ಬಿಎಸ್ಎಫ್ ಯೋಧನ ಬೆನ್ನಿಗೆ ನಿಂತ ಕ್ರೀಡಾ ತಾರೆಗಳು
ನವದೆಹಲಿ, ಜ. 10: ಜಮ್ಮು ಕಾಶ್ಮೀರ ಗಡಿ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಯೋಧರಿಗೆ ಕಳಪೆ ಊಟ ನೀಡುತ್ತಿರುವ ಬಗ್ಗೆ ದನಿಯೆತ್ತಿರುವ ಬಿಎಸ್ಎಫ್ ಯೋಧ ತೇಜ್ ಬಹದೂರ್ ಯಾದವ್ ಬೆಂಬಲಕ್ಕೆ ಇದೀಗ ಕ್ರೀಡಾ ತಾರೆಗಳು ಧಾವಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಅವರು ಯೋಧರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕೆಂದು ಆಗ್ರಹಿಸಿದ್ದಾರೆ.
ಯೋಧನ ಅಳಲಿಗೆ ಸಹಾನುಭೂತಿ ತೋರಿಸಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, "ಏನೇ ಅಡ್ಡಿ ಆತಂಕಗಳಿರಲಿ, ಸರ್ಕಾರವು ಸೈನಿಕರು ಹಾಗೂ ರೈತರ ಬಗ್ಗೆ ಕಾಳಜಿ ತೋರಬೇಕು. ಗಡಿ ಕಾಯುವ ಯೋಧರಿಗೆ ಉತ್ತಮ ಭೋಜನ ಸಿಗಬೇಕು'' ಎಂದಿದ್ದಾರೆ.
ಇನ್ನು, ಭಾರತದ ಮೊಟ್ಟಮೊದಲ ಪ್ರೊ ಬಾಕ್ಸರ್ ಎಂದೇ ಖ್ಯಾತಿ ಗಳಿಸಿರುವ ವಿಜೇಂದರ್ ಸಿಂಗ್, ''ಯೋಧ ಯಾದವ್ ಅವರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹಾಕಿರುವ ವೀಡಿಯೋ ತುಣುಕುಗಳಿಂದ ಮನಸ್ಸು ಘಾಸಿಗೊಂಡಿದೆ. ದೂರ ಗಡಿ ಭಾಗದಲ್ಲಿ ನಿಂತಿರುವ ನಮ್ಮ ಯೋಧರಿಗೆ ನೆಮ್ಮದಿಯ ಊಟವೂ ಸಿಗುತ್ತಿಲ್ಲವೆಂದು ಬೇಸರದ ಸಂಗತಿಯಾಗಿದೆ. ಅವರಿಗೆ ಅಗತ್ಯ ಕಾಳಜಿ ನೀಡಬೇಕು'' ಎಂದಿದ್ದಾರೆ.
ಇನ್ನು, ಕುಸ್ತಿ ಪಟು ಯೋಗೇಶ್ವರ್ ದತ್ ಟ್ವೀಟ್ ಮಾಡಿ, ''ಕೇವಲ ಒಂದು ರೊಟ್ಟಿ ತಿಂದು ಗಂಟೆಗಟ್ಟಲೆ ಗಡಿ ಕಾಯುವ ಯೋಧರನ್ನು ಶೋಶಣೆಗೆ ದೂಡಿರುವುದು ಸರಿಯಲ್ಲ. ಈ ಅವ್ಯವಸ್ಥೆ ದೂರವಾಗಬೇಕು'' ಎಂದಿದ್ದಾರೆ.
ಇನ್ನು, ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್ ಕೂಡಾ ಇದೇ ಮಾದರಿಯ ಟ್ವೀಟ್ ಗಳನ್ನು ಮಾಡಿ, ಯೋಧನಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಯೋಧರಿಗೆ ನೀಡಲಾಗುತ್ತಿರುವ ಕಳಪೆ ಊಟದ ಬಗ್ಗೆ ವೀಡಿಯೋ ಮಾಡಿ ಅದನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಯೋಧ ಯಾದವ್, ತಾವು ಗಡಿಯಲ್ಲಿ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ದಿನ ಕಳೆಯುತ್ತಿರುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.
"ಬೆಳಗಿನ ಉಪಾಹಾರಕ್ಕೆ ಕೇವಲ ಒಂದು ರೊಟ್ಟಿ ಹಾಗೂ ಒಂದು ಕಪ್ ಚಹಾ ನೀಡಲಾಗುತ್ತದಷ್ಟೇ. ಆ ರೊಟ್ಟಿಯ ಜತೆ ತಿನ್ನಲು ಪಲ್ಯ ಅಥವಾ ಉಪ್ಪಿನ ಕಾಯಿಯನ್ನೂ ಕೊಡುವುದಿಲ್ಲ. ಆ ಒಣ ರೊಟ್ಟಿಯನ್ನು ತಿಂದು ನಾವು (ಯೋಧರು) 11 ಗಂಟೆಗಳ ಕಾಲ ಗಡಿಯಲ್ಲಿ ಕಾವಲು ಕಾಯುತ್ತಾ ನಿಲ್ಲಬೇಕು'' ಎಂದಿದ್ದರು.
"ಇನ್ನು, ಮಧ್ಯಾಹ್ನಕ್ಕೆ ರೊಟ್ಟಿ ಮತ್ತು ದಾಲ್ ನೀಡುತ್ತಾರೆ. ಆದರೆ, ಹಳದಿ, ಉಪ್ಪು, ನೀರು ಹಾಕಿ ಕುದಿಸಿದ ದ್ರಾವಣವನ್ನು ದಾಲ್ ಹೆಸರಿನಲ್ಲಿ ನೀಡಲಾಗುತ್ತಿದೆ. ದಾಲ್ ನಲ್ಲಿ ಇರಬೇಕಾದ ಬೇಳೆ ಕಾಳುಗಳು ಹುಡುಕಿದರೂ ಸಿಗುವುದಿಲ್ಲ" ಎಂದು ಯಾದವ್ ವೀಡಿಯೊದಲ್ಲಿ ತಿಳಿಸಿದ್ದರು.
ಇನ್ನು, ತಮ್ಮ ವೀಡಿಯೊದಲ್ಲಿ ಪ್ರಧಾನಿಗೆ ಮನವಿ ಮಾಡಿದ್ದ ಅವರು, "ಗಡಿಗಳಲ್ಲಿ ಯೋಧರಿಗೆ ನೀಡಲಾಗುತ್ತಿರುವ ಕಳಪೆ ಊಟದ ಬಗ್ಗೆ
ಪ್ರಧಾನಿ ನರೇಂದ್ರ ಮೋದಿಯವರು ಗಮನ ಹರಿಸಬೇಕು. ಇಲ್ಲಿ ಅಧಿಕಾರಿಗಳು ಲೂಟಿ ಕೋರರಾಗಿದ್ದಾರೆ. ಸ್ವತಂತ್ರ್ಯವಾದ ತನಿಖೆಯಿಂದ ಮಾತ್ರ ಅವರನ್ನು ಪತ್ತೆ ಮಾಡಲು ಸಾಧ್ಯ. ಮೋದಿಯವರು ಈ ಬಗ್ಗೆ ಗಮನ ಹರಿಸಬೇಕು'' ಎಂದು ಕೋರಿದ್ದರು.