ಮಿಯಾಂ ಮಿಯಾಂ ಬಿರಿಯಾನಿ ಬೇಕೇ, ಇಲ್ಲೇ ಪಕ್ಕದ ಕರಾವಳಿಯಲ್ಲಿ ಸಿಗುತ್ತೆ!
ಕರಾವಳಿ ನಗರ ಚೆನ್ನೈನ ಪಲ್ಲಾವರಂ ಏರಿಯಾದಲ್ಲಿ ಕೆಲವು ನಿರ್ದಿಷ್ಟ ಗ್ರಾಹಕರಿಗೆ ಬೆಕ್ಕಿನ ಮಾಂಸದ ಬಿರಿಯಾನಿಯನ್ನು ಉಣಬಡಿಸಲಾಗುತ್ತಿದೆಯಂತೆ. ವಿಷಯ ತಿಳಿದ ಪೊಲೀಸರು ಹದಿನಾರು ಜೀವಂತ ಬೆಕ್ಕನ್ನು ರಕ್ಷಿಸಿದ್ದಾರೆ.
ಚೆನ್ನೈ, ಅ 30: ಚಿಕನ್, ಮಟನ್ ಬಿರಿಯಾನಿ ಕೇಳಿದ್ದೇವೆ, ಬೌಬೌ ಬಿರಿಯಾನಿಯೂ ಸುದ್ದಿ ಮಾಡಿದ್ದಾಗಿತ್ತು. ಈಗ ಬೆಕ್ಕನ್ನೂ ಬಿಡದ ಕೆಲವು ಭಕ್ಷಕರು ಬೆಕ್ಕಿನ ಮಾಂಸದ ಬಿರಿಯಾನಿಯ ರುಚಿಯನ್ನೂ ಸವಿದಿದ್ದಾಗಿದ್ದಂತೆ. ಅಕಟಕಟಾ..
ಹೌದು, ವಿಚಿತ್ರವಾದರೂ ಇದು ಸತ್ಯ. ಕರಾವಳಿ ನಗರ ಚೆನ್ನೈನ ಪಲ್ಲಾವರಂ ಏರಿಯಾದಲ್ಲಿ ಕೆಲವು ನಿರ್ದಿಷ್ಟ ಗ್ರಾಹಕರಿಗೆ ಬೆಕ್ಕಿನ ಮಾಂಸದ ಬಿರಿಯಾನಿಯನ್ನು ಉಣಬಡಿಸಲಾಗುತ್ತಿದೆಯಂತೆ. ವಿಷಯ ತಿಳಿದ ಪೊಲೀಸರು ಹದಿನಾರು ಜೀವಂತ ಬೆಕ್ಕನ್ನು ರಕ್ಷಿಸಿದ್ದಾರೆ.
ಪೀಪಲ್ಸ್ ಫಾರ್ ಅನಿಮಲ್ಸ್ ಸಂಘಟನೆಯ ಕಾರ್ಯಕರ್ತರು ನೀಡಿದ ದೂರಿನನ್ವಯ, ಕಾರ್ಯಪ್ರವೃತ್ತರಾದ ಪೊಲೀಸರು ಶುಕ್ರವಾರ (ಅ 28) ಬಡಪಾಯಿ ಬೆಕ್ಕುಗಳನ್ನು ರಕ್ಷಿಸಿ, ಆರೋಪಿಗಳನ್ನು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ನಾರಿಕೋರ್ವಾಸ್ ಎನ್ನುವ ಸಮುದಾಯದವರು ಬಿರಿಯಾನಿ ತಯಾರಿಸಲು ಬೆಕ್ಕಿನ ಮಾಂಸವನ್ನು ಪಲ್ಲಾವರಂ ಏರಿಯಾದ ರಸ್ತೆಬದಿ ವ್ಯಾಪಾರಿಗಳಿಗೆ ನೀಡುತ್ತಿದ್ದರು ಎನ್ನುವ ವಿಷಯ ಪೊಲೀಸ್ ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.
ಪೀಪಲ್ಸ್ ಫಾರ್ ಅನಿಮಲ್ಸ್ ಸಂಘಟನೆಯ ಇಬ್ಬರು ಕಾರ್ಯಕರ್ತರು ನಾರಿಕೋರ್ವಾಸ್ ಸಮುದಾಯದ ಯುವಕರನ್ನು ಸಂಪರ್ಕಿಸಿ, ಹೇಗೆ ಬೆಕ್ಕನ್ನು ಕದ್ದುತಂದು ಅದರ ಮಾಂಸ ತೆಗೆದು ಬಿರಿಯಾನಿ ಅಂಗಡಿಗೆ ಮಾರಾಟ ಮಾಡಲಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಂಡಿದ್ದಾರೆ.
ಆ ಸಮುದಾಯದ ಯುವಕರು ನೀಡಿದ ಮಾಹಿತಿಯನ್ನು ವಿಡಿಯೋ ಫುಟೇಜ್ ಸಹಿತ ಪಲ್ಲಾವರಂ ಪೊಲೀಸರಿಗೆ ಸಂಘಟನೆಯವರು ದೂರು ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಈ ಪ್ರದೇಶಕ್ಕೆ ಹೋದ ಪೊಲೀಸರು ಒಂದೇ ಬೋನಿನಲ್ಲಿ ಇಡಲಾಗಿದ್ದ 16 ಬೆಕ್ಕುಗಳನ್ನು ರಕ್ಷಿಸಿದ್ದಾರೆ.
ಬೆಕ್ಕು ಕಾಣೆಯಾಗಿದೆ ಎನ್ನುವ ದೂರು ಬಹಳಷ್ಟು ನಾಗರೀಕರಿಂದ ಬರುತ್ತಿದ್ದವು. ಆರೋಪಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ವಿಚಾರಣೆ ನಡೆಸಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.