಸ್ ಯಡಿಯೂರಪ್ಪ, ಅವರು ಶಿವಮೊಗ್ಗ ಹಾಗೂ ಶ್ರೀರಾಮುಲು ಅವರು ಬಳ್ಳಾರಿ ಲೋಕಸಭಾ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ಮಂಡ್ಯ ಜಡಿಎಸ್ ಸಂಸದ ಸಿಎಸ್ ಪುಟ್ಟರಾಜು ಅವರು ರಾಜಿನಾಮೆ ನೀಡಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದ್ದರಿಂದ ಈ ಎಲ್ಲಾ ಕ್ಷೇತ್ರಗಳಿಗೆ ಆತು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದೆ.
ಪಲ್ಘಾರ್ನಲ್ಲಿ ಸಂಸದ ಚಿಂತಮನ್ ವಂಗಾ ನಿಧನದಿಂದ ಉಪಚುನಾವಣೆ
ಉತ್ತರ ಕೊಂಕಣದಲ್ಲಿ ಬರುವ ಪಲ್ಘಾರ್ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಚಿಂತಮನ್ ವಂಗಾ ನಿಧನದಿಂದ ಈ ಕ್ಷೇತ್ರ ತೆರವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಚಿಂತಮನ್ ಕುಟುಂಬವು ಶಿವಸೇನಾ ಸೇರ್ಪಡಯಾಗಿದೆ.
ನೈಪು ರಿಯೋ ಅವರ ಸ್ಥಾನಕ್ಕೆ ಉಪಚುನಾವಣೆ
ನಾಗಾಲ್ಯಾಂಡ್ ಏಕೈಕ ಸ್ಥಾನಕ್ಕಾಗಿ ಎನ್ಡಿಪಿ ಹಾಗೂ ಎನ್ಪಿಎಫ್ ಪ್ರಬಲ ಹೋರಾಟ ನಡೆಸಿದೆ. ಮುಖ್ಯಮಂತ್ರಿಯಾಗಲು ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ನೈಪು ರಿಯೋ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಉಳಿದಂತೆ ಮೇಘಾಲಯ ಅಂಪತಿ ವಿಧಾನಸಭಾ ಕ್ಷೇತ್ರದಲ್ಲಿ ಎನ್ಪಿಪಿ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ.
ಅಜಿತ್ ಸಿಂಗ್ ಕೋಹಾರ್ ನಿಧನದಿಂದ ಪಂಜಾಬ್ನಲ್ಲಿ ಉಪಚುನಾವಣೆ
ಪಂಜಾಬ್ನಲ್ಲಿ ಶಿರೋಮಣಿ ಅಕಾಲಿದಳ ಶಾಕೋಟ್ ವಿಧಾನಸಭಾ ಕ್ಷೇತ್ರದ ಶಾಸಕ ಅಜಿತ್ ಸಿಂಗ್ ಕೋಹಾರ್ ನಿಧನದಿಂದ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್,ಎಸ್ಎಡಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಹಾರದಲ್ಲಿ ಜೋಕಿಹಾತ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಮತ್ತು ಆರ್ಜೆಡಿ ನಡುವೆ ತೀವ್ರ ಹಣಾಹಣಿ ಇದೆ.
ಕೇರಳದ ಚೆನ್ನಗನೂರಿನಲ್ಲಿ ಉಪ ಚುನಾವಣೆ
ಕೇರಳದ ಚೆನ್ನಗನೂರು ಕ್ಷೇತ್ರದಲ್ಲೂ ಉಪಚುನಾವಣೆ ನಡೆದಿದ್ದು, ಸಿಪಿಎಂ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಉತ್ತರಾಖಂಡದ ಥರಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಇಂದು ಮತದಾನ ಎಣಿಕೆ ನಡೆಯುತ್ತಿದೆ.
ಲೋಕೇಂದ್ರಸಿಂಗ್ ನಿಧನದಿಂದಾಗಿ ಉಪಚುನಾವಣೆ
ಕೈರಾನಾ ಕ್ಷೇತ್ರದ ಜತೆಗೆ ನೂರ್ಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್ ಚೌಹಾಣ್ ನಿಧನದಿಂದ ಉಪಚುನಾವಣೆ ನಡೆದಿದೆ. ಇಲ್ಲಿ ಬಿಜೆಪಿಯ ಅವಿನಾಶ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ನೈಮ್ ಉಲ್ ಹಸನ್ ಎದುರು ನಿಕಟ ಪೈಪೋಟಿ ಏರ್ಪಟ್ಟಿದೆ. ಎಸ್ಪಿಗೆ ಬೆಂಬಲ ನೀಡಿರುವ ಬಿಎಸ್ಪಿ ತನ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.