ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ರಾಜ್ಯವಾರು ಪಟ್ಟಿ
ನವದೆಹಲಿ, ಫೆಬ್ರವರಿ 15: ನಿನ್ನೆ ಕಾಶ್ಮೀರದ ಪುಲ್ವಾಮಾದಲ್ಲಿ ಜೈಶೆ-ಇ-ಮೊಹಮ್ಮದ್ ಉಗ್ರ ಸಂಘಟನೆ ಮಾಡಿದ ಆತ್ಮಾಹುತಿ ದಾಳಿಗೆ ಸಿಆರ್ಪಿಎಫ್ನ 44 ಸೈನಿಕರು ಹುತಾತ್ಮರಾಗಿದ್ದಾರೆ. ಇದಕ್ಕೆ ಇಡೀಯ ದೇಶವೇ ಕಂಬನಿ ಮಿಡಿದಿದೆ.
ಈ ಸೈನಿಕರೆಲ್ಲಾ ಆಗಷ್ಟೆ ತಮ್ಮ ರಜೆಗಳನ್ನು ಮುಗಿಸಿ ವಾಪಸ್ಸಾಗುತ್ತಿದ್ದವರು. ದೇಶದ ಹಲವು ರಾಜ್ಯಗಳಿಂದ ಬಂದು ಒಂದೊದು ಬೆಟಾಲಿಯನ್ ಆಗಿ ದೇಶದ ಕಾಯುತ್ತಿದ್ದವರು.
ಅವರ ಮೆಲೆ ನಡೆದ ಆತ್ಮಾಹುತಿ ದಾಳಿ ಅದೆಷ್ಟು ಭೀಕರವಾಗಿತ್ತೆಂದರೆ ದಾಳಿಗೆ ಸಿಕ್ಕ ಇಡೀಯ ಬಸ್ಸು ಸಣ್ಣ ಲೋಹದ ಮುದ್ದೆಯಂತಾಗಿಬಿಟ್ಟಿತು. ಸ್ಕಾರ್ಪಿಯೋ ವಾಹನ ತುಂಡಾಗಿದೆ. ಸೈನಿಕರ ದೇಹವಂತೂ ನೂರಾರು ಚೂರುಗಳಾಗಿ ಹರಿದು ಹೋಗಿವೆ.
ಹೀಗಿದ್ದರೂ ಸಹ 41 ಯೋಧರ ಗುರುತು ಪತ್ತೆಯನ್ನು ಈಗಾಗಲೇ ಮಾಡಲಾಗಿದೆ. ಇನ್ನೂ ಮೂರು ಯೋಧರ ಗುರುತು ಪತ್ತೆ ಸಾಧ್ಯವಾಗಿಲ್ಲ. ನಿನ್ನೆಯೇ ಅವರೆಲ್ಲರ ಹೆಸರುಗಳನ್ನು ನೀಡಲಾಗಿತ್ತು. ಇಂದು ಹುತಾತ್ಮ ಯೋಧರ ರಾಜ್ಯಗಳ ಮಾಹಿತಿ ನೀಡಲಾಗಿದೆ.
ನಿನ್ನೆಯ ದಾಳಿಯಲ್ಲಿ ಮೃತಪಟ್ಟ ಯೋಧರಲ್ಲಿ ಅತಿ ಹೆಚ್ಚಿನ ಜನ ಇದ್ದದ್ದು ಉತ್ತರ ಪ್ರದೇಶ ರಾಜ್ಯದವರು. ಬರೋಬ್ಬರಿ 12 ಉತ್ತರ ಪ್ರದೇಶಕ್ಕೆ ಸೇರಿದ ಯೋಧರು ನಿನ್ನೆಯ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಈಗಾಗಲೇ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಹೆಸರುಗಳು
ಕರ್ನಾಟಕದ ಒಬ್ಬ ಯೋಧ ಹುತಾತ್ಮನಾಗಿದ್ದಾನೆ. ಮಂಡ್ಯದ ಮದ್ದೂರು ತಾಲ್ಲೂಕಿನ ಗುರು ಎಂಬ ಯೋಧ ದಾಳಿಯಲ್ಲಿ ಅಸುನೀಗಿದ್ದಾರೆ. ಅವರ ಕುಟುಂಬಕ್ಕೂ ಸಹ ಸರ್ಕಾರ ಸಹಾಯ ಘೋಷಿಸಿದೆ.
ಬಿಹಾರದ ಇಬ್ಬರು ಯೋಧರು, ಅಸ್ಸಾಂನ ಒಬ್ಬ ಯೋಧ, ಹಿಮಾಚಲ ಪ್ರದೇಶದ ಒಬ್ಬ ಯೋಧ, ಜಮ್ಮು ಕಾಶ್ಮೀರದ ಒಬ್ಬ ಯೋಧ, ಜಾರ್ಖಂಡನ ಒಬ್ಬ ಯೋಧ, ಕೇರಳದ ಒಬ್ಬ ಯೋಧ, ಮಧ್ಯ ಪ್ರದೇಶದ ಒಬ್ಬ ಯೋಧ ಅಸುನೀಗಿದ್ದಾರೆ.
ಮಹಾರಾಷ್ಟ್ರದ ಇಬ್ಬರು ಯೋಧರು, ಒಡಿಸ್ಸಾದ ಇಬ್ಬರು, ಪಂಜಾಬ್ನ ನಾಲ್ಕು ಯೋಧರು, ರಾಜಸ್ಥಾನದ ಐದು ಯೋಧರು, ತಮಿಳುನಾಡಿನ ಇಬ್ಬರು ಯೋಧರು, ಉತ್ತರಖಾಂಡ್ನ ಮೂರು ಯೋಧರು, ಪಶ್ಚಿಮ ಬಂಗಾಳದ ಇಬ್ಬರು ಯೋಧರು ಮೃತಪಟ್ಟಿದ್ದಾರೆ.