ಸಿವಿಲ್ ಸರ್ವಿಸ್ ಪರೀಕ್ಷೆ: ಟ್ರೋಲ್ಗಳಿಗೆ ಉತ್ತರ ನೀಡಿದ ಸ್ಪೀಕರ್ ಓಂ ಬಿರ್ಲಾ ಪುತ್ರಿ
ನವದೆಹಲಿ, ಜನವರಿ 21: ತಮ್ಮ ವಿರುದ್ಧದ ರೂಮರ್ಗಳು ಹಾಗೂ ಸಾಮಾಜಿಕ ಜಾಲತಾಣದ ಟ್ರೋಲ್ಗಳಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮಗಳು ಅಂಜಲಿ ಬಿರ್ಲಾ ಉತ್ತರ ನೀಡಿದ್ದಾರೆ. ಪರೀಕ್ಷೆಗೆ ಹಾಜರಾಗದೆಯೇ ನಾಗರಿಕ ಸೇವೆಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವುದಾಗಿ ಹರಡಿರುವ ವದಂತಿಗಳು ತಮಗೆ ಯಾವ ರೀತಿಯಲ್ಲಿಯೂ ಹಾನಿ ಉಂಟುಮಾಡುವುದಿಲ್ಲ, ಬದಲಾಗಿ ತಮ್ಮನ್ನು ಮತ್ತಷ್ಟು ಗಟ್ಟಿಪಡಿಸುತ್ತದೆ ಎಂದಿದ್ದಾರೆ.
'ಟ್ರೋಲಿಂಗ್ ಮಾಡುವುದರ ವಿರುದ್ಧ ಕಠಿಣ ಕಾನೂನು ಬರಬೇಕಿದೆ. ಸುಳ್ಳು ಸುದ್ದಿ ಹರಡಿಸುವ ಅಂತಹ ಜನರನ್ನು ಹುಡುಕಿ ನಾವು ಅದಕ್ಕೆ ಜವಾಬ್ದಾರರನ್ನಾಗಿಸಬೇಕು. ಇಂದು ನಾನು ಬಲಿಪಶು ಆಗಿದ್ದೇನೆ. ನಾಳೆ ಇನ್ನೊಬ್ಬರು ಬಲಿಪಶು ಆಗಬಹುದು' ಎಂದು ಅವರು ಹೇಳಿದ್ದಾರೆ.
ಮೋದಿ ಅವರಂತೆ ಆಡಬೇಡಿ, ಮಾಸ್ಕ್ ಧರಿಸಿ: ಎಎಪಿ ಟ್ರೋಲ್
23 ವರ್ಷದ ಅಂಜಲಿ ಅವರು ಮೂರು ಕಠಿಣ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅಲ್ಲದೆ 2019ರ ಸಿವಿಲ್ ಸರ್ವಿಸಸ್ (ಮೇನ್) ಪರೀಕ್ಷೆಯ ಅರ್ಹ ಪಟ್ಟಿಯಲ್ಲಿಯೂ ಅವರ ಹೆಸರು ಇತ್ತು. ಆದರೆ ಆಕೆ ಅಪ್ಪನ ಸ್ಥಾನದ ಲಾಭ ಪಡೆದಿದ್ದಾರೆ ಮತ್ತು ಹಿಂಬಾಗಿಲಿನಿಂದ ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದ್ದವು.
'ಕಷ್ಟಪಟ್ಟು ಓದಿ ಪರೀಕ್ಷೆಯೊಂದನ್ನು ಉತ್ತೀರ್ಣ ಮಾಡಿರುವಾಗ ಅದಕ್ಕೆ ವಿವರಣೆ ನೀಡಬೇಕು ಎಂದಾದಾಗ ನನಗೆ ಹಿಂಜರಿಕೆ ಉಂಟಾಯಿತು. ಆದರೆ ನನ್ನ ಜೀವನದಲ್ಲಿ ಇನ್ನೂ ಅನೇಕ ಟೀಕೆಗಳನ್ನು ಎದುರಿಸಬೇಕಾಗಬಹುದು ಎಂಬ ಸಂಗತಿ ನನ್ನನ್ನು ಗಟ್ಟಿಗೊಳಿಸಿತು. ಅದು ವ್ಯಕ್ತಿಯಾಗಿ ನನ್ನನ್ನು ಮತ್ತಷ್ಟು ಪ್ರಬುದ್ಧಳನ್ನಾಗಿಸಿತು. ನಾನು ಪ್ರತಿ ಪ್ರಯತ್ನದಲ್ಲಿಯೂ ಪ್ರಾಮಾಣಿಕಳಾಗಿದ್ದೇನೆ. ನನ್ನ ಆಪ್ತರು ಮತ್ತು ಹತ್ತಿರದವರಿಗೆ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎನ್ನುವುದು ತಿಳಿದಿದೆ' ಎಂದು ಹೇಳಿದ್ದಾರೆ.
'ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯು ಒಂದು ವರ್ಷದುದ್ದಕ್ಕೂ ಮೂರು ಹಂತಗಳಲ್ಲಿ ನಡೆಯುತ್ತದೆ. ಈ ಮೂರರಲ್ಲೂ ಉತ್ತೀರ್ಣರಾದರೆ ಮಾತ್ರವೇ ನೀವು ನಾಗರಿಕ ಸೇವಾ ಅಧಿಕಾರಿಯಾಗಬಹುದು. ಯುಪಿಎಸ್ಸಿ ಸಿಎಸ್ಇ ಬಹಳ ನ್ಯಾಯಸಮ್ಮತ ಮತ್ತು ಪಾರದರ್ಶಕ ಪ್ರಕ್ರಿಯೆ. ಇಲ್ಲಿ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಕನಿಷ್ಠ ಈ ಸಂಸ್ಥೆಯನ್ನು ಗೌರವಿಸಿ' ಎಂದು ಟ್ರೋಲರ್ಗಳಿಗೆ ಮನವಿ ಮಾಡಿದ್ದಾರೆ.