ದೆಹಲಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ಸಿಗೆ ತೀವ್ರ ಮುಜುಗರ
ನವದೆಹಲಿ, ನ 18: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ ಜನರು ಮೈದಾನದಿಂದ ಹೊರ ನಡೆಯಲಾರಂಭಿಸಿ ಪಕ್ಷ ಮುಜುಗರಕ್ಕೀಡಾದ ಪ್ರಸಂಗ ಭಾನುವಾರ (ನ 17) ನಡೆದಿದೆ.
ಪಕ್ಷದ ಸಾರ್ವಜನಿಕ ಸಭೆಗಳಿಗೆ ನಿರೀಕ್ಷಿತ ಮಟ್ಟದ ಜನಬೆಂಬಲ ಸಿಗದೇ ಇರುವುದಕ್ಕೆ ದಕ್ಷಿಣ ದೆಹಲಿಯಲ್ಲಿ ನಡೆದ ಈ ಸಭೆ ಮತ್ತೊಮ್ಮೆ ಸಾಕ್ಷಿಯಾಯಿತು. (ಭ್ರಷ್ಟಾಚಾರದಲ್ಲಿ ಬಿಜೆಪಿ ವಿಶ್ವಚಾಂಪಿಯನ್: ರಾಹುಲ್ ಗಾಂಧಿ)
ದೆಹಲಿ ಕಾಂಗ್ರೆಸ್ ಘಟಕ ಚುನಾವಣಾ ಪೂರ್ವ ಸಾರ್ವಜನಿಕ ಸಭೆಯನ್ನು ದಕ್ಷಿಣ ದೆಹಲಿಯಲ್ಲಿ ಆಯೋಜಿಸಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಾರಂಭಿಸಿದಾಗ ಮೊದಲೇ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಜನ ಎದ್ದು ಹೋಗಲಾರಂಭಿಸಿದರು. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ರಾಹುಲ್ ಗಾಂಧಿ ಭಾಷಣ ಆಲಿಸಿ ಎಂದು ಮನವಿ ಮಾಡಿದರೂ ಜನ ಕ್ಯಾರೇ ಅನ್ನದಿದ್ದದ್ದು ಪಕ್ಷವನ್ನು ತೀವ್ರ ಮುಜುಗರಕ್ಕೆ ಈಡಾಗುವಂತೆ ಮಾಡಿತು.
ಡಿಸೆಂಬರ್ ನಾಲ್ಕರಂದು ದೆಹಲಿಯಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲು ಸಭೆಯಲ್ಲಿ ರಾಹುಲ್ ಭಾಷಣ ಆರಂಭಿಸಿದಾಗ ಜನ ಮೈದಾನದಿಂದ ಹೊರಡಲಾರಂಭಿಸಿದರು.
ಇದರಿಂದ ಮುಜುಗರಕ್ಕೀಡಾದ ಸಭೆಯ ಆಯೋಜಕರು ರಾಹುಲ್ ಭಾಷಣದ ಮಧ್ಯೆ ಜನರಲ್ಲಿ ಮೈದಾನ ಬಿಟ್ಟು ಹೋಗದಂತೆ ಮನವಿ ಮಾಡಲಾರಂಭಿಸಿದರು. ಇದಕ್ಕೆ ಜನರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
ಕೂಡಲೇ ಮೈಕ್ ತೆಗೆದುಕೊಂಡ ಶೀಲಾ ದೀಕ್ಷಿತ್ ಸಭೆ ಇನ್ನೂ ಮುಗಿದಿಲ್ಲ, ಕೊನೆಯ ಪಕ್ಷ ರಾಹುಲ್ ಗಾಂಧಿ ಭಾಷಣವನ್ನಾದರೂ ಕೇಳಿ ಎಂದೂ ಹಲವು ಬಾರಿ ಮನವಿ ಮಾಡಿದರೂ ಜನ ಸ್ಪಂಧಿಸದೇ ಮೈದಾನದಿಂದ ಹೊರ ನಡೆಯುತ್ತಿದ್ದರು.
ತದನಂತರ ರಾಹುಲ್ ಗಾಂಧಿ ನಿಗದಿತ ಸಮಯಕ್ಕಿಂತ ಬೇಗನೇ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಸಭೆಯಿಂದ ನಿರ್ಗಮಿಸಿದರು. ಈ ಸಭೆ ನಡೆದ ಪ್ರದೇಶವು ದಕ್ಷಿಣಪುರಿ ಅಸೆಂಬ್ಲಿ ವ್ಯಾಪ್ತಿಯಲ್ಲಿದ್ದು ಕಾಂಗ್ರೆಸ್ಸಿನ ಭದ್ರಕೋಟೆ ಎಂದೇ ಹೇಳಲಾಗುತ್ತದೆ.
ಕಳೆದ ತಿಂಗಳು ದೆಹಲಿಯ ಮಂಗೋಲಪುರಿಯಲ್ಲಿ ನಡೆದ ರಾಹುಲ್ ಗಾಂಧಿ ಚುನಾವಣಾ ಸಭೆಗೂ ಜನರ ಕೊರತೆ ಎದುರಾಗಿತ್ತು.