'ರಾಜಧರ್ಮ' ಪಾಲಿಸಿ: ಮೋದಿಗೆ ಸೋನಿಯಾ ಗಾಂಧಿ ಪತ್ರ
ನವದೆಹಲಿ, ಫೆಬ್ರವರಿ 22: ತೈಲ ಬೆಲೆ ಮೇಲೆ ಅಧಿಕ ಅಬಕಾರಿ ಸುಂಕ ವಿಧಿಸುವ ಮೂಲಕ ಜನಸಾಮಾನ್ಯರ ಸಂಕಷ್ಟ ಹಾಗೂ ಬೇಗುದಿಯಿಂದ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ.
ಪೆಟ್ರೋಲ್ ಬೆಲೆ ಸಾರ್ವಕಾಲಿಕ ಅಧಿಕ ಬೆಲೆ 97 ರೂ.ಗೆ ತಲುಪಿದ ಸಂದರ್ಭದಲ್ಲಿ ಅವರು, ಪ್ರತಿದಿನವೂ ಹೆಚ್ಚುತ್ತಿರುವ ತೈಲ ಬೆಲೆ ಜನಸಾಮಾನ್ಯರಿಗೆ ಮಾರಕವಾಗಿದೆ. ಅಬಕಾರಿ ಸುಂಕದಲ್ಲಿ ಕಡಿತ ಮಾಡುವ ಮೂಲಕ ರಾಜಧರ್ಮ ಪಾಲಿಸಿ ಎಂದು ಸಲಹೆ ನೀಡಿದ್ದಾರೆ.
'ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ತೈಲ ಬೆಲೆಯಲ್ಲಿ ಯಾಕೆ ಇಷ್ಟು ಏರಿಕೆಯಾಗುತ್ತಿದೆ ಎನ್ನುವುದು ನಾಗರಿಕರನ್ನು ದಿಗ್ಭ್ರಮೆಗೊಳಿಸಿದೆ. ವಾಸ್ತವವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂತಲೂ ಕಚ್ಚಾ ತೈಲದ ಬೆಲೆ ಈಗ ಅರ್ಧದಷ್ಟಿದೆ' ಎಂದು ಸೋನಿಯಾ, ಆಗಿನ ಬೆಲೆ ಏರಿಕೆ ಹಾಗೂ ಈಗಿನ ಸ್ಥಿತಿಯನ್ನು ಹೋಲಿಸಿದ್ದಾರೆ. ಮುಂದೆ ಓದಿ.
ಜನರಿಗೆ ಮತ್ತೊಂದು ಬರೆ
ತೈಲ ಬೆಲೆ ಏರಿಕೆಯು ರೈತರು, ಬಡಜನರು ಮತ್ತು ಮಧ್ಯಮವರ್ಗ ಹಾಗೂ ವೇತನ ವರ್ಗದವರಿಗೆ ಆಘಾತ ನೀಡುತ್ತಿದೆ. ಅವರು ಈಗಾಗಲೇ ಅಭೂತಪೂರ್ವ ಆರ್ಥಿಕ ಹಿನ್ನಡೆ, ವ್ಯಾಪಕವಾಗಿರುವ ನಿರುದ್ಯೋಗ, ವೇತನ ಕಡಿತ ಮತ್ತು ಉದ್ಯೋಗ ನಷ್ಟ, ಅಧಿಕ ಬೆಲೆ ಹಾಗೂ ಆದಾಯದ ಕುಸಿತದಂತಹ ವಿಪತ್ತುಗಳ ನಡುವೆ ಅವರು ಹೋರಾಡುತ್ತಿದ್ದಾರೆ ಎಂದು ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲಿಯೇ ಈ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ: ಕಾರಣ ಏನು ಗೊತ್ತೇ?
ಇಳಿಕೆಗೆ ನಕಾರ ದೊಡ್ಡ ಕ್ರೌರ್ಯ
ತೈಲ ಬೆಲೆ ಐತಿಹಾಸಿಕ ಮತ್ತು ಸುಸ್ಥಿರವಲ್ಲದ ಏರಿಕೆ ಕಂಡಿದೆ. ದೇಶದ ಅನೇಕ ಭಾಗಗಳಲ್ಲಿ ಪೆಟ್ರೋಲ್ ಬೆಲೆ 100 ರೂ ಕೂಡ ದಾಟಿದೆ. ಜತೆಗೆ ಡೀಸೆಲ್ ದರ ಹೆಚ್ಚಳವೂ ಲಕ್ಷಾಂತರ ರೈತರ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರ್ಷ ಬ್ಯಾರೆಲ್ಗೆ 20 ಡಾಲರ್ಗೆ ಜಾಗತಿಕ ಕಚ್ಚಾ ತೈಲದ ದರ ಕುಸಿದಿದ್ದರೂ ಸರ್ಕಾರವು ತೈಲ ಬೆಲೆ ಇಳಿಸಲು ನಿರಾಕರಿಸುತ್ತಿರುವುದು ದೊಡ್ಡ ಕ್ರೌರ್ಯ ಎಂದು ಕಿಡಿಕಾರಿದ್ದಾರೆ.
Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?
21 ಲಕ್ಷ ಕೋಟಿ ಆದಾಯ
ಎನ್ಡಿಎ ಸರ್ಕಾರವು ಕಳೆದ ಆರೂವರೆ ವರ್ಷಗಳಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 820% ಮತ್ತು ಪೆಟ್ರೋಲ್ ಮೇಲಿನ ಸುಂಕವನ್ನು 258%ರಷ್ಟು ಹೆಚ್ಚಿಸಿದೆ. ಈ ಅಬಕಾರಿ ಸುಂಕದಿಂದ ಸಂಗ್ರಹಿಸಿದ ಆದಾಯವೇ 21 ಲಕ್ಷ ಕೋಟಿ ರೂ ಇದೆ. ಆದರೆ ಇದನ್ನು ಈಗಲೂ ಜನತೆಗೆ ಮಾತ್ರ ವರ್ಗಾಯಿಸಿಲ್ಲ ಎಂದು ಆರೋಪಿಸಿದ್ದಾರೆ.
ಸುಂಕ ಹೆಚ್ಚಳಕ್ಕೆ ಉತ್ಸಾಹ
ಜನಸಾಮಾನ್ಯರ ಬವಣೆಗಳನ್ನು ಗಮನಿಸಿ ಬೆಲೆ ಏರಿಕೆಯ ವಿಪತ್ತಿನಿಂದ ಅವರನ್ನು ಪಾರುಮಾಡುವ ಬದಲು ನಿಮ್ಮ ಸರ್ಕಾರ ಅಕಾರಣವಾಗಿ ಉತ್ಸಾಹದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಿದೆ. ಪೆಟ್ರೋಲ್ ಮೇಲೆ 33 ರೂ ಹಾಗೂ ಡೀಸೆಲ್ ಮೇಲೆ 32 ರೂ ಸುಂಕವಿದೆ. ಇದು ಈ ತೈಲಗಳ ಮೂಲ ಬೆಲೆಗಿಂತಲೂ ಅಧಿಕವಾಗಿದೆ.
ಇದು ಸುಲಿಗೆಯಲ್ಲದೆ ಬೇರೇನೂ ಅಲ್ಲ
ಇದು ಸರ್ಕಾರ ಆರ್ಥಿಕ ನಿರ್ವಹಣೆಯ ಲೋಪವನ್ನು ಮುಚ್ಚಿಹಾಕಲು ಮಾಡುತ್ತಿರುವ ಸುಲಿಗೆಯಲ್ಲದೆ ಬೇರೇನೂ ಅಲ್ಲ. ಪ್ರಮುಖ ವಿರೋಧಪಕ್ಷವಾಗಿ, ನೀವು ರಾಜಧರ್ಮ ಪಾಲಿಸುವಂತೆ ಮತ್ತು ಅಬಕಾರಿ ಸುಂಕವನ್ನು ಭಾಗಶಃ ಕಡಿತಗೊಳಿಸುವ ಮೂಲಕ ತೈಲ ಬೆಲೆ ಇಳಿಸುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.