ಯೋಗಿ ಆದಿತ್ಯನಾಥ್ ಕಚೇರಿಯಲ್ಲಿ ಮುಲಾಯಂ ಪುತ್ರ, ಸೊಸೆ: ಯಾಕೀ ಭೇಟಿ?
ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ತನ್ನ ಪತ್ನಿಯೊಂದಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶುಕ್ರವಾರ (ಮಾ 24) ಭೇಟಿ ಮಾಡಿರುವುದು ಹಲವು ಚರ್ಚೆಗೆ ನಾಂದಿ ಹಾಡಿದೆ.
ಲಕ್ನೋ, ಮಾ 24: ಕಸಾಯಿಖಾನೆ ಬಂದ್, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಗಮನ ಹರಿಸುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಶುಕ್ರವಾರ (ಮಾ 24) ಅಚ್ಚರಿಯೊಂದು ಕಾದಿತ್ತು.
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಮತ್ತು ಅವರ ಪತ್ನಿ ಅಪರ್ಣಾ ಯಾದವ್ ಸಿಎಂ ಆದಿತ್ಯನಾಥ್ ಅವರನ್ನು ಸರಕಾರೀ ಬಂಗಲೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಟಿಕೆಟಿನಿಂದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಎದುರು 28 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅಪರ್ಣಾ ಯಾದವ್ ಸೋತಿದ್ದರು.
ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮೂವತ್ತು ನಿಮಿಷ ಚರ್ಚೆ ನಡೆಸಿ ಹೊರಬಂದ ಯಾದವ್ ದಂಪತಿಗಳು, ಮಾಧ್ಯಮದರತ್ತ ಕೈಬೀಸಿ ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ.. ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಲಾಯಂ ಮತ್ತು ಪುತ್ರ ಅಖಿಲೇಶ್ ವೇದಿಕೆಯಲ್ಲಿದ್ದು, ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸುತ್ತಾ, ಖುದ್ದು ಬಿಜೆಪಿಯವರಿಗೇ ಅಚ್ಚರಿ ಮೂಡಿಸಿದ್ದರು. ಮುಂದೆ ಓದಿ..
ಯೋಗಿ, ಮುಲಾಯಂ ಪುತ್ರ ಭೇಟಿ
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮುಲಾಯಂ ಪುತ್ರ ಪ್ರತೀಕ್ ಯಾದವ್ , ಸಿಎಂ ಯೋಗಿಯನ್ನು ಭೇಟಿಯಾದ ನಂತರ ಉತ್ತರಪ್ರದೇಶ ರಾಜ್ಯ ರಾಜಕೀಯದಲ್ಲಿ ಗುಸುಗುಸು ಸುದ್ದಿ ಹರಿದಾಡಲಾರಂಭಿಸಿದೆ. ಪ್ರತೀಕ್ ಕಳೆದ ಚುನಾವಣೆಯಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರಿನಲ್ಲಿ ಲಕ್ನೋ ರಸ್ತೆಗಳಲ್ಲಿ ಸುತ್ತಾಡಿ ಎಲ್ಲರ ಹುಬ್ಭೇರುವಂತೆ ಮಾಡಿದ್ದರು. ಇದು ಪಕ್ಷಕ್ಕೆ ಮುಜುಗರವನ್ನೂ ತಂದಿತ್ತು. (ಚಿತ್ರ: ಎಎನ್ಐ)
ರಾಜ್ಯ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ ಸಿಎಂ ಆದಿತ್ಯನಾಥ್
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವ ಯೋಗಿ ಆದಿತ್ಯನಾಥ್, ಪೊಲೀಸ್ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳನ್ನು ಈಗಾಗಲೇ ಸಸ್ಪೆಂಡ್ ಮಾಡಿದ್ದಾಗಿದೆ. ಯೋಗಿ ಉತ್ತರಪ್ರದೇಶದ ಸರಕಾರೀ ವ್ಯವಸ್ಥೆಗೆ ಭಾರೀ ಚುರುಕು ಮುಟ್ಟಿಸುತ್ತಿರುವುದು, ಮುಲಾಯಂ ಪುತ್ರ ಮುಖ್ಯಮಂತ್ರಿಗಳನ್ನು ಭೇಟಿಯಾಗಿರುವುದಕ್ಕೆ ಕಾರಣವೇ ಎನ್ನುವ ಚರ್ಚೆ ರಾಜ್ಯದಲ್ಲಿ ಆರಂಭವಾಗಿದೆ ಎನ್ನುವ ಸುದ್ದಿಯಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪ್ರತೀಕ್ ಯಾದವ್
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪ್ರತೀಕ್ ಯಾದವ್ ಪತ್ನಿಯೊಂದಿಗೆ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿರುವ ಹಿಂದೆ ಸ್ವಹಿತಾಶಕ್ತಿ ಅಡಗಿದೆಯೋ, ತನ್ನ ಸಾಮ್ರಾಜ್ಯವನ್ನು ಉಳಿಸುವ ಇರಾದೆಯೋ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ. (ಚಿತ್ರ: ಎಎನ್ಐ)
ಸಂಸತ್ತಿನಲ್ಲಿ ಉತ್ತರಪ್ರದೇಶಕ್ಕೆ ಸಂದೇಶ ನೀಡಿದ ಯೋಗಿ
ಇದಕ್ಕೆ ಪೂರಕ ಎನ್ನುವಂತೆ, ಇನ್ನೂ ಲೋಕಸಭಾ ಸದಸ್ಯರಾಗಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬುಧವಾರ (ಮಾ 22) ಸಂಸತ್ತಿನಲ್ಲಿ ಭಾಷಣ ಮಾಡುತ್ತಾ, ಯಾವ ಭ್ರಷ್ಟಾಚಾರಿಗಳನ್ನೂ ನಾನು ಬಿಡುವುದಿಲ್ಲ. ಉತ್ತರಪ್ರದೇಶದಲ್ಲಿ ತುಂಬಾ ಜನ ಬಂಧನಕ್ಕೊಳಗಾಗಲಿದ್ದಾರೆಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಚಿತ್ರ: ಲೋಕಸಭಾ ಟಿವಿ)
ಮೋದಿ ಜೊತೆ ಅಪರ್ಣಾ ಯಾದವ್ ಸೆಲ್ಫಿ
ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಜೊತೆ ಮುಲಾಯಂ ಸೊಸೆ ಅಪರ್ಣಾ ಸೆಲ್ಫಿ ತೆಗೆದುಕೊಂಡಿದ್ದು ಸ್ವಪಕ್ಷೀಯರ ಟೀಕೆಗೊಳಗಾಗಿತ್ತು. ಮೋದಿ ಈ ದೇಶದ ಪ್ರಧಾನಿ ಅವರ ಜೊತೆ ಸೆಲ್ಫಿ ತೆಗೆದುಕೊಂಡರೆ ತಪ್ಪೇನು ಎಂದು ಅಪರ್ಣಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದರು. (ಚಿತ್ರ: ಟ್ವಿಟ್ಟರ್)
ಯೋಗಿ ಆಡಳಿತ ಶೈಲಿ ಹೇಗಿರುತ್ತೋ?
ಒಟ್ಟಿನಲ್ಲಿ ಮೂವತ್ತು ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಆಡಳಿತ ಶೈಲಿ ಯಾವ ರೀತಿ ಇರಲಿದೆ ಎನ್ನುವುದು ಎಲ್ಲರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದಂತೂ ನಿಜ. ಮೋದಿ ಶಿಷ್ಯ ಗುರುವಿನ ನಂಬಿಕೆಯನ್ನು ಉಳಿಸುತ್ತಾರೋ, ಕಾದು ನೋಡಬೇಕಾಗಿದೆ...