ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ
ನವದೆಹಲಿ, ಜನವರಿ 22: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಸೋರಿಕೆಯಾದ ವಾಟ್ಸಾಪ್ ಚಾಟ್ನ ಮಾಹಿತಿಗಳ ಕುರಿತು ಕೇಂದ್ರ ಸರ್ಕಾರ ಮೌನವಹಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ವ್ಯಾಪಕವಾಗಿ ರಾಜಿ ಮಾಡಿಕೊಳ್ಳಲಾಗಿದೆ. ಇತ್ತೀಚಿನ ಬೆಳವಣಿಗೆಗಳು ಆಘಾತಕಾರಿಯಾಗಿವೆ ಎಂದು ಹೇಳಿದ್ದಾರೆ.
ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್
'ರಾಷ್ಟ್ರೀಯ ಭದ್ರತೆಯಲ್ಲಿ ಹೇಗೆ ವ್ಯಾಪಕವಾಗಿ ರಾಜಿಮಾಡಿಕೊಳ್ಳಲಾಗಿದೆ ಎನ್ನುವ ಇತ್ತೀಚಿನ ವರದಿಗಳು ದಿಗಿಲು ಹುಟ್ಟಿಸುತ್ತವೆ. ಕೆಲವು ದಿನಗಳ ಹಿಂದೆ ಆಂಟನಿ ಅವರು (ಮಾಜಿ ರಕ್ಷಣಾ ಸಚಿವ), ಸೇನಾ ಕಾರ್ಯಾಚರಣೆಯ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹ ಎಂದು ಹೇಳಿದ್ದರು. ಆದರೂ ಕೇಂದ್ರ ಸರ್ಕಾರದ ಕಡೆಯಿಂದ ಮೌನವೇ ಕಂಡುಬರುತ್ತಿರುವುದು, ಇದು ಕಿವುಡುತನ ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ' ಎಂದು ಸೋನಿಯಾ ಟೀಕಿಸಿದ್ದಾರೆ.
'ಇತರರಿಗೆ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಗ್ಗೆ ಪ್ರಮಾಣಪತ್ರ ನೀಡುತ್ತಿದ್ದವರ ಮುಖ ಸಂಪೂರ್ಣವಾಗು ಬಹಿರಂಗವಾಗಿದೆ' ಎಂದು ಅರ್ನಬ್ ವಿರುದ್ಧ ಕಿಡಿಕಾರಿದ್ದಾರೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸಲು ಸಂಸತ್ನಲ್ಲಿ ಅವಕಾಶ ಸಿಗಬೇಕು ಎಂದು ಬಯಸಿದ್ದಾರೆ.
ವಿಶ್ವಾಸಾಘಾತದ ಆರೋಪ; ಅರ್ನಬ್ ಗೋಸ್ವಾಮಿ ವಿರುದ್ಧ NSUI ದೂರು
'ಇನ್ನು ಒಂದು ವಾರದ ಸಮಯದಲ್ಲಿ ಸಂಸತ್ತು ಮತ್ತೆ ಸೇರಲಿದೆ. ಅದು ಬಜೆಟ್ ಅಧಿವೇಶನ ನಿಜ. ಆದರೆ ಸಾರ್ವಜನಿಕ ಕಳವಳಕ್ಕೆ ಕಾರಣವಾದ ಅನೇಕ ಮಹತ್ವದ ವಿಚಾರಗಳು ಚರ್ಚೆಗೆ ಒಳಗಾಗಬೇಕಿವೆ. ಇದಕ್ಕೆ ಸರ್ಕಾರ ಒಪ್ಪಲಿ, ಇಲ್ಲದಿರಲಿ ಅದನ್ನು ನೋಡಬೇಕು' ಎಂದಿದ್ದಾರೆ.