35-ಎ ಸಿಂಧುತ್ವ, ಕಣಿವೆ ರಾಜ್ಯದಲ್ಲಿ ವದಂತಿಯಿಂದಾಗಿ ಸೂಕ್ಷ ಪರಿಸ್ಥಿತಿ
ಶ್ರೀನಗರ, ಆಗಸ್ಟ್ 27 : 35-ಎ ಸಿಂಧುತ್ವ ರದ್ದಾಗಿದೆ ಎಂಬ ವದಂತಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಶ್ರೀನಗರ ಮತ್ತು ಅನಂತ್ನಾಗ್ ಜಿಲ್ಲೆಯಲ್ಲಿ ಜನರು ಸ್ವಯಂ ಪ್ರೇರಿತ ಬಂದ್ ಆಚರಣೆ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸರ್ಕಾರ ನೀಡುವ ವಿಶೇಷಾಧಿಕಾರ 35-ಎ ಸಿಂಧುತ್ವದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸೋಮವಾರ ಅರ್ಜಿಯ ವಿಚಾರಣೆ ನಡೆಯಿತು. ಆದರೆ, ನ್ಯಾಯಾಲಯ ಸಿಂಧುತ್ವ ರದ್ದು ಮಾಡಿದೆ ಎಂಬ ವದಂತಿ ಭಾರಿ ಸಂಚಲನ ಉಂಟು ಮಾಡಿತು.
ಕಣಿವೆ ರಾಜ್ಯದಲ್ಲಿ ಕಲಂ-35 ಎ ಸಿಂಧುತ್ವ ಹೋರಾಟ, ಏನಿದು ವಿವಾದ?
ವದಂತಿ ಹಬ್ಬಿದ ತಕ್ಷಣ ಕಣಿವೆ ರಾಜ್ಯದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು. ಕೆಲವು ಭಾಗದಲ್ಲಿ ಜನರು ಮತ್ತು ಯೋಧರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸೇನಾಪಡೆ ಹರಸಾಹಸ ಪಡಬೇಕಾಯಿತು.
ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿದೆ ಎಂದು ಕೆಲವು ಸಂಘಟನೆಗಳ ಸದಸ್ಯರು ಮೈಕ್ ಮೂಲಕ ಘೋಷಣೆ ಮಾಡಿದ್ದು, ಗೊಂದಲಕ್ಕೆ ಕಾರಣವಾಯಿತು. ಶ್ರೀನಗರ ಮತ್ತು ಅನಂತ್ನಾಗ್ ಜಿಲ್ಲೆಗಳಲ್ಲಿ ಜನರು ಅಂಗಡಿಗಳನ್ನು ಮುಚ್ಚಿದರು.
ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲೀಕ್ ನೇಮಕ
'ರಾಜ್ಯದ ಕೆಲವು ಮಾಧ್ಯಮಗಳು 35-ಎ ಸಿಂಧುತ್ವದ ಕುರಿತು ನಿರಂತರವಾಗಿ ವರದಿ ಪ್ರಸಾರ ಮಾಡುತ್ತಿವೆ. ಆದರೆ, ಈ ಸುದ್ದಿಗಳು ಆಧಾರರಹಿತವಾಗಿವೆ' ಎಂದು ಪೊಲೀಸರು ಹೇಳಿದ್ದಾರೆ.
'ಆಗಸ್ಟ್ 31ರಂದು ಅರ್ಜಿಯ ವಿಚಾರಣೆ ನಡೆಯಲಿದೆ, ಇಂದು ಕೇವಲ ವದಂತಿಯನ್ನು ಹಬ್ಬಿಸಲಾಗುತ್ತಿದೆ. ಜನರು ಭಾವೋದ್ವೇಕಕ್ಕೆ ಒಳಗಾಗಬಾರದು, ಶಾಂತಿ ಕಾಪಾಡಬೇಕು' ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು.