ಕಾಂಗ್ರೆಸ್ ರಾಜ್ಯಗಳ ಗರ್ಭಿಣಿ, ಬಾಣಂತಿಯರಿಗೆ ಮಾಸಿಕ 6 ಸಾವಿರ
ನವದೆಹಲಿ, ನವೆಂಬರ್ 28: ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಸಿಕ 6 ಸಾವಿರ ರೂ ಗೌರವ ಧನ ನೀಡುವಂತೆ ಯುಪಿಎ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.
ಈಗಾಗಲೇ ಇರುವ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಜನರನ್ನು ತಲುಪುತ್ತಿಲ್ಲ, ಹೀಗಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ ಪತ್ರ ಬರೆದಿದ್ದು,ಚುನಾವಣೆ ಪ್ರಣಾಳಿಕೆಯಲ್ಲಿನ ಭರವಸೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಎಲ್ಲಾ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಾಸಿಕ 6 ಸಾವಿರ ರೂ ನೀಡಬೇಕು.
ಇದರಿಂದ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ,ಚತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೇರ್, ಪುದುಚೆರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರಿಗೆ ಪತ್ರ ಬರೆಯಲಾಗಿದೆ.
ತಹಶೀಲ್ದಾರ್ ಗಾಗಿ ಪ್ರಾಣ ಒತ್ತೆ ಇಟ್ಟ ಡ್ರೈವರ್ ಪತ್ನಿ 8 ತಿಂಗಳ ಗರ್ಭಿಣಿ
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮಾತೃವಂದನಾ ಯೋಜನಾ ಆರಂಭಿಸಿದ್ದರೂ ಕೇವಲ ಶೇ.22 ಮಹಿಳೆಯರಿಗೆ ಯೋಜನೆ ತಲುಪಿದೆ.
ಆಧಾರ್ ಜೋಡಣೆ ಹಾಗೂ ಹಣ ವರ್ಗಾವಣೆಯಲ್ಲಿನ ಸಮಸ್ಯೆಯಿಂದ ಮಹಿಳೆಯರಿಗೆ ನಿರ್ಧಿಷ್ಟ ಮೊತ್ತ ತಲುಪಿಲ್ಲ. ಹೀಗಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಎಚ್ಚರಿಕೆ ವಹಿಸಿಬೇಕಿದೆ.
ಈ ಸಂಬಂಧದ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಸೂಚಿಸಿದ್ದಾರೆ.