ಸೋನಿಯಾ, ರಾಹುಲ್ರಿಂದ 100 ಕೋಟಿ ರೂ. ತೆರಿಗೆ ವಂಚನೆ?
ನವದೆಹಲಿ, ಜನವರಿ 9: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು 2011-12ರಲ್ಲಿ ತಮ್ಮ ಘೋಷಿತ ಹಾಗೂ ಮೌಲ್ಯನಿರ್ಣಯ ಮಾಡಿದ ಆದಾಯಕ್ಕಿಂತಲೂ ತಲಾ 155.41 ಮತ್ತು 154.96 ಕೋಟಿ ರೂ. ಆದಾಯಕ್ಕೆ ತೆರಿಗೆ ನೀಡದೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ವರದಿ ಹೇಳಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ ಸಂಬಂಧಿಸಿದಂತೆ ಆದಾಯದ ಲೆಕ್ಕಪತ್ರಗಳನ್ನು ಮರುಮೌಲ್ಯಮಾಪನ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆಯಾಗಿದೆ ಎಂದು ತಿಳಿಸಿದೆ.
2011-12ನೇ ಸಾಲಿನಲ್ಲಿ ರಾಹುಲ್ ಗಾಂಧಿ ತಮಗೆ 68.12 ಲಕ್ಷ ಆದಾಯ ಇರುವುದಾಗಿ ಘೋಷಿಸಿ ಆದಾಯ ತೆರಿಗೆ ಮರುಪಾವತಿ ಮಾಡಿದ್ದರು. ಮರುಮೌಲ್ಯಮಾಪನ ಆದೇಶದ ಅನುಸಾರ ಪರಿಶೀಲನೆ ಮಾಡಿದಾಗ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಆದಾಯ ಕೂಡ 48.93 ಕೋಟಿ ರೂ. ಇರುವುದು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಐಟಿಯ ಮರುಮೌಲ್ಯಮಾಪನ ಆದೇಶದ ಪ್ರಕಾರ ಗಾಂಧಿ ಕುಟುಂಬವು 300 ಕೋಟಿ ರೂ. ಆದಾಯಕ್ಕೆ ತೆರಿಗೆ ವಂಚನೆ ಮಾಡಿದೆ. ಅವರ ತೆರಿಗೆ ಬಾಕಿಯು ಸುಮಾರು 100 ಕೋಟಿ ರೂ. ಇದೆ.
2011-12ನೇ ಸಾಲಿನ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಆದಾಯ ತೆರಿಗೆಯ ಮರುಮೌಲ್ಯಮಾಪನ ನಡೆಸಿದ ಬಳಿಕ ಅವರ ವಿರುದ್ಧ ಡಿ.31ರಂದು ಆದೇಶ ಹೊರಡಿಸಲಾಗಿದ್ದು, ಅವರಿಗೆ ಆದೇಶದ ಪ್ರತಿಗಳನ್ನು ತಲುಪಿಸಲಾಗಿದೆ.
ಐಟಿ ಉರುಳಿನಿಂದ ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ನೆಮ್ಮದಿ
ಆದರೆ, ಐಟಿ ಇಲಾಖೆಯ ಕ್ರಮಗಳ ವಾಯ್ದೆಯನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿರುವುದರಿಂದ ಇವುಗಳನ್ನು ಅಮಾನತ್ತಿನಲ್ಲಿ ಇರಿಸಲಾಗಿತ್ತು.
ಕಾಂಗ್ರೆಸ್ ನಾಯಕರಿಂದ ಅರ್ಜಿ
ತಮ್ಮ ತೆರಿಗೆ ಮರು ಮೌಲ್ಯಮಾಪನವನ್ನು ಆರಂಭಿಸುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋನಿಯಾ ಗಾಂಧಿ ಅವರ ಪರವಾಗಿ ಹಾಜರಾಗಿದ್ದ ಮಾಜಿ ಸಚಿವ ಪಿ. ಚಿದಂಬರಂ, ಸೋನಿಯಾ ಅವರ ಆದಾಯದ ಮರುಪರಿಶೀಲನೆ ನಡೆಸಿದ ಬಳಿಕ 44 ಕೋಟಿ ರೂ.ಅನ್ನು ತಪ್ಪಾಗಿ ತೆರಿಗೆ ಬಾಕಿಯನ್ನು ಹೊರಿಸಲಾಗಿದೆ ಎಂದು ವಾದಿಸಿದ್ದರು.
ತಮ್ಮ ಆದಾಯ ತೆರಿಗೆ ಪಾವತಿ ಸಂದರ್ಭದಲ್ಲಿ ಎಜೆಎಲ್ ಸಂಬಂಧಿಸಿದ ಆದಾಯವನ್ನು ಘೋಷಿಸದೆ ಇದ್ದ ಕಾರಣಕ್ಕೆ 141 ಕೋಟಿ ರೂ. ತೆರಿಗೆ ವಂಚನೆ ಮಾಡಲಾಗಿದೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ರಾಹುಲ್ ಗಾಂಧಿ ಕೂಡ ಇದೇ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಚಿದಂಬರಂ ಹೇಳಿದ್ದರು.
ನ್ಯಾಷನಲ್ ಹೆರಾಲ್ಡ್: ಸೋನಿಯಾ, ರಾಹುಲ್ ವಿಚಾರಣೆಗೆ ಕೋರ್ಟ್ ಒಪ್ಪಿಗೆ
ಐಟಿ ಇಲಾಖೆಗೆ ಸಾಮಾನ್ಯ ಜ್ಞಾನ ಇಲ್ಲ!
ನ್ಯಾಯಮೂರ್ತಿ ಎ ಸಿಕ್ರಿ ನೇತೃತ್ವದ ನ್ಯಾಯಪೀಠದ ಮುಂದೆ, ತೆರಿಗೆ ಮೌಲ್ಯಮಾಪನ ಮರು ಆರಂಭಿಸುವ ನಿರ್ಧಾರವನ್ನು ಪ್ರಶ್ನಿಸಿದ ಚಿದಂಬರಂ, ಸೋನಿಯಾ ಗಾಂಧಿ ಅವರು ಲಾಭ ರಹಿತ ಸಂಸ್ಥೆ 'ಯಂಗ್ ಇಂಡಿಯನ್'ಗೆ 1,900 ಷೇರುಗಳನ್ನು ಪಡೆಯಲು 141 ಕೋಟಿ ರೂ. ವಂಚನೆ ಮಾಡಿದ್ದರು ಎಂದು ಐಟಿ ಇಲಾಖೆ ಸಾಮಾನ್ಯ ಜ್ಞಾನ ಇಲ್ಲದೆ ಘೋಷಿಸಿದೆ ಎಂಬುದಾಗಿ ವಾದಿಸಿದರು.
ಯಂಗ್ ಇಂಡಿಯನ್ನ ಏಕೈಕ ಆಸ್ತಿಯೆಂದರೆ 90 ಕೋಟಿ ರೂ. ಸಾಲ. ಆದರೆ, ಐಟಿ ಇಲಾಖೆ ತಪ್ಪಾಗಿ 407 ಕೋಟಿ ರೂ. ಆದಾಯ ಎಂದಿದೆ. ಅಲ್ಲದೆ, ಆದಾಯ ತೆರಿಗೆ ಮರುಮೌಲ್ಯಮಾಪನಕ್ಕೆ ಸೀಮಿತ ವಾಯ್ದೆಯೊಳಗೆ ಯಾವುದೇ ಸೂಕ್ತ ನೋಟಿಸ್ ನೀಡದೆ ಐಟಿ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಆರೋಪಿಸಿದರು.
ಐಟಿ ಇಲಾಖೆ ನೋಟಿಸ್: ಸೋನಿಯಾ, ರಾಹುಲ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಸುತ್ತೋಲೆ ಪರಿಶೀಲನೆಯಲ್ಲಿದೆ
ಸಿಬಿಡಿಟಿ ಡಿ.31ರಂದು ಸುತ್ತೋಲೆ ಹೊರಡಿಸಿದ್ದು, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56 (2) (Vii) (a), ಒಂದು ನಿರ್ದಿಷ್ಟ ಕಂಪೆನಿಯು ಹೊಸದಾಗಿ ಷೇರುಗಳನ್ನು ವಿತರಣೆ ಮಾಡಿದ ಸಂದರ್ಭದಲ್ಲಿ ಷೇರುಗಳನ್ನು ಪಡೆದಿರುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದಿತ್ತು. ಆದರೆ, ಈ ಸುತ್ತೋಲೆಯನ್ನು ಜನವರಿ 4ರಂದು ಹಿಂದಕ್ಕೆ ಪಡೆಯಲಾಗಿತ್ತು. ಈ ವಿಚಾರವನ್ನು ಮಂಡಳಿ ಇನ್ನೂ ಪರಿಶೀಲನೆ ನಡೆಸುತ್ತಿದೆ. ಈ ವಿಚಾರ ಇನ್ನೂ ಬಗೆಹರಿಯದ ಸನ್ನಿವೇಶದಲ್ಲಿ ಐಟಿ ಇಲಾಖೆ ಹೇಗೆ ತೆರಿಗೆ ಬಾಕಿ ಆದೇಶವನ್ನು ಹೊರಡಿಸಲು ಸಾಧ್ಯ ಎಂದು ಚಿದಂಬರಂ ಪ್ರಶ್ನಿಸಿದರು.
ತುಷಾರ್ ಮೆಹ್ತಾ ಆಕ್ಷೇಪ
ಚಿದಂಬರಂ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದಲ್ಲಿ ಸುತ್ತೋಲೆ ಯಾವುದೇ ಮಹತ್ವ ಪಡೆಯುವುದಿಲ್ಲ. ಅಲ್ಲದೆ, ಮಂಡಳಿ ಅದನ್ನು ಪರಿಶೀಲನೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿಯೂ ಮೌಲ್ಯ ಮಾಪನ ಅಧಿಕಾರಿ ಆದೇಶ ಹೊರಡಿಸಲು ಬದ್ಧನಾಗಿರಬೇಕಾಗುತ್ತದೆ ಎಂದು ಹೇಳಿದರು.
ಬಳಿಕ ನ್ಯಾಯಪೀಠ, ಸುತ್ತೋಲೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಹಾಗೂ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಗಾಂಧಿ ಕುಟುಂಬಕ್ಕೆ ಸೂಚಿಸಿತು. ಅದಾದ ಬಳಿಕ ಒಂದು ವಾರದೊಳಗೆ ಅದಕ್ಕೆ ಪ್ರತಿಯಾಗಿ ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ಐಟಿ ಇಲಾಖೆಗೆ ನಿರ್ದೇಶಿಸಿತು. ಬಳಿಕ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.
ವಜಾಗೊಳಿಸಿದ್ದ ಹೈಕೋರ್ಟ್
ಇದಕ್ಕೂ ಮುನ್ನ ಸೋನಿಯಾ ಹಾಗೂ ರಾಹುಲ್ ಗಾಂಧಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಅರ್ಜಿಗಳನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್, ಯಂಗ್ ಇಂಡಿಯಾದಲ್ಲಿನ ಷೇರುಗಳ ಖರೀದಿ ಮಾಹಿತಿಗಳನ್ನು ಬಹಿರಂಗಪಡಿಸಬೇಕಾಗಿದ್ದು ಪ್ರಾಥಮಿಕ ಕರ್ತವ್ಯವಾಗಿತ್ತು ಎಂದು ಹೇಳಿತ್ತು.