CBSE ಫಲಿತಾಂಶ ಇಳಿಕೆ, ಇದೇನಾ ಅಚ್ಚೇ ದಿನ್ : ರಾಹುಲ್
ದೀರ್ಘಾವಧಿ ರಜೆಯ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ ಸುತ್ತುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಗುದೊಮ್ಮೆ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ಮಾಡಿದ್ದು ಅಭಿವೃದ್ದಿ ಶೂನ್ಯ, ಬರೀ ಮಾತಿನಲ್ಲಿ ಅರಮನೆ ಕಟ್ಟಿದ್ದು ಪ್ರಧಾನಿಯವರ ಸಾಧನೆ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ಈ ಬಾರಿಯ ಸಿಬಿಎಸ್ಸಿ 10ನೇ ಮತ್ತು 12ನೇ ಕ್ಲಾಸಿನ ಫಲಿತಾಂಶ ಹೊರಬಿದ್ದಿದೆ. ಯುಪಿಎ ಸರಕಾರದ ಅವಧಿಗಿಂತ ಎನ್ಡಿಯ ಸರಕಾರದ ಅವಧಿಯಲ್ಲಿನ ಫಲಿತಾಂಶದಲ್ಲಿ ಇಳಿಕೆಯಾಗಿದೆ. ಮೋದಿಯವರ ಅಚ್ಚೇದಿನ್ ಅಂದರೆ ಇದೇನಾ ಎಂದು ರಾಹುಲ್ ಗಹಗಹಿಸಿ ನಕ್ಕಿದ್ದಾರೆ. (CBSE ಕ್ಲಾಸ್ 10 ಫಲಿತಾಂಶ ಇಲ್ಲಿ ನೋಡಿ)
ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿ 498 ಅಂಕ ಪಡೆದಿದ್ದ, ಮೋದಿ ಸರಕಾರದ ಅವಧಿಯಲ್ಲಿನ ಟಾಪರ್ 496 ಅಂಕ ಪಡೆದಿದ್ದಾನೆ.
ಈಗ ಹೇಳಿ, ಮೋದಿ ಸರಕಾರ ಉತ್ತಮವೋ, ನಮ್ಮ ಅವಧಿಯಲ್ಲಿನ ಮನಮೋಹನ್ ಸಿಂಗ್ ಸರಕಾರ ಉತ್ತಮವೋ ಎಂದು ರಾಹುಲ್ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.
ತನ್ನನ್ನು ಬಿಟ್ಟರೆ ಇನ್ಯಾರಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುವ ಎಚ್ಆರ್ಡಿ ಸ್ಮೃತಿ ಇರಾನಿ ಈಗ ಎಲ್ಲಿ ಹೋಗಿದ್ದಾರೆ. ಮೋದಿ ಸರಕಾರದ ಅವಧಿಯಲ್ಲಿ ಯಾಕೆ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶ ಪಡೆಯುತ್ತಿಲ್ಲ.
ಈ ಬಗ್ಗೆ ಇರಾನಿ ಕೂಡಲೇ ತನಿಖೆ ನಡೆಸಲಿ. ಇಲ್ಲದಿದ್ದರೆ ಅಂಬಿಕಾ ಸೋನಿ ನೇತೃತ್ವದಲ್ಲಿ ನಾವೇ ಕಮಿಟಿ ರಚಿಸಿ ತನಿಖೆಗೆ ಮುಂದಾಗುತ್ತೇವೆ.
ಈಗಾಗಲೇ ನಮ್ಮ ಸಿದ್ದರಾಮಯ್ಯ ಸರಕಾರ ಸಿಬಿಐಗೆ ಸಾಕಷ್ಟು ಕೆಲಸ ನೀಡಿರುವುದರಿಂದ, ನಾವು ಇದನ್ನು ಸಿಬಿಐ ತನಿಖೆಗೆ ಕೊಡಲು ಒತ್ತಾಯಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಹೋದ ವರ್ಷದ ಪ್ರಶ್ನೆ ಪತ್ರಿಕೆಗೂ, ಈ ವರ್ಷದ ಪತ್ರಿಕೆಗೂ ರಾಹುಲ್ ಗಾಂಧಿ ಹೋಲಿಸಿ ಮಾತನಾಡಲಿ. ರಾಜಕೀಯ ಮಾಡುವುದಕ್ಕೂ ರೀತಿ ನೀತಿ ಅನ್ನೋದು ಇರುತ್ತೆ.
ಎಲ್ಲಾ ವಿಚಾರದಲ್ಲೂ ಅಚ್ಚೇ ದಿನ್ , ಸೂಟುಬುಟು ಅನ್ನೋದು ರಾಹುಲ್ ಗಾಂಧಿಯವರಿಗೆ ಒಳ್ಳೆಯದಲ್ಲ, ಇದು ಒಳ್ಳೆಯ ರಾಜತಂತ್ರಗಾರಿಕೆ ಅಲ್ಲ ಎಂದು ಬಿಜೆಪಿ, ರಾಹುಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳ ಮನೆ ಮನೆಗೆ ಹೋಗಿ ಪ್ರಧಾನಿ ಮೋದಿ ಪಾಠ ಹೇಳಿ ಕೊಡಲು ಸಾಧ್ಯವೇ? ಇಂತಹ ಕನಿಷ್ಠ ತಿಳುವಳಿಕೆ ರಾಹುಲ್ ಗಾಂಧಿಗೆ ಇಲ್ಲದಾಯಿತೇ ಎಂದು ಬಿಜೆಪಿ ಮಮ್ಮಲ ಮರುಗಿದೆ.
(ಶೈಕ್ಷಣಿಕ ವಿಚಾರದಲ್ಲಿ ಅಣಕವಾಡುವ ಉದ್ದೇಶವಲ್ಲದಿದ್ದರೂ, ನಮ್ಮ ರಾಜಕಾರಣಿಗಳು ಇದನ್ನೂ ಮುಂದೊಂದು ದಿನ ವಿರೋಧಿಗಳ ವಿರುದ್ದ ಅಸ್ತ್ರವಾಗಿ ಬಳಸಿದರೂ ಬಳಸಬಹುದು, ಇದೊಂದು ಕಾಲ್ಪನಿಕ ಲೇಖನ) Source: Firstpost.com