ಕೊರೊನಾ ವೈರಸ್ ಹಾವಳಿಗೆ ಭಾರತದಲ್ಲಿ ತಡೆ, ವೈಜ್ಞಾನಿಕ ಕಾರಣ ಇಲ್ಲಿದೆ!
ಬೆಂಗಳೂರು, ಏ. 04: ಕೊರೊನಾ ವೈರಸ್ ದಾಳಿಗೆ ಮುಂದುವರೆದ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಅಮೇರಿಕಾ, ಸ್ಪೇನ್, ಇಟಲಿಯಂತಹ ಮುಂದುವರೆದ ದೇಶಗಳಲ್ಲಿ ಕೋವಿಡ್-19 ನಿಂದಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ಆತಂಕವನ್ನುಂಟು ಮಾಡಿದೆ. ಆದರೆ ಭಾರತದಲ್ಲಿ ಮಾತ್ರ ರೋಗ ಹರಡುತ್ತಿರುವ ಹಾಗೂ ವೈರಸ್ಗೆ ತುತ್ತಾಗಿ ಮರಣ ಹೊಂದಿದವರ ಸಂಖ್ಯೆ ಕಡಿಮೆಯಿದೆ ಎನ್ನುತ್ತಿವೆ ಅಂಕಿ ಅಂಶಗಳು.
Recommended Video
ಕೊರೊನಾ ವೈರಸ್ ಕುರಿತು ಅಧಿಕೃತ ಅಂಕಿ ಅಂಶಗಳನ್ನು ಪ್ರಕಟ ಮಾಡುತ್ತಿರುವ ವರ್ಡೊಮೀಟರ್ ಪ್ರಕಾರ ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟು ಅವರಲ್ಲಿ 0.03 ಜನರು ಮರಣಕ್ಕೆ ತುತ್ತಾಗಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 113.2 ಜನರಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ 5.7 ಜನರು ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಚೀನಾ ಹಾಗೂ ಯುರೋಪಿನ ದೇಶಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ಸೋಂಕು ಹರಡುತ್ತಿರುವುದು ಹಾಗೂ ಸೋಂಕಿನಿಂದ ಮರಣ ಹೊಂದಿರುವ ಜನರ ಪ್ರಮಾಣ ಅತ್ಯಂತ ಕಡಿಮೆಯಿದೆ.
ಒಮ್ಮೆ ಬಂದ ಕೊರೊನಾ ಮತ್ತೆ ದಾಳಿ ಮಾಡಲು ಸಾಧ್ಯವೇ?
ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ ಎರಡನೇ ದೇಶವಾಗಿರುವ ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆ ಹಾಗೂ ಅದರಿಂದ ಜೀವ ಕಳೆದು ಕೊಂಡವರ ಸಂಖ್ಯೆ ಕಡಿಮೆ ಕಂಡು ಬಂದಿರುವುದು ತಜ್ಞರಲ್ಲಿಯೂ ಕುತೂಹಲ ಮೂಡಿಸಿದೆ. ಪಾಶ್ಚಾತ್ಯ ವಿಜ್ಞಾನಿಗಳು, ತಜ್ಞರು ಹಾಗೂ ವೈದ್ಯರು ಕೂಡ ಕುತೂಹಲ ಮೂಡಿಸಿರುವ ಇದೇ ವಿಷಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ; ಬೇರೆ ದೇಶಗಳೊಂದಿಗೆ ಭಾರತದ ಹೋಲಿಕೆ
ಕಳೆದ ಫೆಬ್ರವರಿ 3ನೇ ವಾರದಲ್ಲಿ ಭಾರತ ಸೇರಿದಂತೆ ಕೊರೊನಾ ವೈರಸ್ ಸೋಂಕು ತಗಲಿದವರ ಸಂಖ್ಯೆ ಅಮೇರಿಕ, ಇಟಲಿ, ಸ್ಪೇನ್, ಜರ್ಮನಿ, ಪ್ರಾನ್ಸ್ ದೇಶಗಳಲ್ಲಿ ಎರಡಂಕಿ ದಾಟಿರಲಿಲ್ಲ. ಫೆಬ್ರುವರಿ 3ನೇ ವಾರದಲ್ಲಿ ಅಮೇರಿಕದಲ್ಲಿ 35, ಇಟಲಿಯಲ್ಲಿ 79, ಸ್ಪೇನ್ನಲ್ಲಿ 2, ಜರ್ಮನಿಯಲ್ಲಿ 16, ಫ್ರಾನ್ಸ್ನಲ್ಲಿ 12 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದವು. ಅದೇ ಸಂದರ್ಭದಲ್ಲಿ ಭಾರತದಲ್ಲಿ ಕೂಡ 3 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಒಂದು ತಿಂಗಳ ಬಳಿಕ ಮಾರ್ಚ್ ಅಂತ್ಯದಲ್ಲಿ ಪಾಶ್ಚಾತ್ಯ ದೇಶಗಳ ಚಿತ್ರಣವೇ ಬದಲಾಗಿತ್ತು.
ವುಹಾನ್ ನಲ್ಲಿ ಕೊರೊನಾ ರಣಕೇಕೆ: ಬೀಜಿಂಗ್, ಶಾಂಘೈನಲ್ಲಿಲ್ಲ ಯಾಕೆ?
ಮಾರ್ಚ್ ಕೊನೆಯ ವಾರದಲ್ಲಿ ಅಮೇರಿಕದಲ್ಲಿ 1,23,587, ಇಟಲಿಯಲ್ಲಿ 92,472, ಸ್ಪೇನ್ನಲ್ಲಿ 73,235, ಜರ್ಮನಿಯಲ್ಲಿ 57,695, ಫ್ರಾನ್ಸ್ನಲ್ಲಿ 37575 ಕೊರೊನಾ ವೈರಸ್ ದೃಢಪಟ್ಟಿದ್ದವು. ಆದರೆ ಭಾರತದಲ್ಲಿ ಮಾರ್ಚ್ 31ರವರೆಗೆ 987 ಮಾತ್ರ ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಭಾರತದ ಜನಸಂಖ್ಯೆ ಹಾಗೂ ಜನಸಾಂದ್ರತೆಗೆ ಹೋಲಿಕೆ ಮಾಡಿದಾಗ ನಮ್ಮ ದೇಶದಲ್ಲಿ ದೃಢಪಟ್ಟಿದ್ದ ಪ್ರಕರಣಗಳು ತೀರಾ ಕಡಿಮೆ ಎಂದು ಅಂಕಿ ಅಂಶಗಳೆ ತಿಳಿಸಿವೆ.
ಭಾರತೀಯರ ರೋಗ ನಿರೋಧಕ ಶಕ್ತಿ ಹೆಚ್ಚು?
ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದ್ರೆ ಭಾರತೀಯರಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚು. ಹೀಗಾಗಿ ಕೋವಿಡ್-೧೯ ಕಾಯಿಲೆ ಬಂದವರಲ್ಲಿ ಅರ್ಧಕ್ಕರ್ಧ ಜನಕ್ಕೆ ಕಾಯಿಲೆಯ ಲಕ್ಷಣಗಳು ಕಾಣುವ ಮೊದಲೇ ರೋಗ ಮುಕ್ತರಾಗಿರುತ್ತಾರೆ. ಹೀಗಾಗಿ ರೋಗ ಪತ್ತೆ ಆಗುವುದೇ ಇಲ್ಲ. ಇದರಿಂದಾಗಿ ಕೋವಿಡ್-19 ದೃಢಪಟ್ಟಿರುವ ಪ್ರಕರಣಗಳು ಕಡಿಮೆ ಬೆಳಕಿಗೆ ಬಂದಿರುಬಹುದು ಎಂಬ ವಿಶ್ಲೇಷಣೆಯೂ ಇದೆ. ರೋಗ ನಿರೋಧಕ ಶಕ್ತಿಯಿಂದ ಹರಡುವಿಕೆ ನಿಧಾನವಾಗಿದೆ ಎಂದೂ ವಿಶ್ಲೇಷಣೆ ಮಾಡಲಾಗುತ್ತಿದೆ. ಜೊತೆಗೆ ಭಾರತೀಯರ ಆಹಾರ ಪದ್ದತಿ ಕೂಡ ರೋಗ ಹರಡುವಿಕೆ ತಡೆಯುತ್ತಿದೆ. ಹೀಗಾಗಿ ಕೊರೊನಾ ಅಮೇರಿಕ, ಸ್ಪೇನ್ ಹಾಗೂ ಇಟಲಿಯಲ್ಲಿ ಹರಡಿದಷ್ಟು ಭಾರತದಲ್ಲಿ ಹರಡಿಲ್ಲ.
ಕೊರೊನಾ ವೈರಸ್ ಹರಡುವಿಕೆ ತಡೆದ ಭಾರತದ ಉಷ್ಣ ಹವಾಮಾನ
ಶಾಖದ ಹೆಚ್ಚಳವು ಕೊರೊನಾ ವೈರಸ್ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆಗಳಿಲ್ಲವಾದರೂ, ಇದು ಸಾಧ್ಯ ಎಂದು ಅನೇಕ ತಜ್ಞರು ಭಾವಿಸುತ್ತಾರೆ. 'ಹೆಚ್ಚಿನ ವೈರಸ್ಗಳು 45 ಡಿಗ್ರಿ ಸೆಲ್ಸಿಯಸ್ ಮೀರಿದ ತಾಪಮಾನದಲ್ಲಿ ಬದುಕುವುದಿಲ್ಲ ಎಂಬುದು ನಮಗೆ ತಿಳಿದಿದೆ' ಎಂದು ಭಾರತೀಯ ಇಮ್ಯುನೊಲಾಜಿಕಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಕೆ ಆನಂದ್ ಕುಮಾರ್ ಪ್ರತಿಪಾದಿಸುತ್ತಾರೆ.
ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?
ಇನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿರುವ ಕುಮಾರ್, ನಮ್ಮಲ್ಲಿ ಬೇಸಿಗೆಯಲ್ಲಿ 45 ಡಿಗ್ರಿ ಮೀರಿದ ತಾಪಮಾನವು ಕೊರೊನ ವೈರಸ್ ವಿರುದ್ಧ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ.
ರೋಗ ಲಕ್ಷಣವಿರುವ ಎಲ್ಲರನ್ನೂ ಪರೀಕ್ಷೆ ಮಾಡುತ್ತಿಲ್ಲ
ಭಾರತದಲ್ಲಿ ಮಾರ್ಚ್ ಅಂತ್ಯಕ್ಕೆ ಸುಮಾರು 47,951 ಜನರನ್ನು ಮಾತ್ರ ಪರೀಕ್ಷೆ ಮಾಡಲಾಗಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ಸಂಶೋಧನೆ ಪ್ರಕಾರ, ಕೋವಿಡ್-19 ದೃಢಪಟ್ಟ ರೋಗಿಯೊಂದಿಗೆ ಸಂಪರ್ಕ ಹೊಂದಿದವರು ಹಾಗೂ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ರೋಗ ಲಕ್ಷಣಗಳಿಂದ ಬಳಲುತ್ತಿರುವುವವನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದು ಕೂಡ ಕೊರೊನಾ ವೈರಸ್ ರೋಗಿಗಳ ಸಂಖ್ಯೆ ಕಡಿಮೆ ಪತ್ತೆಯಾಗಿರಲು ಕಾರಣವಾಗಿಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ವಿರುದ್ಧವಾದ ವಾದವೂ ಇದೆ.
ಪರೀಕ್ಷೆ ಮಾಡದೇ ಇದ್ದರೂ ವೈರಸ್ಗೆ ತುತ್ತಾದವರು ಕಾಯಿಲೆ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರಲೇಬೇಕಿತ್ತು. ಹಾಗೆ ಆಗಿದ್ದರೆ ಭಾರತದ ಆಸ್ಪತ್ರೆಗಳು ಇಷ್ಟರಲ್ಲಿ ಕೊರೊನಾ ವೈರಸ್ ಪೀಡಿತರಿಂದ ತುಂಬಿರಬೇಕಾಗಿತ್ತು. ಆದರೆ ಹಾಗೇ ಆಗಿಲ್ಲ. ಹೀಗಾಗಿ ಪರೀಕ್ಷೆ ಮಾಡದೇ ಇದ್ದರೂ ರೋಗ ಹರಡಿದ್ದರೆ ಇಷ್ಟರಲ್ಲಿಯೆ ಗೊತ್ತಾಗುತ್ತಿತ್ತು.
ರೋಗ ಸಮುದಾಯಕ್ಕೆ ಹರಡುವ ಮೊದಲೇ ಲಾಕ್ಡೌನ್
ಕೊರೊನಾ ವೈರಸ್ಗೆ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್ಡೌನ್ ಮಾಡಿದ್ದು ಕೂಡ ವೈರಸ್ ಹರಡುವಿಕೆ ಕಡಿಮೆಯಾಗಲು ಕಾರಣ ಎನ್ನಲಾಗ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೋವಿಡ್19 ಹರಡುವಿಕೆ ತಡೆಯಲು ರಾಮಬಾಣ ಎಂದು ವಿಜ್ಞಾನಿಗಳು, ವೈದ್ಯರು ಹಾಗೂ ತಜ್ಞರು ಹೇಳಿದ್ದಾರೆ. ಆದರೆ ಇಷ್ಟು ಬೇಗ ಲಾಕ್ಡೌನ್ ಮಾಡಿದ್ದರಿಂದಲೆ ವೈರಸ್ ಹರಡುವಿಕೆ ಕಡಿಮೆಯಾಗಿದೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'
ಬಿಸಿಜಿ ವ್ಯಾಕ್ಸಿನೇಷನ್
ಭಾರತದಲ್ಲಿ ಕಡಿಮೆ ಕೋವಿಡ್-19 ಪ್ರಕರಣಗಳಿಗೆ ಬ್ಯಾಸಿಲಸ್ ಕ್ಯಾಲ್ಮೆಟ್-ಗುಯೆರಿನ್ (ಬಿಸಿಜಿ) ಲಸಿಕೆ ಸಂಭವನೀಯ ಕಾರಣ ಆಗಿರಬಹುದು ಎಂದು ಈಗ ಚರ್ಚಿಸಲಾಗುತ್ತಿದೆ. ಕ್ಷಯರೋಗದಿಂದ ರಕ್ಷಿಸಲು ಲಸಿಕೆಯನ್ನು ಭಾರತದಲ್ಲಿ ಸಾರ್ವತ್ರಿಕವಾಗಿ ನೀಡಲಾಗುತ್ತದೆ. ಯುಎಸ್, ಯುರೋಪ್ ಮತ್ತು ಆಸ್ಟ್ರೇಲಿಯಾದ ವಿಜ್ಞಾನಿಗಳು ಬಿಸಿಜಿ ಲಸಿಕೆ ಕೋವಿಡ್-19 ವೈರಸ್ ವಿರುದ್ಧ ಭಾರತದಲ್ಲಿ ಜನರನ್ನು ರಕ್ಷಿಸಲು ಸಹಾಯವಾಗಿದೆಯೇ ಎಂಬ ಅಧ್ಯಯನ ಪ್ರಾರಂಭಿಸಿದ್ದಾರೆ.
ಬೀಜಿಂಗ್, ಶಾಂಘೈನಲ್ಲಿಲ್ಲ ಕೊರೊನಾ ರಣಕೇಕೆ: ಹಿಂದಿದೆ ಚೀನಾ ಮಾಸ್ಟರ್ ಪ್ಲಾನ್?
ಒಟ್ಟಾರೆ ಈ ಮೇಲಿನ ಎಲ್ಲ ಅಂಶಗಳನ್ನು ನೋಡಿದಾಗ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆ ಕಡಿಮೆಯಿದೆ. ಪಾಶ್ಚಾತ್ಯರು ಸಣ್ಣ ಜ್ವರದಿಂದಲೂ ಮರಣಹೊಂದುತ್ತಾರೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಹೀಗಾಗಿ ಭಾರತೀಯರು ಹಲವು ಕಾರಣಗಳಿಂದ ಕೊರೊವಾ ವೈರಸ್ ಹಾವಳಿಯನ್ನು ಆದಷ್ಟು ಮೆಟ್ಟಿ ನಿಂತಿದ್ದಾರೆ ಎಂದು ಸಧ್ಯದ ಸ್ಥಿತಿಯಲ್ಲಿ ವಿಶ್ಲೇಷನೆ ಮಾಡಲಾಗಿದೆ.