ಬಾಲಿಶ ಚರ್ಚೆ ಬಿಟ್ಟು ಕೋವಿಡ್ ವಿರುದ್ಧದ ಕಾರ್ಯಕ್ಕೆ ಗಮನ ಹರಿಸಿ: ಸೋನಿಯಾ ಗುಡುಗು
ನವದೆಹಲಿ, ಏಪ್ರಿಲ್ 17: ದೇಶದಲ್ಲಿ ಕೋವಿಡ್ ಪಿಡುಗಿನ ಎರಡನೆಯ ಅಲೆ ಭಾರಿ ಪ್ರಮಾಣದಲ್ಲಿ ಸಂಕಷ್ಟ ತಂದೊಡ್ಡಿರುವುದರಿಂದ ಈ ಅಪಾಯವನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೈದ್ಯಕೀಯ ಮೂಲ ಸೌಕರ್ಯದ ಸಮಸ್ಯೆಗಳು ಹಾಗೂ ಕೋವಿಡ್ ಲಸಿಕೆಯ ಕೊರತೆಯನ್ನು ಅವರು ಬೊಟ್ಟುಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ಆಡಳಿತ ರಾಜ್ಯಗಳ ಸಿಎಂಗಳೊಂದಿಗೆ ಸೋನಿಯಾ ಗಾಂಧಿ ಸಭೆ
'ಕಾಂಗ್ರೆಸ್ ಮುಖ್ಯಮಂತ್ರಿಗಳ ಜತೆಗಿನ ಸಭೆ ಬಳಿಕ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ನಮ್ಮ ಮುಖ್ಯಮಂತ್ರಿಗಳು ಪ್ರಧಾನಿ ಜತೆ ಮಾತನಾಡಿದ್ದಾರೆ ಮತ್ತು ಸಂಬಂಧಿತ ಸಚಿವರಿಗೆ ಕಾಲದಿಂದ ಕಾಲಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಅವರಲ್ಲಿ ಕೆಲವರ ಬಳಿ ಕೆಲವೇ ದಿನಗಳಿಗೆ ಸಾಲುವಷ್ಟು ಲಸಿಕೆ ಉಳಿದಿವೆ. ವೆಂಟಿಲೇಟರ್ ಅಥವಾ ಆಕ್ಸಿಜನ್ ಲಭ್ಯವಿಲ್ಲ. ಆದರೆ ಸರ್ಕಾರದ ಕಡೆಯಿಂದ ಯಾವ ಸ್ಪಂದನೆಯೂ ಇಲ್ಲ. ಇದಕ್ಕೆ ವಿರುದ್ಧವಾಗಿ ಇತರೆ ರಾಜ್ಯಗಳಿಗೆ ಸಾಕಷ್ಟು ಪರಿಹಾರ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
'ವಿರೋಧಪಕ್ಷಗಳ ರಚನಾತ್ಮಕ ಸಲಹೆಗಳನ್ನು ಆಲಿಸುವ ಬದಲು, ಸಲಹೆ ನೀಡುವ ವಿರೋಧಪಕ್ಷಗಳ ನಾಯಕರ ಮೇಲೆ ವಾಗ್ದಾಳಿ ನಡೆಸುವ ಕೆಲಸಕ್ಕೆ ಕೇಂದ್ರ ಸಚಿವರು ಆದ್ಯತೆ ನೀಡುತ್ತಿದ್ದಾರೆ. ಅವರು 'ನಾವು ವರ್ಸಸ್ ನೀನು' ಎಂಬ ಬಾಲಿಶ ಮತ್ತು ನಿಜಕ್ಕೂ ಅನಗತ್ಯವಾದ ಚರ್ಚೆಯಲ್ಲಿ ಮುಳುಗಿದ್ದಾರೆ' ಎಂದು ಸೋನಿಯಾ ಕಿಡಿಕಾರಿದ್ದಾರೆ.
ಕರ್ಫ್ಯೂ, ಪ್ರಯಾಣ ನಿರ್ಬಂಧಗಳು, ಲಾಕ್ಡೌನ್ಗಳು ಮುಂತಾದ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ಅರ್ಹ ಬಡ ಪ್ರಜೆಗೂ ಮಾಸಿಕ 6,000 ರೂಪಾಯಿ ಆದಾಯದ ನೆರವು ಒದಗಿಸಬೇಕು. ಮತ್ತೆ ತಮ್ಮ ರಾಜ್ಯಗಳತ್ತ ಮರಳುತ್ತಿರುವ ವಲಸೆ ಕಾರ್ಮಿಕರ ಸುರಕ್ಷತೆ ಹಾಗೂ ಆಸರೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿರಕ್ಷಣೆಯ ಮಾನದಂಡದ ವಯಸ್ಸನ್ನು 25ಕ್ಕೆ ಇಳಿಸಬೇಕು. ಎಲ್ಲ ವಯೋಮಾನದವರು, ಯುವಜನರು ಕೂಡ ಆಸ್ತಮಾ, ಅಂಜಿನಾ, ಮಧುಮೇಹ, ಮೂತ್ರಕೋಶ, ಪಿತ್ತಜನಕಾಂಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದ ಅವರು, ಜೀವ ಉಳಿಸಲು ಅತಿ ಮುಖ್ಯವಾದ ರೆಮ್ಡೆಸಿವಿರ್ನಂತಹ ಔಷಧಗಳು ಮತ್ತು ವೈದ್ಯಕೀಯ ಆಕ್ಸಿಜನ್ ಮುಂತಾದ ಮೂಲ ಸಲಕರಣೆಗಳನ್ನು ಜಿಎಸ್ಟಿ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.