ಸಂಸತ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಸಮಿತಿ ಬದಲಾವಣೆ!
ನವದೆಹಲಿ, ಜುಲೈ 18: ಮುಂಗಾರು ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವಾರು ಕಾಂಗ್ರೆಸ್ ಪಕ್ಷದ ಸಂಸದೀಯ ಸಮಿತಿಯನ್ನು ಬದಲಾಯಿಸಿದ್ದಾರೆ. ಅಧೀರ್ ರಂಜನ್ ಚೌಧುರಿ ಲೋಕಸಭೆ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆ.
ಕಾಂಗ್ರೆಸ್ ಸಂಸದೀಯ ಸಮಿತಿಯನ್ನು ಪುನರ್ ರಚನೆಯನ್ನು ಮಾಡಿರುವುದಾಗಿ ಸೋನಿಯಾ ಗಾಂಧಿ ಅವರ ಸಹಿಯಿರುವ ಪತ್ರವನ್ನು ಪ್ರಕಟಿಸಲಾಗಿದೆ.
ಲೋಕಸಭೆ ಸಮಿತಿಯಲ್ಲಿ ಅಧೀರ್ ರಂಜನ್ ಚೌಧರಿ, ಗೌರವ್ ಗೊಗಾಯಿ, ಮನೀಶ್ ತಿವಾರಿ ,ಕೆ ಸುರೇಶ್, ಮಾಣಿಕಂ ಠಾಗೋರ್, ಶಶಿ ತರೂರ್ ಹಾಗೂ ರವನೀರ್ ಬಿಟ್ಟು ಇದ್ದಾರೆ.
ರಾಜ್ಯಸಭೆ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮ, ಜೈರಾಮ್ ರಮೇಶ್, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್, ಪಿ ಚಿದಂಬರಂ ಹಾಗೂ ಕೆ.ಸಿ ವೇಣುಗೋಪಾಲ್ ಇದ್ದಾರೆ.
ಉಭಯ ಸದನ ಸಮಿತಿಯ ಜಂಟಿ ಸಭೆಯನ್ನು ಕರೆಯಲು ಖರ್ಗೆ ಅವರಿಗೆ ಅಧಿಕಾರ ನೀಡಲಾಗಿದೆ. ಮುಂಗಾರು ಅಧಿವೇಶನದಲ್ಲಿ ಹಣದುಬ್ಬರ, ಬೆಲೆ ಏರಿಕೆ, ಕೋವಿಡ್ 19 ನಿರ್ವಹಣೆ, ಚೀನಾ ಗಡಿ ವಿವಾದಗಳ ಬಗ್ಗೆ ದನಿಯೆತ್ತಲು ಕಾಂಗ್ರೆಸ್ ನಿರ್ಧರಿಸಿದೆ.
ತಂತ್ರಗಾರಿಕೆಯನ್ನು ರೂಪಿಸಲು ರಚಿಸಲಾಗಿರುವ ಸಮಿತಿಯ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಬುಧವಾರದಂದು ಸಭೆ ಸೇರಿ ರಫೆಲ್ ವಿವಾದ, ತನಿಖೆ ಬಗ್ಗೆ ಫ್ರಾನ್ಸ್ ದೇಶದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ತೆಗೆದುಕೊಳ್ಳುವ ನಡೆ ಬಗ್ಗೆ ಚರ್ಚಿಸಲಾಯಿತು.
''ಹಣದುಬ್ಬರ, ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲಿ ದನಿಯೆತ್ತಲು ಕಾಂಗ್ರೆಸ್ ಮುಂದಾಗಿದೆ, ಮುಂಬರುವ ಚುನಾವಣೆಯಲ್ಲಿ ಇದೇ ವಿಷಯಗಳನ್ನು ಚುನಾವಣೆ ವಿಷಯವಾಗಿ ಮುಂದಿಡಲು ಪಕ್ಷ ನಿರ್ಧರಿಸಿದೆ'' ಎಂದು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕಸಭಾ ಅಧಿವೇಶನಕ್ಕೂ ಮುನ್ನ ಸೋನಿಯಾ ಗಾಂಧಿ ಚಾಣಾಕ್ಷ ನಡೆ
ಪಕ್ಷದ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಧ್ವನಿ ಎತ್ತಿದ್ದ G-23 (ಸೋನಿಯಾ ಗಾಂಧಿಗೆ ಪತ್ರ ಬರೆದು ಸಹಿ ಹಾಕಿದ್ದ 23 ಮುಖಂಡರು) ನಾಯಕರೊಬ್ಬರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ, ಈ ಮುಖಂಡರನ್ನು ಒಗ್ಗೂಡಿಸುವ ಕೆಲಸಕ್ಕೆ ಸೋನಿಯಾ ಮುಂದಾಗಿದ್ದಾರೆ.
ಲೋಕಸಭೆಯ ಮುಂಗಾರು ಅಧಿವೇಶನ ಇದೇ ಜುಲೈ 19ರಿಂದ ಆರಂಭವಾಗಲಿದೆ. ಅಧಿಕೃತ ವಿರೋಧ ಪಕ್ಷದ ನಾಯಕನ ಪಟ್ಟ ಸಿಗಲು ಕಾಂಗ್ರೆಸ್ಸಿಗೆ ಸಂಖ್ಯಾಬಲದ ಕೊರತೆಯಿದೆ. ಆದರೂ, ವಿರೋಧ ಪಕ್ಷದ ಸಾಲಿನಲ್ಲಿ ದೊಡ್ಡ ಪಕ್ಷವಾಗಿರುವುದರಿಂದ, ಈ ಹುದ್ದೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಾಲ್ವರ ಹೆಸರನ್ನು ಸೋನಿಯಾ ಗಾಂಧಿ ಪರಿಶೀಲಿಸುತ್ತಿದ್ದಾರೆ. (ಐಎಎನ್ಎಸ್)