ಎಸ್ಸೆಂ ಕೃಷ್ಣ ಅವರಿಗೆ ಬಿಜೆಪಿಯಿಂದ ಭರ್ಜರಿ ಆಫರ್
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವುದಕ್ಕೂ ಮುನ್ನವೇ ಭರ್ಜರಿ ಆಫರ್ ಸಿಕ್ಕಿದೆ. ತಮಿಳುನಾಡಿನ ರಾಜ್ಯಪಾಲರಾಗುವ ಅವಕಾಶ ಕೂಡಿ ಬಂದಿದೆ.
ಬೆಂಗಳೂರು, ಮಾರ್ಚ್ ೧೪: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುವುದಕ್ಕೂ ಮುನ್ನವೇ ಭರ್ಜರಿ ಆಫರ್ ಸಿಕ್ಕಿದೆ. ತಮಿಳುನಾಡಿನ ರಾಜ್ಯಪಾಲರಾಗುವ ಅವಕಾಶ ಕೂಡಿ ಬಂದಿದೆ. ಜನವರಿ ತಿಂಗಳಲ್ಲಿ ಕಾಂಗ್ರೆಸ್ ತೊರೆದ ಕೃಷ್ಣ ಅವರು ಬುಧವಾರದಂದು ಬಿಜೆಪಿ ಸೇರಲಿದ್ದಾರೆ.
ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ ಓಲೈಕೆ, ಬೆಂಗಳೂರಿನ ಮೇಲ್ವರ್ಗದ ಜನತೆಯನ್ನು ಸೆಳೆಯಲು ಎಸ್ಸೆಂ ಕೃಷ್ಣ ಅವರ ರಾಜಕೀಯ ಅನುಭವವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದರ ಜತೆಗೆ ತಮಿಳುನಾಡಿನ ರಾಜಕೀಯ ಸ್ಥಿತ್ಯಂತರದಲ್ಲಿ ಅಲ್ಲಿನ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಸ್ಸೆಂ ಕೃಷ್ಣ ಅವರಿಗೆ ತಮಿಳುನಾಡಿನ ರಾಜ್ಯಪಾಲ ಹುದ್ದೆಯನ್ನು ನೀಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಡುವ ಸಾಧ್ಯತೆಯಿದೆ.
ಎಸ್ಸೆಂ ಕೃಷ್ಣ ಅವರ ಹೆಸರಲ್ಲದೆ ಗುಜರಾತಿನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಹೆಸರು ಕೂಡಾ ಕೇಳಿ ಬಂದಿದೆ. ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರಿಗೆ ಈ ಮುಂಚೆ ತಮಿಳುನಾಡಿನ ರಾಜ್ಯಪಾಲರಾಗುವ ಅವಕಾಶ ಒದಗಿ ಬಂದಿತ್ತು. ಆದರೆ, ತಮಿಳುನಾಡಿನಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.