ಕೇಂದ್ರ ಸರ್ಕಾರ ನಿರ್ಲಕ್ಷ್ಯ: ಸಿಯಾಚಿನ್ ವೀರ ಯೋಧರಿಗೆ ದಿನಸಿ, ಬಟ್ಟೆ ಇಲ್ಲ
ನವದೆಹಲಿ, ಫೆಬ್ರವರಿ 04: ಭಾಷಣಗಳಲ್ಲಿ ಯೋಧರ ಬಗ್ಗೆ ಪುಂಖಾನು-ಪುಂಖವಾಗಿ ಮಾತನಾಡುವ ಕೇಂದ್ರ ಸರ್ಕಾರದ ಮಂದಿ ಯೋಧರ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ವರದಿಯೊಂದು ಬಿಡುಗಡೆ ಆಗಿದೆ.
ಸರ್ಕಾರದ ಭಾಗವೇ ಆಗಿರುವ ಸಿಎಜಿ (ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ನೀಡಿರುವ ವರದಿ ಪ್ರಕಾರ, ಭಾರತದ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ಕ್ಲಿಷ್ಟಕರ ಪ್ರದೇಶ ಸಿಯಾಚಿನ್, ಲಡಾಕ್ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸೂಕ್ತ ಮೂಲಸೌಕರ್ಯವನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ.
ಸಿಯಾಚಿನ್ ಮೃತ್ಯುಕೂಪದ ಬದಲು ಮಿಲಿಟರಿ ಮುಕ್ತ ತಾಣವಾಗಲಿ
ಸಿಯಾಚಿನ್ ಯೋಧರಿಗೆ ಸೂಕ್ತವಾಗಿ ರೇಷನ್ ಸರಬರಾಜು ಮಾಡಲಾಗುತ್ತಿಲ್ಲ. ಬೆನ್ನುಮೂಳೆಯನ್ನು ಮುರಿಯುವ ಚಳಿ ಇರುವ ಪ್ರದೇಶದಲ್ಲಿ ಸೇವೆ ಮಾಡುತ್ತಿರುವ ಅವರಿಗೆ ಸೂಕ್ತವಾದ ಬಟ್ಟೆಗಳನ್ನು ಬೂಟುಗಳನ್ನು ಒದಗಿಸಲಾಗಿಲ್ಲ ಎಂದು ಸಿಎಜಿ ಲೋಕಸಭೆ ಗೆ ವರದಿ ಸಲ್ಲಿಸಿದೆ.
ಹಿಮದಲ್ಲಿ ಬಳಸುವ ಕನ್ನಡಕಗಳು ಇಲ್ಲ
ಲಡಾಕ್ ಮತ್ತು ಸಿಯಾಚಿನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರಿಗೆ ಹಿಮದಲ್ಲಿ ನೋಡಲು ಬಳಸುವ ಕನ್ನಡಕಗಳು, ಚಳಿಗೆ ರಕ್ಷಣೆ ಒದಗಿಸುವ ಉಡುಗೆಗಳನ್ನು ಸೂಕ್ತ ಪ್ರಮಾಣದಲ್ಲಿ ನೀಡಲಾಗಿಲ್ಲ. ವಿಶೇಷ ದಿನಸಿಯನ್ನೂ ಸಹ ನೀಡಲಾಗುತ್ತಿಲ್ಲ. ಇದರಿಂದಾಗಿ ಅವರ ದಿನವಹಿ ಕ್ಯಾಲರಿ ಪ್ರಮಾಣ 82% ನಷ್ಟು ಕಡಿಮೆ ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.
ಸೈನಿಕರಿಗೆ ನಿರ್ಮಿಸಿರುವ ಮನೆ-ಶಿಬಿರಗಳು ಸೂಕ್ತವಾಗಿಲ್ಲ
ಅಷ್ಟೆ ಅಲ್ಲದೆ, ಎತ್ತರದ ಮತ್ತು ಪ್ರತಿಕೂಲ ಹವಾಮಾನದಲ್ಲಿ ಸೈನಿಕರಿಗೆ ವಾಸ್ತವ್ಯ ಹೂಡಲು ನಿರ್ಮಿಸಲಾದ ಮನೆಗಳು ಅಥವಾ ಶಿಬಿರಗಳು ವೈಜ್ಞಾನಿಕವಾಗಿಲ್ಲ. ಅವರಿಗೆ ಸೂಕ್ತ ಮನೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಲಾಗಿತ್ತು ಆದರೆ ಸೂಕ್ತವಾಗಿ ಬಳಕೆ ಆಗಿಲ್ಲವೆಂದು ಸಿಎಜಿ ಹೇಳಿದೆ.
ಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆ
ಕೆಲವು ವಸ್ತುಗಳ ದಾಸ್ತಾನು ಸ್ವಲ್ಪವೂ ಇಲ್ಲ
ಸಮುದ್ರ ಮಟ್ಟದಿಂದ 9000 ಅಡಿಗಳ ಎತ್ತರದಲ್ಲಿ ಕಾವಲು ಕಾಯುತ್ತಿರುವ ಸೇನೆಗೆ ಸರಿಯಾದ ಉಡುಗೆಗಳು, ಆಹಾರ ಇಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ. ಕೆಲವು ಅವಶ್ಯಕ ವಸ್ತುಗಳ ದಾಸ್ತಾನು ಸ್ವಲ್ಪವೂ ಇಲ್ಲ ಎಂದು ಸಿಎಜಿ ಹೇಳಿದೆ.
ಸೇನಾ ಅಧಿಕಾರಿಗಳೂ ಇದನ್ನು ಒಪ್ಪಿ ಪತ್ರ ಬರೆದಿದ್ದಾರೆ
ಸಿಎಜಿ ಗೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಸೇನಾ ಅಧಿಕಾರಿಗಳು, ಅನುದಾನದ ಕೊರತೆಯಿಂದಾಗಿ ಸೂಕ್ತ ಆಹಾರ, ಸುರಕ್ಷಿತ ವಸ್ತುಗಳು, ಉಡುಪು, ಬೂಟುಗಳನ್ನು ಸೈನಿಕರಿಗೆ ಪೂರೈಸಲು ಆಗಿಲ್ಲವೆಂದು ಕಾರಣ ನೀಡಿದ್ದಾರೆ.
4 ಲಕ್ಷ ಕೋಟಿ ಹಣ ನೀಡಿರುವ ಕೇಂದ್ರ
ಶನಿವಾರ ಮಂಡನೆಯಾದ ಬಜೆಟ್ನಲ್ಲಿ ಕೇಂದ್ರ ಸರ್ಕಾರವು 4 ಲಕ್ಷ ಕೋಟಿ ಹಣವನ್ನು ಸೇನೆಗಾಗಿ ಮೀಸಲಿಟ್ಟಿದೆ. ಕಳೆದ ಬಾರಿಯೂ ಬಹುತೇಕ ಇಷ್ಟೇ ಹಣವನ್ನು ನೀಡಲಾಗಿತ್ತು. ಆದರೂ ಸಹ ಸೈನಿಕರಿಗೆ ಸೂಖ್ತ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ವಿಫಲವಾಗಿದೆ. ನಿಗದಿಪಡಿಸಿದಷ್ಟೆ ಅನುದಾನ ಬಿಡುಗಡೆಗೊಳ್ಳದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.