ಅಂಬೇಡ್ಕರ್ 'ನೀಲಿ' ಪ್ರತಿಮೆ ಈಗ ಪಂಜರದಲ್ಲಿ!
ಬದಾನ್ (ಉತ್ತರ ಪ್ರದೇಶ), ಏಪ್ರಿಲ್ 12: ಬಣ್ಣ ರಾಜಕೀಯದ ತಿಕ್ಕಾಟದಲ್ಲಿ ಸುದ್ದಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ರಕ್ಷಿಸಲು ಅದಕ್ಕೆ ಕಬ್ಬಿಣದ ಪಂಜರ ಅಳವಡಿಸಲಾಗಿದೆ. ಜತೆಗೆ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ ಬದಾನ್ ಜಿಲ್ಲೆಯ ದುಗ್ರಯ್ಯಾ ಎಂಬ ಗ್ರಾಮದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಸ್ಥಳೀಯ ಆಡಳಿತ ತಕ್ಷಣವೇ ಆಗ್ರಾದಿಂದ ಮತ್ತೊಂದು ಪ್ರತಿಮೆಯನ್ನು ತರಿಸಿ ಉದ್ಘಾಟನೆ ಮಾಡಿತ್ತು.
ಕಲರ್ ಪಾಲಿಟಿಕ್ಸ್: ಅಂಬೇಡ್ಕರ್ ಪ್ರತಿಮೆಗೆ ರಾಜಕೀಯ ಬಣ್ಣ
ಆದರೆ, ಆ ಪ್ರತಿಮೆ ಕೇಸರಿ ಬಣ್ಣ ಹೊಂದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಂಬೇಡ್ಕರ್ ಅವರ ಪ್ರತಿಮೆಗಳು ಸಾಮಾನ್ಯವಾಗಿ ನೀಲಿ ಬಣ್ಣ ಹೊಂದಿರುತ್ತವೆ. ಆದರೆ ಈ ಪ್ರತಿಮೆ ಕೇಸರಿ ಬಣ್ಣವನ್ನು ಹೊಂದಿರುವುದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರ ಎಲ್ಲವನ್ನೂ ಕೇಸರಿಮಯಗೊಳಿಸುತ್ತದೆ ಎಂಬ ಆರೋಪ ಮತ್ತೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಕೇಸರಿ ಬಣ್ಣದ ಮೇಲೆ ನೀಲಿ ಬಣ್ಣವನ್ನು ಬಳಿದಿದ್ದರು.
Statue of BR Ambedkar locked inside an iron cage and a police personnel deputed for the statue's protection, in Badaun. pic.twitter.com/U271aSz35O
— ANI UP (@ANINewsUP) 12 April 2018
ಈಗ ಮತ್ತೆ ವಿವಾದ ಉದ್ಭವಿಸಬಹುದು ಎಂಬ ಮುಂಜಾಗ್ರತೆಯಿಂದ ಪ್ರತಿಮೆಗೆ ಭದ್ರತೆ ಒದಗಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುಮಾರು ಒಂಬತ್ತು ಕಡೆ ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ.
ಉತ್ತರ ಪ್ರದೇಶ: ಅಂಬೇಡ್ಕರ್ ಪುತ್ಥಳಿಗೂ ಕೇಸರಿ ಬಣ್ಣ!
ಪ್ರತಿಮೆ ಹಾಳುಮಾಡುವವರ ಮತ್ತು ಸಮಾಜದ ಶಾಂತಿ ಕದಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಎಚ್ಚರಿಕೆ ನೀಡಿದ್ದಾರೆ.
ಸಾಲುಸಾಲು ಪ್ರಕರಣಗಳು ನಡೆಯುತ್ತಿರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ದುಗ್ರಯ್ಯಾ ಗ್ರಾಮದಲ್ಲಿರುವ ಪರಿವರ್ತಿತ 'ನೀಲಿ' ಪ್ರತಿಮೆಯನ್ನು ಹಾನಿ ಮಾಡಲು ಸಾಧ್ಯವಾಗದಂತೆ ಕಬ್ಬಿಣದ ಪಂಜರ ಅಳವಡಿಸಲಾಗಿದೆ. ಜತೆಗೆ ಅದರ ಕಾವಲು ಕಾಯಲು ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.