ಮಧ್ಯಪ್ರದೇಶ: ಸಣ್ಣ ಪುಟ್ಟ ಪಕ್ಷಗಳ ಬಗ್ಗೆ ಕಾಂಗ್ರೆಸ್ -ಬಿಜೆಪಿಗೆ ಅಳುಕು
ಭೋಪಾಲ್, ನವೆಂಬರ್ 09: ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆಯಿದೆ. ಆದರೆ, ದೊಡ್ದ ಪಕ್ಷಗಳ ಲೆಕ್ಕಾಚಾರವನ್ನು ಅಲುಗಾಡುವ ಶಕ್ತಿ ಸಣ್ಣ ಪುಟ್ಟ ಪಕ್ಷಗಳಿಗಿದ್ದು, ಚುನಾವಣಾ ಫಲಿತಾಂಶದಲ್ಲಿ ಭಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಬುಡಕಟ್ಟು ಜನಾಂಗದ ಸಮಸ್ಯೆಗಳನ್ನು ಆಲಿಸಲು ಹುಟ್ಟುಕೊಂಡಿರುವ ಜೈ ಆದಿವಾಸಿ ಯುವ ಶಕ್ತಿ(ಜೆಎವೈಎಸ್) ಪಕ್ಷವು ನೇರವಾಗಿ ಕಾಂಗ್ರೆಸ್ ಗೆ ಸವಾಲಾಗಿದೆ.
ಮಾಲ್ವಾ -ನಿಮಾರ್ ಪ್ರದೇಶದಲ್ಲಿ ಜೆಎವೈಎಸ್ ಜತೆ ಕಾಂಗ್ರೆಸ್ ಹೇಗಾದರೂ ಮೈತ್ರಿ ಸಾಧಿಸಲು ಯತ್ನಿಸಿ ವಿಫಲವಾಗಿದೆ. ಇದಲ್ಲದೆ, ಬುಡಕಟ್ಟು ಜನಾಂಗದ ನಾಯಕ ಕಾಂತಿಲಾಲ್ ಭೂರಿಯಾ ಅವರನ್ನು ಮುಂದಿಟ್ಟುಕೊಂಡು ಒಂದು ಸಮುದಾಯದ ಮತಗಳನ್ನು ಆಕರ್ಷಿಸುವ ಯೋಜನೆ ಹಾಕಿಕೊಂಡಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಧಾರ್ಮಿಕ, ಆಧಾತ್ಮ ಮುಖಂಡರ ಭೀತಿ!
ಹಾಗೆ ನೋಡಿದರೆ, ಮಾಲ್ವಾ -ನಿಮಾರ್ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿಟ್ಟುಕೊಂಡಿತ್ತು. ಆದರೆ, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ರೈತ ವಿರೋಧಿ ಧೋರಣೆ ಅನುಸರಿಸಿದ್ದು, ನಿರಂತರ ಹರತಾಳದಿಂದ ಆಡಳಿತ ವಿರೋಧಿ ಅಲೆ ಎದ್ದಿದೆ. ಈ ವಿಷಯ ಅರಿತ ಕಾಂಗ್ರೆಸ್, ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ.
ಬುಡಕಟ್ಟು ಜನಾಂಗದವರಿಗಾಗಿ ಪಕ್ಷ
ಜೆಎವೈಎಸ್ ಪಕ್ಷವು 80 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, 33 ಟಿಕೆಟ್ ಗಳನ್ನು ಬುಡಕಟ್ಟು ಜನಾಂಗದ ನಾಯಕರಲ್ಲದೆ ಇತರರಿಗೂ ನೀಡಲು ಮುಂದಾಗಿದೆ. ಈ ಮೂಲಕ 40 ಸಾವಿರಕ್ಕೂ ಅಧಿಕ ಜನಸಂಖ್ಯೆಯ ಸಮುದಾಯದ ಮತಗಳನ್ನು ಸೆಳೆಯಲು ತಂತ್ರ ಹೂಡಿದೆ.
ಗೊಂಡ್ವಾನಾ ಗಣತಂತ್ರ ಪಾರ್ಟಿ ಕೂಡಾ 90 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ವಿರುದ್ಧ ನೇರ ಯುದ್ಧಗಿಳಿದಿದೆ.ಬಿಜೆಪಿಯನ್ನು ಸೋಲಿಸಲು ಯಾರೊಂದಿಗೆ ಬೇಕಾದರೂ ಮೈತ್ರಿಗೆ ಸಿದ್ಧ ಎಂದು ಘೋಷಿಸಿಕೊಂಡಿದೆ.
ಬಿಜೆಪಿ ವಿರುದ್ಧ ಧಾರ್ಮಿಕ ಮುಖಂಡ ಪಾರ್ಟಿ
ಸಂಜಿ ವಿರಾಸತ್ ಪಾರ್ಟಿ ಹೆಸರಿನಲ್ಲಿ 50 ಅಭ್ಯರ್ಥಿಗಳಿಗೆ ಹಿಂದೂ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶರ್ಮ, ಎಲ್ಲಾ ಜಾತಿ, ಮತ, ಪಂಥಗಳ ಆರ್ಥಿಕ ಸ್ತರದ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬ ಕಾರಣಕ್ಕೆ ಚುನಾವಣೆ ಕಣಕ್ಕಿಳಿದಿದ್ದೇವೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರವು ಭಾರತೀಯ ಸಂಸ್ಕೃತಿ, ಗೋ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಮೀಸಲಾತಿ ನೀತಿ ವಿರುದ್ಧ ಹೋರಾಟ
ಸಾಮಾನ್ಯ, ಪಿಚ್ಚಾಡಾ, ಅಲ್ಪಸಂಖ್ಯಾಕ್ ವರ್ಗ್ ಅಧಿಕಾರಿ ಕರ್ಮಚಾರಿ ಸಂಸ್ಥಾ( ಎಸ್ಎಪಿಎ ಕೆಎಸ್) ಸಂಘಟನೆಯು ಬಿಜೆಪಿ ಸರ್ಕಾರದ ಮೀಸಲಾತಿ ನೀತಿ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ಬ್ರಾಹ್ಮಣ, ರಜಪೂತ ಹಾಗೂ ಇನ್ನಿತರ ಮೀಸಲಾತಿ ಕೆಟಗೆರಿಯಿಂದ ಹೊರಗಿರುವವರೇ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಎಸ್ ಎ ಪಿಎಕೆಎಸ್ ಪಕ್ಷವು ಪ್ರಭಾವ ಬೀರುವ ನಿರೀಕ್ಷೆಯಿದೆ.
ದಲಿತ ಮತಕ್ಕಾಗಿ ಕಾಂಗ್ರೆಸ್-ಬಿಜೆಪಿ ಕಿತ್ತಾಟ
ದಲಿತ ಮತಗಳನ್ನು ನಂಬಿಕೊಂಡು ಕಣಕ್ಕಿಳಿದಿರುವ ಬಹುಜನ್ ಸಮಾಜ್ ಪಾರ್ಟಿಯು ಕಾಂಗ್ರೆಸ್ಸಿಗೆ ಸಿಗುವ ಮತಗಳ ವಿಭಜನೆ ಮಾಡುವ ಗುರಿ ಹೊಂದಿದೆ.
ಹಿಂದುಳಿದ ವರ್ಗದ ಸಿಎಂ ಹೊಂದಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೆಚ್ಚಿನ ತಂತ್ರಗಾರಿಕೆ ಮೂಲಕ ಬಿಜೆಪಿ ಹಾಗೂ ದಲಿತ ಪಾರ್ಟಿಯಿಂದ ಮತಗಳನ್ನು ಸೆಳೆಯಬೇಕಿದೆ.
50 ಕ್ಷೇತ್ರಗಳಲ್ಲಿ 1000 ರಿಂದ 2000 ಮತಗಳ ಅಂತರದ ಸೋಲು ಗೆಲುವಿನ ಲೆಕ್ಕಾಚಾರವಿದ್ದು, ಇಂಥ ಕ್ಷೇತ್ರಗಳಲ್ಲಿ ಬಹುಜನ್ ಸಮಾಜ್ ಪಾರ್ಟಿ ಮಹತ್ವದ ಪಾತ್ರವಹಿಸಲಿದೆ.