ಪ್ರತಿಭಟನೆಗೆ ಮಣಿದ ಮೋದಿ ಸರ್ಕಾರ, ಎಸ್ಎಸ್ಸಿ ಹಗರಣ ತನಿಖೆ ಸಿಬಿಐಗೆ
ಬೆಂಗಳೂರು, ಮಾರ್ಚ್ 05: ಸಿಬ್ಬಂದಿ ನೇಮಕ ಆಯೋಗ (ಎಸ್ಎಸ್ಸಿ) ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿ ಬಂದಿದ್ದು, ಕಳೆದ ಒಂದು ವಾರದಿಂದ ಹುದ್ದೆ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಕೂಡಾ ಭೇಟಿ ನೀಡಿ, ಅಭ್ಯರ್ಥಿಗಳ ಸಮಸ್ಯೆಯನ್ನು ಆಲಿಸಿದ್ದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ ಕೊನೆಗೂ ಸಿಬಿಐ ತನಿಖೆಗೆ ಆದೇಶಿಸಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್, ಎಸ್ಎಸ್ಸಿ ಅಭ್ಯರ್ಥಿಗಳು ಮುಂದಿಟ್ಟಿರುವ ಬೇಡಿಕೆಗಳನ್ನು ಒಪ್ಪಿಕೊಂಡು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೇವೆ. ಮಾರ್ಚ್ 12ರಂದು ಸುಪ್ರೀಂಕೋರ್ಟ್ ಕೂಡ ಈ ವಿಷಯದ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಅಭ್ಯರ್ಥಿಗಳು ಕೂಡಲೇ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದಿದ್ದಾರೆ.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಎಸ್ಎಸ್ಸಿ ಶಿಫಾರಸು ಮಾಡಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಈಡೇರುವವರೆಗೂ ಹಾಗೂ ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಕಾರ ಎಸ್ಎಸ್ಸಿ ಆಕಾಂಕ್ಷಿಗಳು ತಿಳಿಸಿದ್ದಾರೆ.
ಫೆಬ್ರವರಿ 21ರಂದು ನಡೆದ ಪತ್ರಿಕೆ-1ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ದೆಹಲಿಯ ಸಿಜಿಒ ಕಾಂಪ್ಲೆಕ್ಸ್ನ ಎಸ್ಎಸ್ಸಿ ಕಚೇರಿಯ ಮುಂದೆ ಫೆಬ್ರವರಿ 27ರಿಂದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಬ್ರವರಿ 17ರಿಂದ 22ರ ವರೆಗೆ ನಡೆದ ಎರಡನೇ ದರ್ಜೆಯ ಪರೀಕ್ಷೆ ನಡೆದಿತ್ತು.