ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಭೇಟಿ: ಕುತೂಹಲ, ಊಹಾಪೋಹ
ನವದೆಹಲಿ, ಆಗಸ್ಟ್ 5: ರಾಜಕೀಯದಲ್ಲಿ ನಾನೊಂದು ತೀರ, ನೀನೊಂದು ತೀರ ಎಂದಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಇಂದು ಪರಸ್ಪರ ಭೇಟಿಯಾಗಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಜಿಎಸ್ಟಿ ಬಿಡುಗಡೆ ಮತ್ತು ಇತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು ಎನ್ನುವುದು ಮೇಲ್ನೋಟಕ್ಕಾದರೂ, ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ, ಊಹಾಪೋಹಕ್ಕೂ..
Breaking: ಮಮತಾ ಬ್ಯಾನರ್ಜಿ ಸಂಪುಟ ಸೇರಿದ 9 ಶಾಸಕರು
ಮಮತಾ ಬ್ಯಾನರ್ಜಿ ನಾಲ್ಕು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರಲಿದ್ದು, ಭಾನುವಾರದ (ಆಗಸ್ಟ್ 7) ನೀತಿ ಆಯೋಗದ ಸಭೆಯಲ್ಲೂ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಮತಾ ಭೇಟಿಯಾಗಲಿದ್ದಾರೆ.
ಸಂಸತ್ ಅಧಿವೇಶನ ಆರಂಭವಾಗಿರುವ ಹಿನ್ನಲೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಸದರನ್ನು ಭೇಟಿಯಾಗಿ ಅಭಿವೃದ್ದಿ ಮತ್ತು ತಮ್ಮ ಪಕ್ಷದ ನಿಲುವಿನ ಬಗ್ಗೆ ಮಮತಾ ಚರ್ಚಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ 7 ಹೊಸ ಜಿಲ್ಲೆಗಳ ಸೇರ್ಪಡೆ
ಪಶ್ಚಿಮ ಬಂಗಾಳದ ಜಿಎಸ್ಟಿ ಪಾಲು ಒಂದು ಲಕ್ಷ ಕೋಟಿ
ಪಶ್ಚಿಮ ಬಂಗಾಳದ ಜಿಎಸ್ಟಿ ಪಾಲು ಒಂದು ಲಕ್ಷ ಕೋಟಿ ಕೇಂದ್ರದಿಂದ ಬರಬೇಕಿದೆ. ಬಿಜೆಪಿಯೇತರ ಸರಕಾರಕ್ಕೆ ಉದ್ದೇಶಪೂರ್ವಕವಾಗಿಯೇ ಕೇಂದ್ರ ವಿಳಂಬ ನೀತಿ ತೋರುತ್ತಿದೆ ಎಂದು ಮಮತಾ ಬ್ಯಾನರ್ಜಿ ಇತ್ತೀಚೆಗೆ ಆರೋಪಿಸಿದ್ದರು. ಇದರ ಜೊತೆಗೆ, ಪಕ್ಷದ ಮುಖಂಡನ ಮೇಲಿನ ಇಡಿ ದಾಳಿಯ ಹಿನ್ನಲೆಯಲ್ಲಿ ಮೋದಿ-ಮಮತಾ ಸಭೆಯು ಭಾರೀ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ ಮತ್ತು ಕೆಲವು ಭಿನ್ನಾಭಿಪ್ರಾಯಗಳಿಗೂ ಕಾರಣವಾಗಿದೆ.
ಮಮತಾ ಬ್ಯಾನರ್ಜಿಯವರ ಪರಮಾಪ್ತರಲ್ಲೊಬ್ಬರಾದ ಪಾರ್ಥ ಚಟರ್ಜಿ ಇಡಿ ಕಸ್ಟಡಿಯಲ್ಲಿ
ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ಮೂಲಕ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿನ ಅಕ್ರಮಗಳ ಆರೋಪದ ಮೇಲೆ ಮಮತಾ ಬ್ಯಾನರ್ಜಿಯವರ ಪರಮಾಪ್ತರಲ್ಲೊಬ್ಬರಾದ ಪಾರ್ಥ ಚಟರ್ಜಿ ಇಡಿ ಕಸ್ಟಡಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ಮಮತಾ ಭೇಟಿ ಹಲವು ಅಂತೆಕಂತೆ ಸುದ್ದಿಗಳಿಗೆ ಕಾರಣವಾಗಿದೆ.
ಯಾವುದೇ ಪ್ರತಿಕ್ರಿಯೆ ನೀಡದ ದಿಲೀಪ್ ಘೋಷ್
ಇಡಿ ಬಂಧನವಾಗುತ್ತಿದ್ದಂತೆಯೇ ಪಾರ್ಥ ಚಟರ್ಜಿ ಅವರನ್ನು ಕ್ಯಾಬಿನೆಟ್ ಮತ್ತು ಪಕ್ಷದ ಎಲ್ಲಾ ಸ್ಥಾನಗಳಿಂದ ತೆಗೆದು ಹಾಕಲಾಗಿತ್ತು. ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಿಂದ 50 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾದ ನಂತರ ಚಟರ್ಜಿ 10 ದಿನಗಳ ಇಡಿ ಬಂಧನದಲ್ಲಿದ್ದಾರೆ. ತಮ್ಮ ಪಕ್ಷದ ನಾಯಕರ ವಿರುದ್ದ ಕೇಂದ್ರ ತನಿಖಾ ದಳದ ಪ್ರಕ್ರಿಯೆಗಳ ಬಗ್ಗೆ ಮೋದಿ-ಮಮತಾ ಚರ್ಚಿಸುತ್ತಾರೆಯೇ ಎನ್ನುವ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಒಂದು ಕಾಲದ ಮಮತಾ ಆಪ್ತ ದಿಲೀಪ್ ಘೋಷ್ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಮೋದಿ, ಮಮತಾ ಬ್ಯಾನರ್ಜಿ ಭೇಟಿ: ಕುತೂಹಲ, ಊಹಾಪೋಹ
ಈ ರೀತಿಯ ಊಹಾಪೋಹ ಸುದ್ದಿಗಳನ್ನು ಟಿಎಂಸಿ ಸಂಸದ ಸುಖೇಂದು ಶೇಖರ್ ರೇ ಸಾರಾಸಗಾಟವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯ ಇತರ ನಾಯಕರಾದ ಸುಖಾಂತ್ ಮಜುಂದಾರ್ ಮತ್ತು ಸುವೇಂದು ಅಧಿಕಾರಿ, ಪ್ರಧಾನಿ ಮತ್ತು ಮಮತಾ ಸಭೆಯ ಬಗ್ಗೆ ಸಂತೋಷವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರದ ಬಿಜೆಪಿ ನಾಯಕರು ಈ ವಿಚಾರದಲ್ಲಿ ಮೌನವಹಿಸಿರುವುದೇ ಊಹಾಪೋಹ ಸುದ್ದಿಗೆ ಕಾರಣವಾಗಿರುವುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. (ಚಿತ್ರಕೃಪೆ: ಪ್ರಧಾನಿ ಕಾರ್ಯಾಲಯ)