ರಾಷ್ಟ್ರಪತಿ ಕೋವಿಂದ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳು
ಬೆಂಗಳೂರು, ಜುಲೈ 20 : ಭಾರತದ ಅತ್ಯುನ್ನತ ಹುದ್ದೆಯಾಗಿರುವ ರಾಷ್ಟ್ರಪತಿ ಪಟ್ಟವನ್ನು ಅಲಂಕರಿಸಿರುವ ರಾಮನಾಥ್ ಕೋವಿಂದ್ (71) ಅವರು ಭಾರತ ಗಣರಾಜ್ಯದ ಪ್ರಥಮ ಪ್ರಜೆಯಾಗಿ ಮಾತ್ರವಲ್ಲ, ಭಾರತದ ದಂಡನಾಯಕರಾಗಿ ಆಯ್ಕೆಯಾಗಿದ್ದಾರೆ.
ಕೆ ಆರ್ ನಾರಾಯಣನ್ ಅವರ ನಂತರ ರಾಷ್ಟ್ರಪತಿಯಾಗಿರುವ ಎರಡನೇ ದಲಿತ ನಾಯಕ ರಾಮನಾಥ್ ಕೋವಿಂದ್ ಅವರು. ಬಿಜೆಪಿಯಲ್ಲಿ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರೂ, ಅವರು ಅಪ್ಪಟ ರೈತನ ಮಗ.
ಉತ್ತರಪ್ರದೇಶದ ಕಾನ್ಪುರ ದೆಹತ್ ನಲ್ಲಿ 1945ರ ಅಕ್ಟೋಬರ್ 1ರಂದು ಜನಿಸಿದ ರಾಮನಾಥ್ ಕೋವಿಂದ್ ಅವರು, ವಕೀಲನಾಗಿ, ಬಿಜೆಪಿ ಸದಸ್ಯನಾಗಿ, ಬಿಜೆಪಿಯ ದಲಿತ ಮೋರ್ಚಾದ ಅಧ್ಯಕ್ಷರಾಗಿ, ರಾಜ್ಯಸಭೆ ಸದಸ್ಯರಾಗಿ, ಬಿಹಾರದ ರಾಜ್ಯಪಾಲರಾಗಿ ಹಲವಾರು ಜವಾಬ್ದಾರಿಗಳನ್ನು ವಿವಾದಗಳಿಗೆ ಆಸ್ಪದ ಕೊಡದಂತೆ ನಿಭಾಯಿಸಿದ್ದಾರೆ.
ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ
14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ, ಸಜ್ಜನ ರಾಜಕಾರಣಿ ಎಂದೇ ಜನಜನಿತರಾಗಿರುವ ರಾಮನಾಥ್ ಕೋವಿಂದ್ ಅವರ ಬಗ್ಗೆ ಸಾಮಾನ್ಯವಾಗಿ ಗಮನಕ್ಕೆ ಬಾರದ ಹಲವಾರು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿನಿಧಿ
ಉತ್ತರ ಪ್ರದೇಶದಲ್ಲಿ ಬಿಜೆಪಿಯ ದಲಿತ ಮೋರ್ಚಾದ ಅಧ್ಯಕ್ಷರಾಗಿ 1998ರಿಂದ 2002ರವರೆಗೆ ಅಧಿಕಾರ ವಹಿಸಿಕೊಂಡಿದ್ದ ರಾಮನಾಥ್ ಕೋವಿಂದ್ ಅವರು, ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿದ್ದರು. ಅವರು ಐಐಎಂ-ಕೋಲ್ಕತಾದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿನಿಧಿಯೂ ಆಗಿದ್ದರು.
ಉತ್ತರಪ್ರದೇಶಕ್ಕೆ ಸೇರಿದ ಪ್ರಥಮ ರಾಷ್ಟ್ರಪತಿ
ರಾಮನಾಥ್ ಕೋವಿಂದ್ ಅವರು ಉತ್ತರ ಪ್ರದೇಶಕ್ಕೆ ಸೇರಿದ ಪ್ರಥಮ ರಾಷ್ಟ್ರಪತಿಯಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯ ಇಲ್ಲಿಯವರೆಗೆ 9 ಪ್ರಧಾನಿಗಳನ್ನು ದೇಶಕ್ಕೆ ನೀಡಿದ್ದರೂ ಒಬ್ಬೇಒಬ್ಬ ರಾಷ್ಟ್ರಪತಿಯನ್ನು ನೀಡಿರಲಿಲ್ಲ. ಈಗ ಆ ಕನಸು ಕೂಡ ನನಸಾಗಿದೆ.
ಐಎಎಸ್ ಪಾಸಾದರೂ ಅಧಿಕಾರಿಯಾಗಲಿಲ್ಲ
ರಾಮನಾಥ್ ಅವರು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ಆದರೆ, ಐಎಎಸ್ ಆಗುವ ಬದಲು ಮೈತ್ರಿ ಸೇವೆಗಾಗಿ ಆಯ್ಕೆಯಾಗಿದ್ದ ಕಾರಣ ಐಎಎಸ್ ಆಗುವುದನ್ನು ಕೈಬಿಟ್ಟರು. ನಂತರ ಕಾನೂನು ಓದಿ ವಕೀಲರಾದರು. ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡಿದರು
ಮೋರಾರ್ಜಿ ದೇಸಾಯಿ ಕಾರ್ಯದರ್ಶಿ
1977ರಲ್ಲಿ ರಾಮನಾಥ್ ಕೋವಿಂದ್ ಅವರು ಭಾರತೀಯ ಜನತಾ ಪಕ್ಷವನ್ನು ಸೇರುವ ಮೊದಲು ಅಂದಿನ ಪ್ರಧಾನಿ ಮೋರಾರ್ಜಿ ದೇಸಾಯಿ (ಭಾರತದ ನಾಲ್ಕನೇ ಪ್ರಧಾನಿ - 1977ರಿಂದ 1979ರವರೆಗೆ) ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ
ಉತ್ತರ ಪ್ರದೇಶದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮನಾಥ್ ಕೋವಿಂದ್ ಅವರು, 2002ರ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು ವಿಶ್ವಸಂಸ್ಥೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು.
ಬೀದಿ ಪಾಲಾಗುತ್ತವಾ ಲಿಲ್ಲಿ, ಕಾಳು, ಕಿಶ್ಮಿಶ್ ಮತ್ತು ಕುಟ್ಟಿ
ಎಲ್ಲಕ್ಕಿಂತ ಆಸಕ್ತಿದಾಯಕ ಸಂಗತಿಯೆಂದರೆ, ಇಡೀ ರಾಮನಾಥ್ ಕುಟುಂಬ ಶ್ವಾನಪ್ರೇಮಿಯಾಗಿರುವುದು. ಲಿಲ್ಲಿ, ಕಾಳು, ಕಿಶ್ಮಿಶ್ ಮತ್ತು ಕುಟ್ಟಿ ಎಂಬ ಬೀದಿನಾಯಿಗಳು ಅವರ ಮನೆಯ ಸುತ್ತಲೇ ಇರುತ್ತವೆ. ಅವುಗಳಿಗೆ ದಿನನಿತ್ಯ ಆಹಾರ ಹಾಕುವುದು ಮಾತ್ರವಲ್ಲ ಅವುಗಳಿಗೆ ಅನಾರೋಗ್ಯ ಕಾಡಿದಾಗ ವೈದ್ಯರ ಬಳಿಯೂ ಅವರು ಕರೆದುಕೊಂಡು ಹೋಗಿರುವ ನಿದರ್ಶನಗಳಿವೆ. ಈಗ ನಾಯಿಗಳು ಬೀದಿ ಪಾಲಾಗುತ್ತವಾ ಅಥವಾ ರೈಸಿನಾ ಹಿಲ್ಸ್ ಗೆ ಹೋಗುತ್ತವಾ ಎಂಬುದು!