ಸಂಜಯ್ ಸಮಾಧಿಗೆ ಸೋನಿಯಾ ಗಾಂಧಿ ನಮನ : ಏನಿದು ರಾಜಕೀಯ?
ರಾಜಕೀಯ ಮುಖಂಡರು ಇಡುವ ಒಂದೊಂದು ಹೊಸ ನಡೆಗಳು ರಾಜಕೀಯದ ಇನ್ನೊಂದು ಬಣ್ಣದ ಜೊತೆ ತಳುಕು ಹಾಕುವುದು ಸಾಮಾನ್ಯ. ಅದರಲ್ಲೂ ಚುನಾವಣೆಯ ವೇಳೆ ಕೆಲವು ಘಟನೆಗಳಿಗೆ ಇನ್ನಿಲ್ಲದ ಮಹತ್ವ ಪಡೆದುಕೊಳ್ಳುತ್ತದೆ.
ಇಷ್ಟು ದಿನ ಇಲ್ಲದ್ದು ಈಗ್ಯಾಕೆ ಎನ್ನುವ ಹಾಗೇ ಮೈದುನ ಸಂಜಯ್ ಗಾಂಧಿ ಸಮಾಧಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಮನ ಸಲ್ಲಿಸಿ ಬಂದಿದ್ದು ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. (ಬಿಜೆಪಿ ವರಿಷ್ಠರಿಗೆ ವರುಣ್ ಕಿರಿಕಿರಿ)
ಸಂಜಯ್ ಗಾಂಧಿ ಪುಣ್ಯತಿಥಿಯ ದಿನವಾದ ಜೂನ್ 23ರಂದು ಸೋನಿಯಾ ಗಾಂಧಿ, ಶಾಂತಿವನದ ಅವರ ಸಮಾಧಿಗೆ ಭೇಟಿ ನೀಡಿದ್ದರು. ಇದಲ್ಲದೇ, ಸೋದರ ಸಂಬಂಧಿಗಳಾದ ಪ್ರಿಯಾಂಕ ಮತ್ತು ರಾಹುಲ್ ಗಾಂಧಿ ಅಂದು ದೂರವಾಣಿ ಮೂಲಕ ವರುಣ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದಾರೆ.
ಇದು ವರ್ಷ ವರ್ಷ ನಡೆದುಕೊಂಡು ಬರುತ್ತಿರುವ ವಿಚಾರವಾಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಎಷ್ಟೋ ವರ್ಷದ ನಂತರ ಸೋನಿಯಾ, ಸಂಜಯ್ ಸಮಾಧಿಗೆ ಭೇಟಿ ನೀಡಿದ್ದರಿಂದ ಬರುವ ವರ್ಷ ನಡೆಯಲಿರುವ ಉತ್ತರಪ್ರದೇಶದ ಚುನಾವಣೆಗೂ ಈ ಘಟನೆಗೂ ತಳಕುಹಾಕಲಾಗುತ್ತಿದೆ.
ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ (@INCIndia) ಅಕೌಂಟಿನಿಂದ ಸಂಜಯ್ ಗಾಂಧಿಯವರನ್ನು ಸ್ಮರಿಸುತ್ತಾ ಟ್ವೀಟ್ ಮಾಡಿದೆ.
ಜೊತೆಗೆ ಕಾಂಗ್ರೆಸ್ಸಿನ ಅನೇಕ ನಾಯಕರು ಸಂಜಯ್ ಅವರನ್ನು ಸ್ಮರಿಸಿ ಟ್ವೀಟ್ ಮಾಡುವ ಮೂಲಕ ಹೊಸ ರಾಜಕೀಯ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ಅಲಹಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರ ಜೊತೆ ಸಿಟ್ಟಾಗಿದ್ದ ವರುಣ್ ಗಾಂಧಿ, ಅಮಿತ್ ಶಾ ಕರೆದಿದ್ದ ಉತ್ತರಪ್ರದೇಶ ಸಂಸದರ ಸಭೆಗೂ ಗೈರಾಗಿದ್ದರು. ವರುಣ್ ಗಾಂಧಿ ಓಲೈಕೆಗೆ ಕಾಂಗ್ರೆಸ್ ಮುಂದಾಗುತ್ತಿದೆಯಾ? ಮುಂದೆ ಓದಿ..
ಸಂಜಯ್ ಸಮಾಧಿಗೆ ಸೋನಿಯಾ ನಮನ
ವರುಣ್ ಗಾಂಧಿ ಬಿಜೆಪಿ ವಿರುದ್ದ ಸಿಟ್ಟಾಗಿರುವುದನ್ನು ಎನ್ ಕ್ಯಾಷ್ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ವರುಣ್ ಗಾಂಧಿಯನ್ನು ತಮ್ಮ ಪಕ್ಷದತ್ತ ಸೆಳೆಯಲು ಗಾಳ ಹಾಕುತ್ತಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ವರುಣ್ ಗಾಂಧಿ
ಅತ್ಯುತ್ತಮ ವಾಗ್ಮಿಯಾಗಿರುವ ವರುಣ್ ಗಾಂಧಿ ಬಹಳಷ್ಟು ಹಿಂಬಾಲಕರನ್ನು ಹೊಂದಿದ್ದಾರೆ. ಪಾದರಸದಂತೆ ಓಡಾಡುತ್ತಾ ಕ್ಷೇತ್ರದಲ್ಲಿ ಜನಮನ್ನಣೆಗಳಿಸಿರುವ ವರುಣ್ ಗಾಂಧಿ, ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ತನ್ನನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು. (ಚಿತ್ರ:ಪಿಟಿಐ)
ಮನೇಕಾ ಗಾಂಧಿ
ತಾಯಿ ಮತ್ತು ಕೇಂದ್ರ ಸಚಿವೆ ಮನೇಕಾ ಗಾಂಧಿ ಕೂಡಾ ಮಗನ ರಾಜಕೀಯ ಜೀವನದ ಬಗ್ಗೆ ಬಹಳಷ್ಟು ಆಶಾವಾದವನ್ನು ಹೊಂದಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ಹೆಸರನ್ನು ಇನ್ನೂ ಅಂತಿಮಗೊಳಿಸದಿದ್ದರೂ, ವರುಣ್ ಆಯ್ಕೆ ಬಹುತೇಕ ಕಷ್ಟ. ಇದು ಮನೇಕಾ ಮತ್ತು ವರುಣ್ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.
|
ಕಾಂಗ್ರೆಸ್ ಟ್ವೀಟ್
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಂಜಯಗಾಂಧಿಯವರಿಗೆ ಭಕ್ತಿಪೂರ್ವಕ ಶ್ರದ್ದಾಂಜಲಿ ಎಂದು ಟ್ವೀಟ್ ಮಾಡಿತ್ತು. 2013ರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ವರುಣ್ ಗಾಂಧಿಯನ್ನು ಸಹೋದರಿ ಪ್ರಿಯಾಂಕ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ವರುಣ್ ಮತ್ತು ಪ್ರಿಯಾಂಕ ನಡುವೆ ಉತ್ತಮ ಭಾಂದವ್ಯ ಮುಂದುವರಿದುಕೊಂಡು ಬಂದಿದೆ. ಹಲವು ಕಾಂಗ್ರೆಸ್ ಮುಖಂಡರು ವರುಣ್ ಗಾಂಧಿ ಜೊತೆ ಸಂಪರ್ಕದಲ್ಲಿದ್ದಾರೆ.
ಬಿಜೆಪಿಗೆ ಸಡ್ಡು ಹೊಡೆಯುವ ರಾಜಕೀಯ ದಾಳ
ಪಕ್ಷದ ವಿರುದ್ದ ಬ್ಲಾಗ್ / ಪತ್ರಿಕೆಗಳಲ್ಲಿ ಲೇಖನ ಬರೆದು ತಮ್ಮ ಸಿಟ್ಟನ್ನು ವರುಣ್ ಗಾಂಧಿ ಹೊರಹಾಕುತ್ತಿರುವ ಈ ಸಮಯದಲ್ಲಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಆ ಮೂಲಕ ನೆಹರೂ ಪರಿವಾರವನ್ನು ಒಗ್ಗೂಡಿಸಿ ಬಿಜೆಪಿಗೆ ಸಡ್ಡು ಹೊಡೆಯುವ ರಾಜಕೀಯ ದಾಳ ಹೂಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಹುಲ್ - ವರುಣ್ - ಪ್ರಿಯಾಂಕ
ವರುಣ್ ಗಾಂಧಿಯನ್ನು ಪಕ್ಷಕ್ಕೆ ಸೆಳೆದರೆ ರಾಹುಲ್ ಗಾಂಧಿಗೆ ತೊಂದರೆಯಾಗಬಹುದು ಎನ್ನುವುದನ್ನು ಅರಿತಿರುವ ಕಾಂಗ್ರೆಸ್, ರಾಹುಲ್ - ವರುಣ್ - ಪ್ರಿಯಾಂಕ ಹೊಂದಾಣಿಕೆ ಮೂಲಕ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯ ರೂಪಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ ಎನ್ನುವ ಮಾತು ಕೇಳಿಬರುತ್ತಿದೆ.