ಹಳೆಯ ಬಾವಿಯಲ್ಲಿ 282 ಸೈನಿಕರ ತಲೆಬುರುಡೆ ಪತ್ತೆ
ಇತ್ತೀಚೆಗೆ ಶಹೀದ್ ವಾಲಾ ಕುಆ (ಹುತಾತ್ಮರ ಬಾವಿ)ದಲ್ಲಿ ಹೂಳೆತ್ತುವ ಕಾರ್ಯ ನಡೆದಿತ್ತು. ಮೂರು ದಿನಗಳ ಬಳಿಕ ಮೊನ್ನೆ ಶನಿವಾರ ಈ ತಲೆಬುರುಡೆಗಳು ದೊರೆತಿವೆ.
ಸ್ವಾತಂತ್ರ್ಯ ಪೂರ್ವ ಸಂದರ್ಭದಲ್ಲಿ 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ವೇಳೆ ಇವರೆಲ್ಲಾ ಹತ್ಯತೆಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೀಗ ತಲೆಬುರುಡೆಗಳನ್ನು ಬಾವಿಯಿಂದ ಹೊರತೆಗೆದು ಗಾಜಿನ ಬಾಕ್ಸ್ ಗಳಲ್ಲಿ ಸಂಗ್ರಹಿಸಲಿಡಲಾಗಿದೆ. ಸಾರ್ವಜನಿಕರು ಹುತಾತ್ಮಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
157 ವರ್ಷಗಳ ಕಾಲಾಂತರದಲ್ಲಿ ಹುತಾತ್ಮ ಜನರ ತಲೆಬುರುಡೆಗಳು, ಮೂಳೆಗಳು ಮುರಿದುಬಿದ್ದಿದ್ದವು ಎಂದು ಶಹೀದ್ ಗಂಜ್ ಗುರುದ್ವಾರದ ಅಧ್ಯಕ್ಷ ಅಮರಜಿತ್ ಸಿಂಗ್ ಸರ್ಕಾರಿಯಾ ತಿಳಿಸಿದ್ದಾರೆ.
ಅಜನಾಲಾ ಉಪವಲಯದ ಮ್ಯಾಜಿಸ್ಟ್ರೇಟ್ ಸುರಿಂದರ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಾತತ್ವ ಇಲಾಖೆಯ ಜತೆ ಮಾತುಕತೆ ನಡೆಸಿ, ಸ್ಥಳ ಮತ್ತು ಅಲ್ಲಿ ದೊರೆತಿರುವ ತಲೆಬುರುಡೆಗಳನ್ನು ಸಂರಕ್ಷಿಸಿಡುವಂತೆ ಸೂಚಿಸಿದ್ದಾರೆ.
ಇವು ಲಾಹೋರ್ ಬಳಿ ಮಿಯಾ ಮಿರ್ ಬಳಿ ನಿಯೋಜಿಸಲಾಗಿದ್ದ 26ನೆಯ ನೇಟಿವ್ ಇನ್ಯ್ಫಾಂಟ್ರಿ ರೆಜಿಮೆಂಟ್ ಗೆ ಸೇರಿದ್ದ ಭಾರತೀಯ ಯೋಧರ ತಲೆಬುರುಡೆಗಳು ಎಂದು ಅಂದಾಜಿಸಲಾಗಿದೆ. 1857ರ ಸಿಪಾಯಿ ದಂಗೆ ಸಂದರ್ಭದಲ್ಲಿ ಇವರ ಹತ್ಯೆ ನಡೆದಿರಬಹುದು ಎನ್ನಲಾಗಿದೆ. 1857ರ ಜುಲೈ 30ರಂದು ಪರಕಾಶ್ ಪಾಂಡೆ ನೇತೃತ್ವದ ಈ ಭಾರತೀಯ ಯೋಧರು ಬ್ರಿಟಿಷ್ ಮೇಜರ್ ಒಬ್ಬನನ್ನು ಹತ್ಯೆ ಮಾಡಿ, ಅಜನಾಲಾ ವಲಯದತ್ತ ಮುನ್ನುಗ್ಗಿದ್ದರು. ಆ ವೇಳೆ, ದೊಡ್ಡ ಪ್ರಮಾಣದಲ್ಲಿದ್ದ ಬ್ರಿಟಿಷ್ ಸೈನಿಕರು ಇವರನ್ನೆಲ್ಲಾ ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದರು.
ಅಜನಾಲಾದಲ್ಲಿ ಒಂದು ಕೊಠಡಿಯಲ್ಲಿ ಸುಮಾರು ಭಾರತೀಯ ಯೋಧರನ್ನು ಕೂಡಿಹಾಕಲಾಗಿತ್ತು. ಅಲ್ಲಿ ಸರಿಯಾಗಿ ಗಾಳಿ ಬೆಳಕು ಇಲ್ಲದೆ ಇವರೆಲ್ಲಾ ಉಸಿರುಗಟ್ಟಿ ಸತ್ತಿದ್ದರು. ಉಳಿದ 282 ಯೋಧರ ಮೇಲೆ ಗುಂಡಿನ ಮಳೆಗರೆದು ಸಾಯಿಸಲಾಗಿತ್ತು. ಮೃತರರನ್ನು ಕಾಲಿಯಾ ವಾಲಾ ಕುಆದಲ್ಲಿ (ಕಪ್ಪು ಬಾವಿ) ಎಳೆದುತಂದು ಹಾಕಲಾಗಿತ್ತು. ಕಾಲಾಂತರದಲ್ಲಿ ಸ್ಥಳೀಯ ಗುರುದ್ವಾರ ಆಡಳಿತವು ಬಾವಿಯ ಹೆಸರನ್ನು ಶಹೀದ್ ವಾಲಾ ಕುಆ (ಹುತಾತ್ಮರ ಬಾವಿ) ಎಂದು ಹೆಸರಿಸಿತು.
ಈಗ ದೊರೆತಿರುವ ತಲೆಬುರುಡೆಗಳನ್ನು ಸಂರಕ್ಷಿಸಿ, ಸೇನಾ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯಸಂಸ್ಕಾರ ಮಾಡಬೇಕು. ಇವ ಜ್ಞಾಪಕಾರ್ಥವಾಗಿ ಒಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಇತಿಹಾಸತಜ್ಞ ಸುರಿಂದರ್ ಕೊಚಾರ್ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈಗ ದೊರೆತಿರುವ ತಲೆಬುರುಡೆಗಳ ಜತೆಗೆ 1830-35ರ ಅವಧಿಯ 70 ನಾಣ್ಯಗಳು, 2 ಬ್ರಿಟಿಷ್ ಪದಕಗಳು, 3 ಚಿನ್ನದ ಉಂಡೆಗಳು ಮುಂತಾದವು ಸ್ಥಳದಲ್ಲಿ ಪತ್ತೆಯಾಗಿವೆ.